'ಬೆಂಗಳೂರಲ್ಲಿ ಮಳೆ ನೀರು ನಿರ್ವಹಣೆ ವೈಫಲ್ಯಕ್ಕೆ ಬಿಬಿಎಂಪಿ ಬೇಜವಾಬ್ದಾರಿಯೇ ಕಾರಣ'
ಬೆಂಗಳೂರು, ಜುಲೈ 18: ಬೆಂಗಳೂರಲ್ಲಿ ಮಳೆ ನೀರು ನಿರ್ವಹಣೆ ವೈಫಲ್ಯಕ್ಕೆ ಬಿಬಿಎಂಪಿ ಬೇಜವಾಬ್ದಾರಿಯೇ ಕಾರಣ ಎಂದು ಆಮ್ ಆದ್ಮಿ ಪಕ್ಷ ದೂರಿದೆ.
ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿ ವರ್ಷಗಳೇ ಕಳೆಯುತ್ತಿವೆ. ನೀರಿನ ಪೂರೈಕೆಗಾಗಿ ರಾಜ್ಯದ ವಿವಿಧ ನದಿಗಳಿಂದ ನೀರನ್ನು ತರಲು ಸರ್ಕಾರ ಹರಸಾಹಸ ಪಡುತ್ತಿರುವುದು ಒಂದೆಡೆಯಾದರೆ, ಬೆಂಗಳೂರಿನಲ್ಲಿ ಮಳೆ ಬೀಳುವುದೇ ದೊಡ್ಡ ಸಮಸ್ಯೆ ಎಂಬಂತಹ ಪರಿಸ್ಥಿತಿ ಮತ್ತೊಂದೆಡೆ ಎದ್ದುಕಾಣುತ್ತಿದೆ. ಈ ಸಂದಿಗ್ಧತೆಗೆ ಬಿಬಿಎಂಪಿಯ ಬೇಜವಾಬ್ದಾರಿತನ ಮತ್ತು ಅಸಮರ್ಥತೆಯೇ ಕಾರಣವಾಗಿದೆ ಎಂದು ಹೇಳಿದೆ.
ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಬೆಂಗಳೂರಿನ ನೀರಿನ ಸಮಸ್ಯೆಯನ್ನು ನಿವಾರಿಸಬಹುದು ಎಂದು ಅನೇಕ ತಜ್ಞರು ಸಲಹೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಕಿವಿಗೊಡದ ಬಿಬಿಎಂಪಿ ಕಣ್ಣು ಮುಚ್ಚಿಕೊಂಡು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ನಿನ್ನೆ ಸುರಿದ ಸಣ್ಣ ಪ್ರಮಾಣದ ಮಳೆಯಿಂದಲೇ ಬೆಂಗಳೂರಿನ ಹಲವು ಭಾಗಗಳ ರಸ್ತೆಗಳು, ಚರಂಡಿಗಳಲ್ಲಿ ನೀರು ತುಂಬಿ ವಾಹನ ಸಂಚಾರವೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿ ಸಾವಿರಾರು ಜನರು ಪರದಾಡುವಂತಾಗಿತ್ತು.

ಇನ್ನು ಮುಂದೆ ಸುರಿಯುವ ಮಳೆಗೆ ಬೆಂಗಳೂರು ಮತ್ತಷ್ಟು ತತ್ತರಿಸುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿ ಎದುರಾಗದಂತೆ ಮುನ್ನೆಚರಿಕೆ ವಹಿಸಿ ಮುಂಬರುವ ಮಳೆಯಿಂದಾಗುವ ಅನಾಹುತವನ್ನು ನಿಯಂತ್ರಿಸಲು ರಾಜಕಾಲುವೆಗಳನ್ನು ವಿಸ್ತರಿಸಲು ಹಾಗೂ ಹಾಳಾಗುತ್ತಿರುವ ರಾಜಕಾಲುವೆಗಳನ್ನು ಸರಿಪಡಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿ ಬಿಬಿಎಂಪಿಗೆ ಚಾಟಿ ಬೀಸಿದೆ. ಆದರೆ ಈ ಯಾವ ಕೆಲಸವೂ ಬಿಬಿಎಂಪಿಯಿಂದ ನಡೆದಿಲ್ಲ, ಇದಕ್ಕೆ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವ ಮೇಯರ್ ಮತ್ತು ಆಯುಕ್ತರೇ ನೇರ ಹೊಣೆ.
ಇಷ್ಟೇ ಅಲ್ಲದೇ, ಕೆರೆಗಳನ್ನು ನಗರಾದ್ಯಂತ ಅನೇಕ ಮುಚ್ಚಲಾಗುತ್ತಿದ್ದು, ಆ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ. ರಾಜಕಾಲುವೆಗಳೂ ಒತ್ತುವರಿಗೊಂಡು ಕಿರಿದಾಗಿಯೂ, ಹೂಳು ತುಂಬಿಕೊಂಡು ಮುಚ್ಚಿಹೋಗುತ್ತಿರುವುದರಿಂದ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಅಂಡರ್ ಪಾಸ್ಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಮಳೆ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತಿದೆ. ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಿ ಒತ್ತುವರಿ ಪ್ರದೇಶಗಳನ್ನು ತೆರವುಗೊಳಿಸುವಲ್ಲಿ ಮೇಯರ್ ವಿಫಲವಾಗಿದ್ದಾರೆ.
ಭಾರಿ ಮಳೆ ಬಂದರೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಕ್ಷಣವೇ ಬಿಬಿಎಂಪಿಯು ಯೋಜನೆಯೊಂದನ್ನು ರೂಪಿಸಿ ಕಾರ್ಯನಿರತವಾಗಬೇಕು. ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಕ್ಷಿಪ್ರ-ಕಾರ್ಯಪಡೆ, ಮಳೆ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಅಗತ್ಯ ಮತ್ತು ಅವಶ್ಯಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಗಳ ವ್ಯವಸ್ಥೆಯನ್ನು ಮಾಡಬೇಕು. ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಸ್ಪಂದಿಸಲು ಶಾಶ್ವತ ಸಹಾಯವಾಣಿ ಸ್ಥಾಪನೆ ಆಗಬೇಕು. ಭಾರೀ ಮಳೆಯಿಂದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವ ಕೆಲವು ಪ್ರದೇಶಗಳನ್ನಾದರೂ ಗುರುತಿಸಿ ಅಲ್ಲಿ ವಿಶೇಷ ನಿಗಾ ಇರಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.












Click it and Unblock the Notifications