ಅನಿಲ್ ಕುಂಬ್ಳೆ ಕ್ರಿಕೆಟ್ ಆಟವಾಡ್ತಿದ್ದ ಮೈದಾನ ಬಂದ್ಗೆ ಬಿಡಿಎ ಹುನ್ನಾರ!
ಬೆಂಗಳೂರು, ಆಗಷ್ಟ್01: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಹೆಮ್ಮೆಯ ಕ್ರಿಕೆಟಿಗ ಕನ್ನಡಿಗ ಅನೀಲ್ ಕುಂಬ್ಳೆ ಆಡುತ್ತಿದ್ದ ಆಟದ ಮೈದಾನವದು. ಬಿಡಿಎ ಸುಪರ್ದಿಯಲ್ಲಿರುವ ಈ ಮೈದಾನದಲ್ಲಿ, ಸಾಕಷ್ಟು ಕ್ರೀಡಾ ಚಟುವಟಿಕೆಗಳು ನಡೆಯುತ್ತೆ. ನಮ್ಮಿಂದ ಅಭಿವೃದ್ಧಿ ಮಾಡೋಕೆ ಆಗ್ತಿಲ್ಲ ಅಂತ ಬಿಡಿಎ ಕೆಂಗೇರಿ ಉಪನಗರದಲ್ಲಿರುವ ಗಣೇಶ ಆಟದ ಮೈದಾನ ಜಾಗವನ್ನ ಪಾಲಿಕೆಗೆ ಹಸ್ತಾಂತರ ಮಾಡಿ, ಆಟದ ಮೈದಾನವನ್ನ ಬಂದ್ ಮಾಡಲು ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಕ್ಕಳಿಗೆ ಉಳಿದಿರುವುದು ಕೆಲವೇ ಕೆಲವು ಆಟದ ಮೈದಾನಗಳು. ನಾನಾ ಅಭಿವೃದ್ದಿಯ ನೆಪದಲ್ಲಿ ಹೀಗೆ ಆಟದ ಮೈದಾನಗಳನ್ನು ಮುಚ್ಚಿಹಾಕಲು ಪ್ರಯತ್ನವನ್ನು ಮಾಡುತ್ತಿದ್ದರೆ ಮಕ್ಕಳು ಆಟವನ್ನು ಆಡುವುದಾದರು ಎಲ್ಲಿ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಮಕ್ಕಳು ಆಟವಾಡುತ್ತ ಬೆಳೆದರೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸದೃಢವಾಗಲು ಸಾಧ್ಯವಾಗಲಿದೆ.
ಮಕ್ಕಳು ನೆಮ್ಮದಿಯಾಗಿ ಆಟವನ್ನು ಆಡುವ ಮೈದಾನವನ್ನು ತಾನೂ ನಿರ್ವಹಣೆಯನ್ನು ಮಾಡಲು ಸಾಧ್ಯವಾಗುತ್ತಿದ್ದ ಎಂದು ಹೇಳಿ ಬಿಡಿಎ ಬಿಬಿಎಂಪಿಗೆ ಮೈದಾನವನ್ನು ಹಸ್ತಾಂತರಿಸಲು ಮುಂದಾಗಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳು ಆಟವಾಡಲು ಈ ಮೈದಾನದ ಅವಶ್ಯಕತೆಯಿದ್ದು ಈಗ ಯಾವ ಸ್ಥಿತಿಯಲ್ಲಿದೆಯೋ ಹಾಗೆಯೇ ಮೈದಾನವನ್ನು ಉಳಿಸಬೇಕು ಎನ್ನಲಾಗುತ್ತಿದೆ.

