ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ
ಬೆಂಗಳೂರು, ಸೆಪ್ಟೆಂಬರ್ 23 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೆ.25ರಂದು 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಿದೆ. ಲಾಟರಿ ಮೂಲಕ ಫಲಾನುಭವಿಗಳನ್ನು ಹಂಚಿಕೆ ಮಾಡಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೆ.25ರಂದು ಬೆಳಗ್ಗೆ 11.30ಕ್ಕೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆಗೆ ಚಾಲನೆ ನೀಡಲಿದ್ದಾರೆ. ಕೆಂಪೇಗೌಡ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ 5 ಸಾವಿರ ನಿವೇಶನ ಹಂಚಿಕೆ ಮಾಡಲಾಗುತ್ತದೆ.
ತಾತ್ಕಾಲಿಕ ಪಟ್ಟಿಯಲ್ಲಿರುವ 600 ಚದರ ಅಡಿ ಹಾಗೂ 1200 ಚದರ ಅಡಿ ವಿಸ್ತೀರ್ಣದ ನಿವೇಶಗಳ ಹಂಚಿಕೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಉಳಿದಂತೆ ಬಹತೇಕರಿಗೆ ನಿವೇಶ ಸಿಗಲಿದೆ.

ನಿವೇಶನಗಳು ಹಂಚಿಕೆಯಾದ 60 ದಿನದವೊಳಗೆ ಫಲಾನುಭವಿಗಳು ಪೂರ್ಣಮೊತ್ತವನ್ನು ಬಿಡಿಗೆ ಪಾವತಿ ಮಾಡಬೇಕು. ಅಷ್ಟರೊಳಗೆ ಹಣ ಕಟ್ಟಲು ಸಾಧ್ಯವಾಗದಿದ್ದರೆ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಶೇ 18ರಷ್ಟು ಬಡ್ಡಿಮೊತ್ತವನ್ನು ಪಾವತಿಸಬೇಕು.
ಈ ಎರಡೂ ಅವಧಿಯಲ್ಲಿ ಫಲಾನುಭವಿಗಳು ಹಣ ಪಾವತಿ ಮಾಡಲು ವಿಫಲವಾದರೆ 90 ದಿನಗಳಲ್ಲಿ ಶೇ 21ರಷ್ಟು ಬಡ್ಡಿಯೊಂದಿಗೆ ಹಣ ಪಾವತಿ ಮಾಡಬೇಕು. ಇಲ್ಲವಾದಲ್ಲಿ ನಿವೇಶನ ಹಂಚಿಕೆ ರದ್ದುಪಡಿಸಲು ಬಿಡಿಎಗೆ ಅಧಿಕಾರವಿದೆ.
ಈ ಹಂಚಿಕೆ ಕಾರ್ಯ ಪೂರ್ಣಗೊಂಡ ಬಳಿಕ ನಿವೇಶನ ನಿಗದ ಜನರ ಖಾತೆಗೆ ಆರಂಭಿಕ ಠೇವಣಿ ಮೊತ್ತವನ್ನು ಬಿಡಿಎ ಜಮಾ ಮಾಡಲಿದೆ. ಕೆಂಪೇಗೌಡ ಬಡಾವಣೆಯಲ್ಲಿ ಸುಮಾರು 25 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ನಿರ್ಧರಿಸಿದೆ.
ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಬಿಡಿಎ ನಿರ್ಮಿಸಿದ್ದು, ಸುಮಾರು 25 ಸಾವಿರ ನಿವೇಶಗಳನ್ನು ಬಡಾವಣೆಯಲ್ಲಿ ನಿರ್ಮಿಸುವ ಗುರಿ ಇದೆ.












Click it and Unblock the Notifications