BDA: ಘರ್ಜಿಸಿದ ಬಿಡಿಎ ಜೆಸಿಬಿ: ₹24 ಕೋಟಿ ಮೌಲ್ಯದ ಆಸ್ತಿ ಮರಳಿ ಸುಪರ್ದಿಗೆ
ಬೆಂಗಳೂರು, ಏಪ್ರಿಲ್ 04: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಿದೆ. ಇತ್ತೀಚೆಗೆ ಬನಶಂಕರಿ 1ನೇ ಹಂತದಲ್ಲಿ ನಡೆದಿದ್ದ ಕಾರ್ಯಾಚರಣೆ ಬಳಿಕ ಶುಕ್ರವಾರ ನಗರದ ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆಯ 7ನೇ ಬ್ಲಾಕ್ನಲ್ಲಿ ರೂ. 24 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಗಿಡದಕೊನೇನಹಳ್ಳಿ ಗ್ರಾಮದ ಸರ್ವೆ ನಂ. 51 ರಲ್ಲಿನ 12 ಗುಂಟೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಶೆಡ್ ಅನ್ನು ತೆರವುಗೊಳಿಸಿ, ಸುಮಾರು 24 ಕೋಟಿ ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಈ ಕಾರ್ಯಾಚರಣೆ ನಡೆಯಿತು. ಮತ್ತೆ ಈ ಜಾಗದಲ್ಲಿ ಏನನ್ನು ನಿರ್ಮಿಸದಂತೆ ಎಚ್ಚರಿಕೆ ಕೊಡಲಾಗಿದೆ.
ಇತ್ತೀಚೆಗೆ ಇದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ತಂಡವು ಬನಶಂಕರಿ 1ನೇ ಹಂತ (ಹಾಲಿ 3ನೇ ಹಂತ)ದಲ್ಲಿ 1350 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಎ.ಸಿ. ಶೀಟ್ ಮನೆಯನ್ನು ತೆರವುಗೊಳಿಸಿತು. ಸುಮಾರು ರೂ. 1.75 ಕೋಟಿ ಬೆಲೆ ಬಾಳುವ ಪ್ರದೇಶವನ್ನು ವಶಕ್ಕೆ ಪಡೆಯಿತು.
ಯಾರೆಲ್ಲ ಸರ್ಕಾರಿ ಜಾಗವನ್ನು ಅತಿಕ್ರಮ ಮಾಡಿಕೊಂಡಿದ್ದಾರೋ ಅವರಿಗೆಲ್ಲ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಸಿ ಮುಟ್ಟಿಸುತ್ತಲೇ ಬಂದಿದೆ. ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಲಿದ್ದೇವೆ ಎಂದಿರುವ ಬಿಡಿಎ 1.75 ಮತ್ತು 24 ಕೋಟಿ ರೂಪಾಯಿ ಆಸ್ತಿಗಳನ್ನು ಮರಳಿ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬಿಡಿಎ ಅಧ್ಯಕ್ಷರಿಂದ 167 ನಿವೇಶನ ಹಂಚಿಕೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರು ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆದಾರರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಯಾದೃಚ್ಛಿಕೀಕರಣ ಮೂಲಕ ಸಾರ್ವಜನಿಕರ ಸಮ್ಮುಖದಲ್ಲಿ ಹಂಚಿಕೆ ಮಾಡಿದರು. ಈ ವೇಳೆ ಪ್ರಾಧಿಕಾರದ ಆಯುಕ್ತರು ಎನ್. ಜಯರಾಮ್, ಕಾರ್ಯದರ್ಶಿ ವೈ.ಬಿ. ಶಾಂತರಾಜು, ಹೆಚ್ಚುವರಿ ಕಾರ್ಯದರ್ಶಿ ಎನ್. ಮಂಜುನಾಥ್ ಸಾಕ್ಷಿಯಾದರು.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ವಿವಿಧ ಅಳತೆಯ ಒಟ್ಟು 167 ನಿವೇಶನಗಳನ್ನು ಹಂಚಲಾಗಿದೆ. 6x9 ಮೀಟರ್ ಅಳತೆಯ 18 ನಿವೇಶನಗಳು, 9x12 ಮೀಟರ್ ಅಳತೆಯ 133 ನಿವೇಶನ, 12x18 ಮೀ. ಅಳತೆಯ 11 ನಿವೇಶನಗಳು ಹಾಗೂ 15x24 ಮೀ. ಅಳತೆಯ 5 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿತ್ತು.
ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿ ಸ್ವಾಧೀನ ಪಡೆಯದ ಹಂಚಿಕೆದಾರರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನವನ್ನು ಪಡೆಯಲು ಇಚ್ಛಿಸಿದ್ದಲ್ಲಿ ನಿವೇಶನವನ್ನು ಹಂಚಿಕೆ ಮಾಡಲಾಗುವುದು. ಜನರು ಸಹಕರಿಸುವಂತೆ ಬಿಡಿಎ ತಿಳಿಸಿದೆ.












Click it and Unblock the Notifications