ಬಿಬಿಎಂಪಿ: ಬಾಗ್ಮನೆ ಟೆಕ್ಪಾರ್ಕ್ ಸೇರಿ ವಿವಿಧೆಡೆ ಪುನಃ ಸರ್ವೇ, 3 ವಲಯದಲ್ಲಿ ತೆರವು
ಬೆಂಗಳೂರು, ಸೆಪ್ಟಂಬರ್ 14: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಬುಧವಾರ ಯಲಹಂಕ, ಮಹದೇವಪುರ ಮತ್ತು ಪಶ್ಚಿಮ ವಲಯದಲ್ಲಿ ಒಂದೇ ದಿನ ಒಟ್ಟು 11 ಒತ್ತುವರಿಗಳನ್ನು ಬಿಬಿಎಂಪಿ ತೆರವು ಮಾಡಿದೆ.
ಯಲಹಂಕ ವಲಯದಲ್ಲಿ 4 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಕುವೆಂಪು ನಗರ ವಾರ್ಡ್ ಸಿಂಗಾಪುರ ವ್ಯಾಪ್ತಿಯಲ್ಲಿ ಸರ್ವೇ ಸಂಖ್ಯೆ 81 ಹಾಗೂ 82ರಲ್ಲಿ ಬರುವ ಬಾಲನ್ ಆಗ್ರೋ ಪ್ರಾಡಕ್ಟ್ ಕಂಪನಿ ಜ್ಯೂಸ್ ಪ್ಯಾಕ್ಟರಿಯಿಂದ ಸುಮಾರು 21 ಮೀಟರ್ ಅಗಲ, 65 ಮೀಟರ್ ಉದ್ದದ ಜಾಗವನ್ನು ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಇನ್ನೂ ಪೂರ್ಣಗೊಂಡಿಲ್ಲ. ಒತ್ತುವರಿ ಸ್ಥಳದಲ್ಲಿ ಟ್ರಾನ್ಸಫಾರ್ಮರ್ ಹಾಗೂ ಇನ್ನಿತರ ವಸ್ತುಗಳನ್ನು ತೆರವುಗೊಳಿಸಬೇಕಿದೆ. ಕೂಡಲೇ ಅವುಗಳ ಸ್ಥಳಾಂತರಕ್ಕೆ ಜ್ಯೂಸ್ ಪ್ಯಾಕ್ಟರಿಗೆ ಸೂಚನೆ ನೀಡಲಾಗಿದೆ.
ಇದಲ್ಲದೆ ಸಿಂಗಾಪುರ ಕೆರೆಯಿಂದ ಅಬ್ಬಿಗೆರೆ ಕೆರೆಗೆ ಹರಿಯುವ ಮಳೆ ನೀರುಗಾಲುವೆ (ಕಮಾಂಡೊ ಗ್ಲೋರಿ ಅಪಾರ್ಟ್ಮೆಂಟ್ ಹಿಂಭಾಗ) ಸರ್ವೇ ಸಂ. 97 ಹಾಗೂ 100 ರಲ್ಲಿ 2.4 ಮೀಟರ್ ಅಗಲ ಹಾಗೂ 200 ಮೀಟರ್ ಉದ್ದ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿರುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ತೆರವಾದ 240 ಚ.ಮೀ. ಪ್ರದೇಶ ಪಾಲಿಕೆ ವಶಕ್ಕೆ
ಪಶ್ಚಿಮ ವಲಯದಲ್ಲಿ ಎರಡು ಒತ್ತುವರಿಗಳನ್ನು ತೆರವುಗೊಳಿಸಿದ್ದೇವೆ. ಅದರಲ್ಲಿ ಶುಭಾಷ್ನಗರದ ಬರಗಿ ಮುದ್ದೇನಹಳ್ಳಿಯಲ್ಲಿ 120 ಚದರ ಮೀಟರ್ ಖಾಲಿ ಜಾಗ ಹಾಗೂ 120 ಚದರ ಮೀಟರ್ ರೈಲ್ವೆ ಇಲಾಖೆಯ ಜಾಗ ಸೇರಿದಂತೆ ಒಟ್ಟು 240 ಚ.ಮೀ ನಷ್ಟು ಒತ್ತುವರಿ ತೆರವು ಮಾಡಿ ವಶಕ್ಕೆ ಪಡೆಯಲಿದೆ. ಮಹದೇವಪುರ ವಲಯದ ದಲ್ಲಿ ಒಂದು ಕಡೆ ಒತ್ತುವರಿ ತೆರವಾಗಿದೆ. ಮುನ್ನೇಕೊಳಲು ವ್ಯಾಪ್ತಿಯಲ್ಲಿನ ಖಾಲಿ ಜಾಗವನ್ನು ತೆರವುವಾಗಿಸಿ ಪಾಲಿಕೆ ವಶಕ್ಕೆ ಪಡೆದಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
600 ಮೀ. ಉದ್ದದ ಒತ್ತುವರಿ ತೆರವು ಪ್ರಗತಿಯಲ್ಲಿದೆ
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಲಾಗಿದ್ದ ನಾಲ್ಕು ಒತ್ತುವರಿಗಳಲ್ಲಿನ ಕಟ್ಟಡ ನೆಲಸಮ ಗೊಳಿಸಲಾಯಿತು. ಈ ಪೈಕಿ ಹೊರಮಾವು ವಾರ್ಡ್ ಪಟೇಲ್ ರಾಮಯ್ಯ ಲೇಔಟ್ನ ಕೊತ್ತನೂರು ಹಳ್ಳಿ ಸರ್ವೇ ಸಂಖ್ಯೆ 6, 7, 30 ಮತ್ತು 14 ರಲ್ಲಿನ 600 ಮೀ. ಉದ್ದದ ಹಾಗೂ 19.5 ಮೀ. ಅಗಲದ ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಅದರ ಭಾಗವಾಗಿ ಇಂದು 25 ಮೀಟರ್ ಉದ್ದ ಮತ್ತು 3 ಮೀಟರ್ ಎತ್ತರದ 2 ಕಾಂಪೌಂಡ್ ಗೋಡೆ ಕೆಡವಲಾಗಿದೆ.
ಅಲ್ಲದೇ 10x10 ಅಡಿಯ ತಾತ್ಕಾಲಿಕ ಶೆಡ್ ಹಾಗೂ 20x10 ಅಡಿಯ ಮತ್ತೊಂದು ಶೆಡ್ ಸೇರಿ ಒಟ್ಟು ನಾಲ್ಕು ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ನಾಳೆ 100 ಮೀಟರ್ ಸ್ಕೇಟಿಂಗ್ ಮೈದಾನ ಸೇರಿದಂತೆ ಬಿಬಿಎಂಪಿ ಗುರುತಿಸಿರುವ ಬಾಕಿ ಒತ್ತುವರಿಯನ್ನು ತೆರವು ಕಾರ್ಯಾಚರಣೆ ಮುಂದುವರಿಯಲಿದ್ದೇವೆ ಎಂದರು.
ಬಾಗ್ಮನೆ ಟೆಕ್ಪಾಕ್ ಸುತ್ತಮುತ್ತ ಸರ್ವೇ
ಚೆಲ್ಲಘಟ್ಟದ ಸರ್ವೇ ಸಂಖ್ಯೆ 70/14 ರಲ್ಲಿದ್ದ ನಲಪಾಡ್ ಅಕಾಡೆಮಿಯಿಂದ ಆಗಿದ್ದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ಒತ್ತುವರಿ ಪೈಕಿ ಸದ್ಯ 90 ಮೀಟರ್ ತೆರವಾಗಿದೆ. ಬಾಕಿ ಒತ್ತುವರಿ ತೆರವು ಪ್ರಗತಿಯಲ್ಲಿದೆ.
ಹೈಕೋರ್ಟ್ ಹಾಗೂ ಲೋಕಾಯುಕ್ತ ಅಧಿಕಾರಿಗಳ ಅದೇಶದ ಮೇರೆಗೆ ಸರ್ವೇ ನಡೆಸಲಾಗಿದೆ. ಇದು ಗರುಡಾಚಾರಪಾಳ್ಯ ಕೆರೆಯಿಂದ ಮಹದೇವಪುರ ಕೆರೆಗೆ ಸೇರುವ ಮಳೆ ನೀರುಗಾಲುವೆಯನ್ನು ಪೂರ್ವ ಪಾರ್ಕ್ರಿಡ್ಜ್ ಸ್ವತ್ತು ಹಾಗೂ ಭಾಗ್ಮನೆ ಟೆಕ್ಪಾರ್ಕ್ ಸ್ವತ್ತಿನ ಮೂಲಕ ಹಾದು ಹೋಗುವ ರಾಜಕಾಲುವೆಯನ್ನು ಸರ್ವೇ ಮಾಡಲಾಯಿತು. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು, ಸರ್ಕಾರದ ಭೂಮಾಪಕ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಸಾಕ್ಷಿಯಾದರು.
ಸರ್ವೇಯಲ್ಲಿ ಕಂಡು ಬಂದ ಅಂಶ
ಭಾಗ್ಮನೆ ಟೆಕ್ಪಾರ್ಕ್ನಲ್ಲಿ 2.5 ಮೀಟರ್ ಅಗಲದ ರಾಜಕಾಲುವೆಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಪೂರ್ವ ಪಾರ್ಕ್ರಿಡ್ಜ್ ನಲ್ಲಿ 2.5 ಮೀಟರ್ ಅಗಲದ ಸ್ಥಳದಲ್ಲಿ ಕಟ್ಟಡ, ಖಾಲಿ ಜಾಗ ಹಾಗೂ ರಸ್ತೆಯನ್ನು ನಿರ್ಮಿಸಲಾಗಿದೆ. ಜತೆಗೆ ಗರುಡಾಚಾರ್ ಪಾಳ್ಯ ಕೆರೆಯಿಂದ ಮಹದೇವಪುರ ಕೆರೆಯ ಭಾಗದಲ್ಲಿ ಸುಮಾರು 13 ಮೀಟರ್ ಅಗಲದ ರಾಜಕಾಲುವೆಯ ಮೇಲೆ ಕಾಂಪೌಂಡ್ ವಾಲ್, ಕಟ್ಟಡ ಹಾಗೂ ಶೆಡ್ ನಿರ್ಮಾಣ ಮಾಡಿರುವುದನ್ನು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
ಮಹದೇವಪುರ: ಒತ್ತುವರಿ ತೆರವಿನ ಅಂಶಗಳ ಹೀಗಿವೆ
- ಶಾಂತಿನಿಕೇತನ ಲೇಔಟ್ನಲ್ಲಿ ಶೇ.25 ರಷ್ಟು ಒತ್ತುವರಿ ತೆರವು ಬಾಕಿ ಇದೆ.
- ವಾಗ್ದೇವಿ ಲೇಔಟ್ನಲ್ಲಿ ಶೇ.25 ರಷ್ಟು ಬಾಕಿ ಒತ್ತುವರಿ ತೆರವು ಮಾಡಬೇಕಿದೆ.
- ಚೆಲ್ಲಘಟ್ಟ ವ್ಯಾಪ್ತಿಯಲ್ಲಿ ಶೇ.50 ರಷ್ಟು ತೆರವು ಬಾಕಿ ಇದ್ದು, ಅದು ಪ್ರಗತಿಯಲ್ಲಿದೆ.
- ಪಾಪಯ್ಯರೆಡ್ಡಿ ಲೇಔಟ್ನಲ್ಲಿ ಸಂಪೂರ್ಣವಾಗಿ ತೆರವು ಕಾರ್ಯಾಚರಣೆ ನಡೆದಿದೆ.
- ಸದರಮಂಗಲ ಕೆರೆಯಿಂದ ಬೆಳ್ಳತ್ತೂರಿನವರೆಗೆ ಒತ್ತುವರಿ ಪ್ರದೇಶ ಗುರುತಿಸಬೇಕಿದೆ.
- ದೊಡ್ಡಕನಹಳ್ಳಿ ಕೆರೆಯಿಂದ ಸೋಲ್ ಕೆರೆವರೆಗೆ ಬಿಬಿಎಂಪಿ ಸಮೀಕ್ಷೆ ನಡೆಸಿ ಮಾರ್ಕಿಂಗ್ ಮಾಡಲಿದೆ.
- ಟಿಝೆಡ್ (TZED) ಅಪಾರ್ಟ್ಮೆಂಟ್-ಶೀಲವಂತ ಕೆರೆವರೆಗೆ ಒತ್ತುವರಿ ಗುರುತಿಸಬೇಕಿದೆ.
- ಇದುವರೆಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಸ್ಥಳದಲ್ಲಿ ಸಂಗ್ರಹವಾಗಿರುವಂತಹ ಕಟ್ಟಡದ ಭಗ್ನಾವೇಶಷಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.