ಅ.1ಕ್ಕೆ ಬಿಬಿಎಂಪಿ ಮೇಯರ್ ಚುನಾವಣೆ: ಗದ್ದುಗೆಗಾಗಿ ಬಿಜೆಪಿ ರಣತಂತ್ರ
ಬೆಂಗಳೂರು, ಸೆಪ್ಟೆಂಬರ್ 23: ವಿಧಾನಸಭೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಚುನಾವಣೆಯನ್ನು ಅಕ್ಟೋಬರ್ 1ಕ್ಕೆ ನಿಗದಿಪಡಿಸಲಾಗಿದೆ.
ಈ ಮೊದಲು ಸೆ. 27ರಂದು ಬಿಬಿಎಂಪಿ ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅ. 21ರಂದು ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ಶನಿವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಸೋಮವಾರ ಮಾಹಿತಿ ನೀಡಿದ್ದರು.
ಪೂರ್ವ ನಿಗದಿಯಾಗಿದ್ದ ಮೇಯರ್ ಚುನಾವಣೆಗೆ ಉಪ ಚುನಾವಣೆಯ ಘೋಷಣೆ ಅಡ್ಡಿಯಾಗಿರುವುದರಿಂದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಹರ್ಷ ಗುಪ್ತ ತಿಳಿಸಿದ್ದರು. ಬಳಿಕ ಚುನಾವಣಾ ಆಯುಕ್ತರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ನೀತಿ ಸಂಹಿತೆ ಇರುವುದರ ನಡುವೆಯೇ ಅ. 1ರಂದು ಮೇಯರ್ ಚುನಾವಣೆ ನಡೆಸಲು ಅನುಮತಿ ನೀಡಲಾಗಿದೆ. ಅ. 1ರಂದೇ 12 ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಲಿದೆ.

ಸೆ. 27ಕ್ಕೆ ಅಧಿಕಾರ ಮುಕ್ತಾಯ
ಹಾಲಿ ಮೇಯರ್ ಗಂಗಾಂಬಿಕೆ ಮತ್ತು ಉಪ ಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿಯು ಸೆ. 27ಕ್ಕೆ ಅಂತ್ಯಗೊಳ್ಳಲಿದೆ. ಹೀಗಾಗಿ ಅಂದೇ ಈ ಎರಡೂ ಸ್ಥಾನಗಳಿಗೆ ಚುನಾವಣೆ ನಡೆಸಿ ನೂತನ ಮೇಯರ್, ಉಪ ಮೇಯರ್ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಚುನಾವಣಾ ಆಯೋಗದ ಸೂಚನೆಯಂತೆ ನಾಲ್ಕು ದಿನಗಳ ಬಳಿಕ ಈ ಚುನಾವಣೆ ನಡೆಯಲಿದೆ.

ಬೇಕಿರುವ ಮ್ಯಾಜಿಕ್ ನಂಬರ್
ಬಿಬಿಎಂಪಿಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲು ಪಕ್ಷವು ಬಿಬಿಎಂಪಿ ಸದಸ್ಯರು, ಶಾಸಕರು ಮತ್ತು ಸಂಸದರ ಬಲ ಸೇರಿ 129 ಸದಸ್ಯರ ಬಲ ಹೊಂದಿರಬೇಕಾಗುತ್ತದೆ. ಪ್ರಸ್ತುತ ಬಿಜೆಪಿ 125 ಸದಸ್ಯರನ್ನು ಹೊಂದಿದೆ. ಇನ್ನು ಮೈತ್ರಿ ಮಾಡಿಕೊಂಡು ಬಿಬಿಎಂಪಿ ಅಧಿಕಾರ ಹಂಚಿಕೊಂಡಿದ್ದ ಕಾಂಗ್ರೆಸ್ 104, ಜೆಡಿಎಸ್ 21 ಸದಸ್ಯರ ಬಲ ಹೊಂದಿವೆ. ಏಳು ಮಂದಿ ಪಕ್ಷೇತರರಿದ್ದು, ಅವರಿಗೆ ಬೇಡಿಕೆ ಹೆಚ್ಚುವುದು ಖಚಿತ.

