20 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ
ಬೆಂಗಳೂರು ಜೂನ್ 8: ದಿನೇ ದಿನೆ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಜಾಗಗಳ ಒತ್ತುವರಿ ನಡೆಯುತ್ತಲೇ ಇದೆ. ಇದೀಗ ಅಂತಹ ಸುಮಾರು 20 ಕೋಟಿ ರೂ. ಮೌಲ್ಯದ ಖಾಲಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಶೆಡ್ ಮತ್ತು ಕಾಪೌಂಡ್ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳ ನೇತೃತ್ವದ ತಂಡ ಬುಧವಾರ ತೆರವುಗೊಳಿಸಿದೆ. ಎರಡು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.
ಬೆಂಗಳೂರಿನ ಇಂದಿರಾನಗರದ 2ನೇ ಹಂತದ ಬಿನ್ನಮಂಗಲದಲ್ಲಿ ಬಿಡಿಎ ವ್ಯಾಪ್ತಿಗೆ ಸೇರಿದ್ದ ಸರ್ವೇ ನಂಬರ್ 13ರಲ್ಲಿನ ಸುಮಾರು 11ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿದಾರರಿಗೆ ಈ ಹಿಂದೆಯೇ ಬಿಡಿಎ ಅಧಿಕಾರಿಗಳು ಎಚ್ಚರಿಕೆ ನೀಡಿ ಜಾಗ ತೆರವುಗೊಳಿಸವಂತೆ ಸೂಚಿಸಿದ್ದರು.
ಆದರೆ ಒತ್ತುವರಿದಾರರು ಎಚ್ಚೆತ್ತುಕೊಳ್ಳದೇ ಅಧಿಕಾರಿಗಳ ಸೂಚನೆ ನಿರ್ಲಕ್ಷಿಸಿದ್ದರು. ಅಲ್ಲದೇ ಸ್ಥಳದಲ್ಲಿ ಮೂರು ಶೆಡ್ ನಿರ್ಮಿಸಿಕೊಂಡಿದ್ದರು. ಸಾಲದೆಂಬಂತೆ ಬಿಡಿಎ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವೇಳೆ ನ್ಯಾಯಾಲಯ ಬಿಡಿಎ ಪರವಾಗಿ ತೀರ್ಪು ನೀಡಿತ್ತು.

ಈ ಕಾರಣದಿಂದ ಬಿಡಿಎ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್, ರವಿಕುಮಾರ್ ಮತ್ತು ಲಕ್ಷ್ಮಯ್ಯ ಹಾಗೂ ಕಾರ್ಯಪಾಲಕ ಅಭಿಯಂತರ ಮಹದೇವಗೌಡ ನೇತೃತ್ವದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ತಾತ್ಕಾಲಿಕ ಶೆಡ್ ತೆರವುಗೊಳಿಸಿ ಜಾಗವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಒತ್ತುವರಿ ಮಾಡಿಕೊಂಡಿದ್ದ 11ಗುಂಟೆ ಜಾಗದ ಒಟ್ಟು ಮೌಲ್ಯ ಸುಮಾರು 18 ಕೋಟಿ ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಕಾಪೌಂಡ್ ಜಾಗ ಬಿಡಿಎ ವಶಕ್ಕೆ: ಮತ್ತೊಂದು ಪ್ರಕರಣದಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ ಎಚ್ಎಎಲ್ 2ನೇ ಹಂತದಲ್ಲಿರುವ ಐಶಾರಾಮಿ ಹೋಟೆಲ್ ಲೀಲಾ ಪ್ಯಾಲೇಸ್ ಹಿಂಭಾಗ ಬಿಡಿಎಗೆ ಸೇರಿದ 1600 ಚದರ ಅಡಿ ಜಾಗವನ್ನು ಹೋಟೆಲ್ನವರು ಒತ್ತುವರಿ ಮಾಡಿಕೊಂಡಿದ್ದರು. ಆ ಸ್ಥಳದಲ್ಲಿ ಬೃಹತ್ ಕಾಪೌಂಡ್ ನಿರ್ಮಿಸಿಕೊಂಡಿದ್ದರು.
ಇದು ಬಿಡಿಎ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳು ಕಾಪೌಂಡ್ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಪ್ರಯೋಜನವಾಗದ ಪರಿಣಾಮ ಬುಧವಾರ ಅಧಿಕಾರಿಗಳ ತಂಡ ಜೆಸಿಬಿ ಮೂಲಕ ಕಾಪೌಂಡ್ ನೆಲಸಮಗೊಳಿಸಿ ಜಾಗವನ್ನು ತನ್ನ ವಶಕ್ಕೆ ಪಡೆದಿದೆ. ಈ ಸ್ಥಳವು ಒಟ್ಟು 2 ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ಬಿಡಿಎ ಅಧ್ಯಕ್ಷ ಹೇಳಿದ್ದೇನು?: ಒತ್ತುವರಿ ಜಾಗ ಮರಳಿ ಬಿಡಿಎಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಅಧಿಕಾರಿಗಳ ಈ ಪ್ರಕ್ರಿಯೆಗೆ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಪ್ರತಿಕ್ರಿಸಿದ್ದು, "ಪ್ರಾಧಿಕಾರಕ್ಕೆ ಸೇರಿದ ಸ್ವತ್ತನ್ನು ಪತ್ತೆ ಮಾಡುವ ಕಾರ್ಯ ಮುಂದುವರಿದೆ. ಒತ್ತುವರಿ ಜಾಗಗಳನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ನಡೆಯುತ್ತಲೇ ಇರುತ್ತದೆ. ಹೀಗೆ ವಶಪಡಿಸಿಕೊಂಡ ಅಕ್ರಮ ಜಾಗಗಳನ್ನು ನಿಯಮಗಳನ್ವಯ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು. ಇದರಿಂದ ಬಿಡಿಎಗೂ ಹೆಚ್ಚಿನ ಆದಾಯ ಬರಲಿದೆ" ಎಂದು ಹೇಳಿದರು.












Click it and Unblock the Notifications