ಕಮರ್ಶಿಯಲ್ ಮಳಿಗೆಗಳ ಓಪನ್ ಗೆ ಸಿದ್ಧತೆ!
ಕೆಂಗೇರಿ ಉಪನಗರದಲ್ಲಿರುವ ಮೈದಾನದ ಹೆಸರು ಗಣೇಶ ಆಟದ ಮೈದಾನ. ಮೈದಾನ ಒಂದು ಕಾಲು ಎಕರೆ ವಿಸ್ತೀರ್ಣವನ್ನ ಹೊಂದಿದೆ. ಇದೇ ಮೈದಾನದಲ್ಲಿ ಭಾರತ ತಂಡ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ, ಆರ್ ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದಾಗ, ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಇದು ಬಿಡಿಎಯ ಸ್ವತ್ತಾಗಿದೆ. ನಮ್ಮಿಂದ ಈ ಮೈದಾನವನ್ನ ಅಭಿವೃದ್ಧಿ ಮಾಡೋಕೆ ಆಗ್ತಿಲ್ಲ ಅಂತ ಬಿಬಿಎಂಪಿಗೆ ಹಸ್ತಾಂತರ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಮೈದಾನವನ್ನು ಮುಚ್ಚಿ ಕಮರ್ಶಿಯಲ್ ಮಳಿಗೆಗಳ ಓಪನ್ ಗೆ ಸಿದ್ಧತೆ ಮಾಡಲಾಗುತ್ತಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೋಟಿ ಕೋಟಿ ಹಣದ ಮೇಲೆ ಬಿಡಿಎ ಕಣ್ಣು
ಆಟದ ಮೈದಾನವನ್ನು ಕಮರ್ಶಿಯಲ್ ಮಳಿಗೆಗಳ ಓಪನ್ ಗೆ ಯೋಜನೆ ಮಾಡಿದ್ದು. ವರ್ಷಕ್ಕೆ ಒಂದು ಕೋಟಿ, 61 ಲಕ್ಷ, 10 ವರ್ಷಕ್ಕೆ 9 ಕೋಟಿ ರೂಪಾಯಿಯಂತೆ ಬಿಬಿಎಂಪಿ ಲೀಸ್ ಕೊಡಲು ನಿರ್ಧರಿಸಿದೆ. ಅದು ಬಿಡಿಎ ಆ್ಯಕ್ಟ್ 1989ರ, ನಾಗರೀಕ ಸೌಲಭ್ಯ ನಿವೇಶನ ಅಂತ. ಅಂದರೆ, ಖಾಸಗಿ ಕಾಂಪ್ಲೆಕ್ಸ್ ಗಳನ್ನು ಶುರು ಮಾಡಬಹುದೆಂದು. ಕಮರ್ಶಿಯಲ್ ಆ್ಯಕ್ಟಿವಿಟಿವ್ಸ್ ಶುರುವಾದರೇ, ಮೈದಾನವನ್ನ ಮುಚ್ಚಿ ಹಾಕಲಾಗುತ್ತೆ. ಹೀಗಾಗಿ ನಾವು ಮೈದಾನವನ್ನ ಬಿಟ್ಟುಕೊಡಲ್ಲ ಅಂತ ಸ್ಥಳೀಯರು ಮೈದಾನ ಉಳಿವಿಗಾಗಿ ಹೋರಾಟ ಶುರುಮಾಡಿದ್ದಾರೆ. "ನಾವು ಆಟದ ಮೈದಾನವನ್ನು ಮುಚ್ಚುವುದಕ್ಕೆ ಬಿಡುವುದಿಲ್ಲ ಬಿಡಿಎ ಆಟದ ಮೈದಾನವನ್ನು ಯಾರಿಗೂ ವಹಿಸಬಾರದು ಈಗಿರುವಂತೆಯೇ ಆಟದ ಮೈದಾನ ಇರಬೇಕು" ಎಂದು ಸ್ಥಳೀಯ ನಿವಾಸಿ ಸುದರ್ಶನ್ ಆಗ್ರಹಿಸಿದ್ದಾರೆ.

ಸಚಿವ ಹಾಗೂ ಶಾಸಕ ಎಸ್ಟಿ ಸೋಮಶೇಖರ್ ಪತ್ರ
1971 ರಲ್ಲಿ ಕೆಂಗೇರಿ ಉಪನಗರ ಬಡಾವಣೆ ಅಂತ ಅನುಮೋದನೆಯಾದಾಗ, ಆಟದ ಮೈದಾನವಾಗಿ ಈ ಜಾಗವನ್ನ ಬಳಸಿಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ಆಟದ ಮೈದಾನವಾಗಿಯೇ ಉಳಿದಿದೆ. ಮೈದಾನ ಪಕ್ಕದಲ್ಲಿಯೇ ಹೈಸ್ಕೂಲ್ ಇದೆ. ಅಲ್ಲಿನ ವಿದ್ಯಾರ್ಥಿಗಳು ಕೂಡ ಇದೇ ಮೈದಾನದಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗ್ತಾರೆ. ಇದು ಆಟದ ಮೈದಾನವಾಗಿಯೇ ಉಳಿಯಬೇಕೆಂದು ಸ್ಥಳೀಯ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಕೂಡ ಬಿಡಿಎಗೆ ಪತ್ರ ಬರೆದಿದ್ದಾರೆ. ಆದರೆ ಬಿಡಿಎ ಮಾತ್ರ ಪಾಲಿಕೆಗೆ ಹಸ್ತಾಂತರ ಮಾಡಲು ಸಿದ್ಧವಾಗಿದೆ. ಇನ್ನೂ ಮೈದಾನದಲ್ಲಿ ಪ್ರತಿನಿತ್ಯ ಆಟೋ ಆಡುವ ಶಾಲಾ ಮಕ್ಕಳು ಕೂಡ , ನಮ್ಗೆ ಆಟದ ಮೈದಾನ ಬೇಕು ಅಂತ ಆಗ್ರಹಿಸುತ್ತಿದ್ದಾರೆ.

ನ್ಯಾಯಾಲಯದ ಮೆಟ್ಟಿಲೇರಲು ಸಿದ್ದ ಎಂದ ಸ್ಥಳೀಯರು
ಸುಮಾರು ವರ್ಷಗಳಿಂದ ಬಿಡಿಎ ಅಧೀನದಲ್ಲಿ ಆಟದ ಮೈದಾನವಾಗಿ ಉಳಿದಿದ್ದ ಈ ಮೈದಾನ, ಆಟದ ಮೈದಾನವಾಗಿಯೇ ಇರಬೇಕೆಂದು ಸ್ಥಳೀಯರು ಬಿಗಿಪಟ್ಟು ಹಿಡಿದಿದ್ದಾರೆ. ಬಿಡಿಎ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸ್ಥಳೀಯ ಮುಖಂಡರು ಮುಂದಾಗಿದ್ದಾರೆ. ಅನಿಲ್ ಕುಂಬ್ಳೆ ಆಟವಾಡಿದ್ದ ಸವಿ ನೆನಪಿನೊಂದಿಗೆ ಮಕ್ಕಳಿಗೆ ಅನುಕೂಲವಾಗುತ್ತಿರುವ ಆಟದ ಮೈದಾನವನ್ನು ಮುಚ್ಚದೇ ಮಕ್ಕಳಿಗಾಗಿ ಉಳಿಸೋದು ಉತ್ತಮ.












Click it and Unblock the Notifications