ಬಿಎಂಆರ್ ಸಿಎಲ್ ವಿರುದ್ಧ ಆರೋಪ ಮಾಡಿದ್ದ ರತ್ನಪ್ರಭಾ ವರ್ಗಾವಣೆ
ಬೆಂಗಳೂರು. ಆ.3 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎ.ರತ್ನಪ್ರಭಾ ಅವರನ್ನು ವರ್ಗಾವಣೆ ಮಾಡಲಾಗಿದೆ. ನಮ್ಮ ಮೆಟ್ರೋ ಯೋಜನೆಗೆ ಮರ ಕಡಿಯಲು ಅನುಮಮತಿ ನೀಡುವಂತೆ ಬಿಎಂಆರ್ ಸಿಎಲ್ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ರತ್ನಪ್ರಭಾ ಕೆಲವು ದಿನಗಳ ಹಿಂದೆ ಆರೋಪಿಸಿದ್ದರು.
ಬಿಬಿಎಂಪಿಯ ಅರಣ್ಯ ಘಟಕದ ಅರಣ್ಯ ಸಂರಕ್ಷಾಧಿಕಾರಿಯಾಗಿದ್ದ ಟಿ.ಎ.ರತ್ನಪ್ರಭಾ ಅವರನ್ನು ಮಾತೃ (ಅರಣ್ಯ) ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಆದರೆ, ವರ್ಗಾವಣೆ ಆದೇಶ ಪ್ರತಿ ಅವರ ಕೈ ಸೇರಿಲ್ಲ ಮತ್ತು ಬೇರೆ ಹುದ್ದೆಯನ್ನು ಅವರಿಗೆ ನೀಡಿಲ್ಲ.

'ಸಿಲ್ಕ್ ಬೋರ್ಡ್ ಬಳಿ 18 ಮತ್ತು ಬನ್ನೇರುಘಟ್ಟ ರಸ್ತೆ ಬಳಿ 10 ಮರಗಳನ್ನು ಕತ್ತರಿಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ' ಎಂದು ರತ್ನಪ್ರಭಾ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು.
'ರತ್ನಪ್ರಭಾ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಬಂದಿತ್ತು. ಆದ್ದರಿಂದ, ಮಾತೃ ಇಲಾಖೆಗೆ ಕಳುಹಿಸಲು ನಾನು ಸೂಚಿಸಿದ್ದೆ. ಜುಲೈ 29 ರಂದು ಅವರನ್ನು ಪಾಲಿಕೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ' ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಬಿಎಂಆರ್ ಸಿಎಲ್ ಒತ್ತಡ ಹೇರಿದ್ದನ್ನು ಬಹಿರಂಗಪಡಿಸಿದ್ದಕ್ಕೆ ರತ್ನಪ್ರಭಾ ಅವರನ್ನು ವರ್ಗಾವಣೆ ಮಾಡಲಾಗಿದೆ. ದಕ್ಷ ಅಧಿಕಾರಿಯಾಗಿದ್ದ ರತ್ನಪ್ರಭಾ ಅವರಿಗೆ ನಗರದಲ್ಲಿನ ಮರಗಳನ್ನು ಉಳಿಸುವ ಬಗ್ಗೆ ಅಪಾರವಾದ ಕಾಳಜಿ ಇತ್ತು ಎಂದು ಪರಿಸರ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications