ಬಿಬಿಎಂಪಿ ಅಧಿಕಾರಿ ಸಹಿ ನಕಲು: ಗುತ್ತಿಗೆದಾರರ ವಿರುದ್ಧ FIR ದಾಖಲು
ಬೆಂಗಳೂರು, ಅಕ್ಟೋಬರ್ 19: ಬೆಂಗಳೂರು ಪಶ್ಚಿಮ ವಲಯ ವ್ಯಾಪ್ತಿಯ ಕಾಟನ್ಪೇಟೆ ವಾರ್ಡ್ನ ಸಹಾಯಕ ಕಾರ್ಯಪಾಲಕ ಅಭಿಯಂತರರು (ಘನ ತ್ಯಾಜ್ಯ ನಿರ್ವಹಣೆ) ರವರ ನಕಲಿ ಸಹಿ ಮಾಡಿರುವವರ ವಿರುದ್ಧ ಬಿಬಿಎಂಪಿ ಎಫ್ಐಆರ್ ದಾಖಲಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶ್ಚಿಮ ವಲಯ ಕಾಟನ್ಪೇಟೆ ವಾರ್ಡ್ ಸಂಖ್ಯೆ 120ರಲ್ಲಿ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯದ ಸ್ವಚ್ಛತಾ ಕೆಲಸ ಮಾಡಲಾಗಿತ್ತು. ಸ್ವಚ್ಛತಾ ಕೆಲಸದ ಗುತ್ತಿಗೆಯನ್ನು ಶ್ರೀನಿವಾಸ ಬಿನ್ ಬಾಲರಾಜ್ ಎಂಬುವವರು ಪಡೆದಿದ್ದರು. ಅವರೇ ಈ ಗುತ್ತಿಗೆ ವಿಚಾರದಲ್ಲಿ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರರ (ಘನ ತ್ಯಾಜ್ಯ ನಿರ್ವಹಣೆ) ಸಹಿ ನಕಲು ಮಾಡಲಾಗಿದೆ. ಈ ಸಂಬಂಧ ಗುತ್ತಿಗೆ ಪಡೆದ ಶ್ರೀನಿವಾಸ ಮತ್ತವರ ಸಹೋದರ ವಡಿವೇಲು ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರಸಭೆ ಹಾಲಿ ಪೌರಾಯುಕ್ತರಾಗಿರುವ ಉದಯ್ ಕುಮಾರ್ ಬಿ. ತಳವಾರ್ ಎಂಬುವವರು ಕೆಲವು ವರ್ಷಗಳ ಹಿಂದೆ ಬೆಂಗಳೂರಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ(ಘ.ತ್ಯಾ.ನಿ) ಗಾಂಧಿನಗರ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಹಾಜರಾತಿ ಸೇರಿದಂತೆ ದಾಖಲೆ ಪತ್ರದಲ್ಲಿ ಅವರ ಸಹಿಯನ್ನು ಅಂದು ಗುತ್ತಿದಾರರ ಶ್ರೀನಿವಾಸ ಮತ್ತವರ ಸಹೋದರ ವಡಿವೇಲು ನಕಲು ಮಾಡಿದ್ದರು ಎಂಬುದು ಈಗ ಬೆಳಕಿಗೆ ಬಂದಿದೆ.
ಅಕ್ರಮ ಬೆಳಕಿಗೆ ಬಂದ ಕೂಡಲೇ ಬಿಬಿಎಂಪಿ ರಾಣೆ ಬೆನ್ನೂರಲ್ಲಿರುವ ಹಾಲಿ ಪೌರಾಯುಕ್ತರಿಗೆ ಈ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. ಸಹಿ ನಕಲು ಮಾಡಿದ್ದರ ಬಗ್ಗೆ ಮಾಹಿತಿ ಕಲೆ ಹಾಕಿದ ಬಿಬಿಎಂಪಿ ಬುಧವಾರ ಆರೋಪಿಗಳ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.