BBMP Scam: ಬಿಬಿಎಂಪಿ ಪಿಎಂಸಿ ಟೆಂಡರ್; ಪ್ರತಿ ವರ್ಷ 100 ಕೋಟಿ ಲೂಟಿ!
ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಹಗರಣ, ಅವ್ಯವಹಾರಗಳಿಂದ ಸುದ್ದಿಯಾಗಿದ್ದೇ ಹೆಚ್ಚು.ಕೋಟ್ಯಾಂತರ ರೂಪಾಯಿ ಲೂಟಿಯಿಂದಲೇ ಬಿಬಿಎಂಪಿ ಸುದ್ದಿಯಾಗಿದೆ. ಈಗ ಅಧಿಕಾರಿಗಳದ್ದೇ ರಾಜ್ಯಭಾರ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆಯೇ ನಡೆದಿಲ್ಲ. ಹೀಗಾಗಿ, ಬಿಬಿಎಂಪಿಯಲ್ಲಿ ಅಧಿಕಾರಿಗಳು ನಡೆಸಿದ್ದೇ ಆಟ ಎನ್ನುವಂತಾಗಿದೆ. ಇದೀಗ ಪ್ರತಿ ವರ್ಷ ಬರೋಬ್ಬರಿ 100 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ವಿಚಾರ ಬಹಿರಂಗವಾಗಿದೆ.
ಪಾಲಿಕೆಯ (BBMP) ಮುಖ್ಯ ಎಂಜಿನಿಯರ್ಗಳು ಪಿಎಂಸಿ ಟೆಂಡರ್ ಹೆಸರಿನಲ್ಲಿ ಹಣವನ್ನು ಕೊಳ್ಳೆ ಹೊಡೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಿಎಂಸಿ (Project Management Consultancy) ಕೆಲಸವನ್ನು ಸಂಬಂಧಪಟ್ಟ ಆಯಾ ಮುಖ್ಯ ಎಂಜಿನಿಯರ್ಗಳೇ ಕಾನೂನು ಬಾಹಿರವಾಗಿ ನಿರ್ವಹಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಪಿಎಂಸಿ ಹೆಸರಿನಲ್ಲಿ ಬಿಬಿಎಂಪಿಯ ಅಧಿಕಾರಿಗಳು ಪ್ರತಿ ವರ್ಷ 100 ಕೋಟಿ ರೂಪಾಯಿಯಂತೆ ಅಕ್ರಮವಾಗಿ 500 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್. ಆರ್ ರಮೇಶ್ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಯಲ್ಲೂ ಈ ಅವ್ಯವಹಾರ ನಡೆದಿದೆ. ಬಿಬಿಎಂಪಿಯ ಪ್ರತಿ ಕಾಮಗಾರಿಯಲ್ಲೂ ಒಟ್ಟು ಮೊತ್ತದ ಶೇ. 02% ರಷ್ಟು ಮೊತ್ತವನ್ನು ಪಿಎಂಸಿ ಹೆಸರಿನಲ್ಲಿ ಕಡಿತ ಮಾಡಲಾಗುತ್ತಿದೆ.
ಈ ರೀತಿ ಮುಖ್ಯ ಎಂಜಿನಿಯರ್ಗಳು ಮಾಡುತ್ತಿದ್ದು, ಎಲ್ಲ ಪಿಎಂಸಿ ಕಾರ್ಯಗಳನ್ನು ತಮ್ಮ ಸಂಬಂಧಿಕರು, ಬೆಂಬಲಿಗರು ಹಾಗೂ ಹಿಂಬಾಲಕರ ಮೂಲಕವೇ ನಡೆಸುತ್ತಿದ್ದಾರೆ.
ಬಿಬಿಎಂಪಿಯ ಪ್ರತಿಯೊಂದು ಕಾಮಗಾರಿಯಲ್ಲಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿರುವ ಸಂಗತಿ ಇಲ್ಲಿಯವರೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳ ಗಮನಕ್ಕೆ ಏಕೆ ಬಂದಿಲ್ಲ ಎಂದು ಎನ್.ಆರ್ ರಮೇಶ್ ಪ್ರಶ್ನಿಸಿದ್ದಾರೆ.
ಪ್ರತಿಯೊಂದು ಕಾಮಗಾರಿಯ PMC Agency ಗಳನ್ನು ನಿಗದಿ ಮಾಡುವ ಸಂಬಂಧ ನಿಯಮಾನುಸಾರ Tender / Quotation ಗಳ ಮೂಲಕ ಅರ್ಹ ಸಂಸ್ಥೆಗಳಷ್ಟೇ ಈ ಪಿಎಂಸಿ ಕಾರ್ಯಗಳ ಕಾರ್ಯಾದೇಶ ಪತ್ರಗಳನ್ನು ನೀಡಬೇಕು.
ಪಿಎಂಸಿ ಮೊತ್ತ 5 ಲಕ್ಷಕ್ಕಿಂತಲೂ ಕಡಿಮೆ ಇದ್ದರೆ, Quotation ಮೂಲಕ ಮತ್ತು 5 ಲಕ್ಷಕ್ಕಿಂತಲೂ ಹೆಚ್ಚಿದ್ದರೆ Tender ಆಹ್ವಾನಿಸಿದ ನಂತರ ಅರ್ಹರಿಗೆ ಪಿಎಂಸಿ ಕಾರ್ಯಾದೇಶ ಪತ್ರ ನೀಡಬೇಕು ಎನ್ನುವ ನಿಯಮವಿದೆ.
ಅಕ್ರಮದಲ್ಲಿ ಬಿಬಿಎಂಪಿ ಮುಖ್ಯ ಎಂಜಿನಿಯರ್ಗಳು ಭಾಗಿ: ಆರೋಪ
ಈ ಅಕ್ರಮದಲ್ಲಿ ಬಿಬಿಎಂಪಿಯ ಮುಖ್ಯ ಎಂಜಿನಿಯರ್ಗಳೇ ಭಾಗಿಯಾಗಿರುವ ಗಂಭೀರ ದೂರು ಕೇಳಿಬಂದಿದೆ. ಕಾನೂನಿನ ರೀತಿಯಲ್ಲಿ ನಡೆಯಬೇಕಾದ ಈ ಪ್ರಕ್ರಿಯೆಯಲ್ಲಿ ಎಂಜಿನಿಯರ್ಗಳ ಸಂಬಂಧಿಕರು, ಹಿಂಬಾಲಕರು ಮತ್ತು ಅನುಯಾಯಿಗಳನ್ನು ಹೊರತುಪಡಿಸಿ ಬೇರೆ ಯಾವ Agency ಗಳೂ ಈ ರೀತಿಯ Tender / Quotation ಪ್ರಕ್ರಿಯೆಗಳಲ್ಲಿ ಭಾಗವಹಿಸದ ರೀತಿಯಲ್ಲಿ ಆಯಾ ಮುಖ್ಯ ಎಂಜಿನಿಯರ್ಗಳು ನೋಡಿಕೊಳ್ಳುತ್ತಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ವರ್ಷ ಒಂದಕ್ಕೆ ಕನಿಷ್ಠ ಎಂದರೂ 4 ಸಾವಿರದಿಂದ 5 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತದ ಅಭಿವೃದ್ಧಿ ಕೆಲಸ ಮತ್ತು ಕಾಮಗಾರಿಗಳು ನಡೆಯುತ್ತಿದೆ. 80 ಕೋಟಿಯಿಂದ 100 ಕೋಟಿ ರೂಪಾಯಿಗಳಷ್ಟು ಮೊತ್ತ ಕೇವಲ ಪಿಎಂಸಿ ಹೆಸರಿನಲ್ಲಿ ಸಂಬಂಧಪಟ್ಟ ಆಯಾ ಮುಖ್ಯ ಎಂಜಿನಿಯರ್ಗಳ ಜೇಬು ಸೇರುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿ ಬಿಲ್ಲುಗಳನ್ನು ಪಾವತಿ ಮಾಡುವಲ್ಲಿ ಹೆಚ್ಚಿನ ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ 2018ರಲ್ಲಿ ಪಾಲಿಕೆಯ ಅಂದಿನ ಆಯುಕ್ತರು ಪಿಎಂಸಿ ಪದ್ಧತಿಯನ್ನು ಜಾರಿಗೆ ತರಲು ನಿರ್ದೇಶನ ನೀಡಿದ್ದರು.
ಅಂದಿನ ಆಯುಕ್ತರ ಈ ಆದೇಶವು ಕೆಲವು ಭ್ರಷ್ಟ ಮುಖ್ಯ ಎಂಜಿನಿಯರ್ಗಳಿಗೆ ವರದಾನವಾಗಿ ಪರಿಣಮಿಸಿದ್ದು, ಅದನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಅಪಾರ ಪ್ರಮಾಣದ ಹಣವನ್ನು ಕಾನೂನು ಬಾಹಿರವಾಗಿ ಲೂಟಿ ಮಾಡುತ್ತಿದ್ದಾರೆ.
2018ರಲ್ಲಿ ಪಿಎಂಸಿ ಪದ್ಧತಿ ಜಾರಿಗೆ ತರುವ ಆದೇಶವನ್ನು ಆಯುಕ್ತರು ಜಾರಿ ಮಾಡಿದ ನಂತರ ಇದುವರೆವಿಗೆ ಅಂದಾಜು 500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಪಿಎಂಸಿ ಪದ್ಧತಿ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಇದರ ಪೈಕಿ ಶೇ. 90% ರಷ್ಟು ಹಣವನ್ನು ನಾಲ್ಕೈದು ಪ್ರಾಮಾಣಿಕ ಮುಖ್ಯ ಎಂಜಿನಿಯರ್ಗಳನ್ನು ಹೊರತುಪಡಿಸಿ ಉಳಿದೆಲ್ಲ ಮುಖ್ಯ ಎಂಜಿನಿಯರ್ಗಳು ತಮ್ಮ ಸಂಬಂಧಿಕರಿಗೆ, ಹಿಂಬಾಲಕರಿಗೆ, ಮತ್ತು ಅನುಯಾಯಿಗಳಿಗೆ ಕಾನೂನುಬಾಹಿರವಾಗಿ ಪದ್ಧತಿಯ ಟೆಂಡರ್ ಗಳನ್ನು ಮಾಡಿಕೊಡುವ ಮೂಲಕ ಲಪಟಾಯಿಸಿರುತ್ತಾರೆ.
ಈ ರೀತಿಯ ಕಾನೂನು ವಿರೋಧಿ ಕಾರ್ಯವನ್ನು ತಡೆಗಟ್ಟಬೇಕು. ಪಿಎಂಸಿ ವಿಷಯಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಟೆಂಡರ್ ಆಹ್ವಾನಿಸಿ ಅರ್ಹತೆ ಇರುವ ಸಂಸ್ಥೆಗಳಿಗಷ್ಟೇ ಪಿಎಂಸಿ ಕಾರ್ಯ ನಿರ್ವಹಿಸುವ ಹೊಣೆ ನೀಡಬೇಕು.
ಕಳೆದ ಹತ್ತು ವರ್ಷಗಳಿಂದ ಇಂತಹ ಕಾನೂನುಬಾಹಿರ ಕಾರ್ಯದಲ್ಲಿ ತೊಡಗಿರುವ ಎಲ್ಲ ಮುಖ್ಯ ಎಂಜಿನಿಯರ್ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರೊಂದಿಗೆ, ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಬೃಹತ್ ಅಕ್ರಮದ ತನಿಖೆಯನ್ನು CID ಗೆ ವಹಿಸಬೇಕು.
ಅಲ್ಲದೇ ಸರ್ಕಾರಕ್ಕೆ ಪತ್ರ ಬರೆಯುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ.












Click it and Unblock the Notifications