ಅಂತೂ ಇಂತೂ ಮೈಸೂರು ರಸ್ತೆ ಫ್ಲೈಓವರ್ ಡಾಂಬರೀಕರಣ ಆರಂಭ
ಬೆಂಗಳೂರು, ಜೂನ್ 26: ನಗರದ ಸಿರ್ಸಿ ವೃತ್ತದಲ್ಲಿರುವ ಮೇಲುರಸ್ತೆ ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾಗಿದೆ ಅದರ ಡಾಂಬರೀಕರಣ ಕಾಮಗಾರಿಯನ್ನು ಬಿಬಿಎಂಪಿ ಇದೀಗ ಕೈಗೆತ್ತಿಕೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಕಳೆದ ವರ್ಷ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದರು.
ಅದಾದ ನಂತರ ಕೇವಲ ರಸ್ತೆಗಳಿಗೆ ತೇಪೆ ಹಾಕಲಾಗಿತ್ತಾದರೂ, ಮುಂಗಾರು ಪೂರ್ವ ಸುರಿದ ಭಾರಿ ಮಳೆಗೆ ಮತ್ತೆ ನರಕಸದೃಶ ಗುಂಡಿಗಳಾಗಿ ಮಾರ್ಪಟ್ಟಿದ್ದವು. ಇದೀಗಾದಕ್ಕೆ ಹೊಸದಾಗಿ ಡಾಂಬರ್ ಹಾಕಲಾಗುತ್ತಿದೆ. ಆದರೆ ಇದನ್ನು ಬಿಬಿಎಂಪಿ ಕೈಗೆತ್ತಿಕೊಳ್ಳದೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದೆ.
ಬಿಬಿಎಂಪಿ ರೂಪಿಸಿದ ಕ್ರಿಯಾಯೋಜನೆಯಂತೆ ಮರು ಡಾಂಬರೀಕರಣಕ್ಕೆ 4.3 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ಅಲ್ಲದೆ, ಮೇಲುರಸ್ತೆಯ 38,700 ಚ.ಮೀ ಡಾಂಬರನ್ನು ತೆಗೆದು ಹೊಸದಾಗಿ ಡಾಂಬರು ಹಾಕಲಾಗುತ್ತಿದೆ. ಸಿರ್ಸಿ ವೃತ್ತದ ಮೇಲುರಸ್ತೆ ದುರಸ್ತಿ ಕಾಮಗಾರಿಯನ್ನು 2014ರ ಜುಲೈನಲ್ಲಿ ಆರ್ ಟ್ರೇ ಇನ್ಫ್ರಾ ಲಿ.ಗೆ ನೀಡಲಾಗಿತ್ತು.

ಗುತ್ತಿಗೆ ಅವಧಿಯನ್ನು 2019ರ ಜು.24ರವರೆಗೆ ನಿಗದಿ ಮಾಡಲಾಗಿತ್ತು. ಮೊದಲಿಗೆ ದುರಸ್ತಿ ಮಾಡಿದ್ದ ಸಂಸ್ಥೆ, ಆನಂತರ ಸಮರ್ಪಕವಾಗಿ ದುರಸ್ತಿ ಮಾಡಿಲ್ಲ, ಗುತ್ತಿಗೆ ಪಡೆಯುವ ಅವಧಿಯಲ್ಲಿ ನೀಡಿದ್ದ ಭದ್ರತಾ ಠೇವಣಿಯನ್ನು ಬಿಬಿಎಂಪಿ ಮುಟ್ಟುಗೋಲು ಹಾಕಿಕೊಂಡಿದೆ.
ಇದೀಗ ಮಳೆ ಸ್ವಲ್ಪ ಕಡಿಮೆಯಾಗಿರುವ ಕಾರಣ ಡಾಂಬರೀಕರಣ ಕಾರ್ಯ ಕೈಗೆತ್ತಿಕೊಂಡಿದೆ.












Click it and Unblock the Notifications