ಯಾವ ಪಕ್ಷಕ್ಕೆ ಬೆಂಬಲ ಎಷ್ಟೆಷ್ಟು?
ಬಿಜೆಪಿಯಲ್ಲಿ ಒಟ್ಟು 101 ಪಾಲಿಕೆ ಸದಸ್ಯರಿದ್ದಾರೆ. ಜತೆಗೆ ನಾಲ್ಕು ಲೋಕಸಭಾ ಸದಸ್ಯರು, ಇಬ್ಬರು ರಾಜ್ಯಸಭಾ ಸದಸ್ಯರು, 11 ವಿಧಾನಸಭಾ ಸದಸ್ಯರು ಮತ್ತು 7 ವಿಧಾನಪರಿಷತ್ ಸದಸ್ಯರ ಬಲವಿದೆ. ಕಾಂಗ್ರೆಸ್ 76 ಪಾಳಿಕೆ ಸದಸ್ಯರನ್ನು ಹೊಂದಿದ್ದು, 1 ಲೋಕಸಭೆ ಸದಸ್ಯ, 6 ರಾಜ್ಯಸಭೆ ಸದಸ್ಯರು, 11 ವಿಧಾನಸಭಾ ಸದಸ್ಯರು, 10 ವಿಧಾನಪರಿಷತ್ ಸದಸ್ಯರ ಬಲದೊಂದಿಗೆ 104 ಸಂಖ್ಯೆ ಹೊಂದಿದೆ. ಜೆಡಿಎಸ್ನಲ್ಲಿ 14 ಪಾಲಿಕೆ ಸದಸ್ಯರಿದ್ದಾರೆ. ಒಬ್ಬ ರಾಜ್ಯಸಭಾ ಸದಸ್ಯ, ಒಬ್ಬ ವಿಧಾನಸಭೆ ಸದಸ್ಯ ಮತ್ತು 5 ವಿಧಾನಪರಿಷತ್ ಸದಸ್ಯರೊಂದಿಗೆ 21 ಸದಸ್ಯರನ್ನು ಹೊಂದಿದೆ.

ಅನರ್ಹ ಶಾಸಕರಿಗೆ ಮತದಾನದ ಹಕ್ಕಿಲ್ಲ
ಕಾಂಗ್ರೆಸ್ನ ಶಾಸಕರಾದ ಕೆಆರ್ ಪುರದ ಬೈರತಿ ಬಸವರಾಜ್, ಶಿವಾಜಿನಗರದ ರೋಷನ್ ಬೇಗ್, ರಾಜರಾಜೇಶ್ವರಿ ನಗರದ ಮುನಿರತ್ನ ಮತ್ತು ಯಶವಂತಪುರದ ಎಸ್ಟಿ ಸೋಮಶೇಖರ್ ಹಾಗೂ ಮಹಾಲಕ್ಷ್ಮೀ ಲೇಔಟ್ನ ಜೆಡಿಎಸ್ ಶಾಸಕ ಗೋಪಾಲಯ್ಯ ಅನರ್ಹತೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ಈ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲವಾದ್ದರಿಂದ ಮ್ಯಾಜಿಕ್ ಸಂಖ್ಯೆಯಲ್ಲಿ ಕುಸಿತವಾಗಿದೆ.

ಚುನಾವಣೆಗಾಗಿಯೇ ಸಮಿತಿ ರಚನೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಬಿಬಿಎಂಪಿಯನ್ನು ಕೂಡ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಅಗತ್ಯ ಬೆಂಬಲವನ್ನು ಪಡೆದುಕೊಳ್ಳಲು ಏನೇನು ಮಾಡಬೇಕು ಎಂಬುದನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಸಲುವಾಗಿಯೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಮುಖಂಡರ ಸಮಿತಿಯೊಂದನ್ನು ರಚಿಸಿದ್ದಾರೆ ಎನ್ನಲಾಗಿದೆ.

ಗೋವಾಕ್ಕೆ ಪಾಲಿಕೆ ಸದಸ್ಯರು?
ಚುನಾವಣೆಯ ಬೆನ್ನಲ್ಲೇ ಪಾಲಿಕೆ ಸದಸ್ಯರನ್ನು ತಮ್ಮತ್ತ ಸೆಳೆದುಕೊಳ್ಳುವ ಪೈಪೋಟಿ ಆರಂಭವಾಗಿದೆ. ಮುಖ್ಯವಾಗಿ ಬಿಜೆಪಿಯು ದೊಮ್ಮಲೂರು ವಾರ್ಡ್ನ ಸಿಆರ್ ಲಕ್ಷ್ಮೀನಾರಾಯಣ, ಕೆಂಪಾಪುರ ಅಗ್ರಹಾರದ ಎಂ. ಗಾಯತ್ರಿ, ಮಾರತ್ತಹಳ್ಳಿ ವಾರ್ಡ್ನ ಎನ್. ರಮೇಶ್ ಮತ್ತು ಕೋನೇನ ಅಗ್ರಹಾರ ವಾರ್ಡ್ನ ಚಂದ್ರಪ್ಪ ರೆಡ್ಡಿ ಅವರನ್ನು ಸೆಳೆದುಕೊಳ್ಳಲು ತಂತ್ರ ರೂಪಿಸಿದೆ. ಚಂದ್ರಪ್ಪ ರೆಡ್ಡಿ ಅವರು ಮಾತ್ರ ಬೆಂಗಳೂರಿನಲ್ಲಿಯೇ ಇದ್ದು, ಉಳಿದ ಮೂವರು ಪಾಲಿಕೆ ಸದಸ್ಯರನ್ನು ಗೋವಾಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications