ಬೆಂಗಳೂರು: ಕೆ-100 ಮಾರ್ಗದ ಒತ್ತುವರಿ ತೆರವಿಗೆ ಬಿಬಿಎಂಪಿ ಸೂಚನೆ
ಬೆಂಗಳೂರು, ಡಿಸೆಂಬರ್ 15: ಬೆಂಗಳೂರು ನಾಗರೀಕರ ಜಲ ಮಾರ್ಗ ಯೋಜನೆ (ಕೆ-100)ಯ ಮಾರ್ಗಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸುವಂತೆ ಬಿಬಿಎಂಪಿ ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಗುರುವಾರ ಸೂಚಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎನ್ಆರ್ ರಸ್ತೆ (ಕೆ.ಆರ್.ಮಾರುಕಟ್ಟೆ) ಯಿಂದ ಬೆಳ್ಳಂದೂರು ಕೆರೆಯವರೆಗೆ "ಬೆಂಗಳೂರು ನಾಗರೀಕರ ಜಲ ಮಾರ್ಗ ಯೋಜನೆ (ಕೆ-100) ಕಾಮಗಾರಿಯು ಪ್ರಗತಿಯಲ್ಲಿದೆ. ಈ ಯೋಜನೆಯಲ್ಲಿ ಬೆಂಗಳೂರು, ನಗರದ ಕೋರಮಂಗಲ ಕಣಿವೆಯ ಎನ್ಆರ್ ರಸ್ತೆಯಿಂದ ಬೆಳ್ಳಂದೂರು ಕೆರೆಯವರೆಗಿನ ಕಾಲುವೆಯನ್ನು ಅಭಿವೃದ್ಧಿಪಡಿಸಿ, ತ್ಯಾಜ್ಯ ನೀರಿನಿಂದ ಮುಕ್ತಗೊಳಿಸಲಾಗುವುದು. ಕಾಲುವೆಯಲ್ಲಿ ಸದಾಕಾಲ, ಶುದ್ಧೀಕರಿಸಿದ ನೀರು ಹರಿಯುವಂತೆ ಮಾಡಿ ಮಳೆ ನೀರುಗಾಲುವೆಯ ಸೌಂದರ್ಯೀಕರಣ ಕಾಮಗಾರಿಯನ್ನು ಕೈಗೊಳ್ಳುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ಬಿಬಿಎಂಪಿ ಅಧಿಕಾರಿಗಳಿಂದ ದಾಳಿ: ಲಾರಿಯಲ್ಲಿದ್ದ 19.5 ಟನ್ಗೂ ಅಧಿಕ ಪ್ಲಾಸಿಕ್ ವಶ, ದಂಡ ಹೇರಿಕೆ
ಈ ಯೋಜನೆಯ ಎಸ್ಆರ್ ರಸ್ತೆಯಿಂದ ಬೆಳ್ಳಂದೂರು ಕೆರೆಯವರೆಗಿನ ಕಾಲುವೆಯಲ್ಲಿ ಪಾದಾಚಾರಿಗಳ ಅನುಕೂಲಕ್ಕಾಗಿ ಪಾದಾಚಾರಿ ಮಾರ್ಗ ಮತ್ತು ಬಿಡ್ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮಾರ್ಗಕ್ಕೆ ಹೊಂದಿಕೊಂಡಿರುವ ಕೆಲವು ಮಳಿಗೆಗಳು ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಹಾಕಿ ಜಾಗ ಒತ್ತುವರಿ ಮಾಡಿಕೊಂಡಿವೆ. ತ್ಯಾಜ್ಯ ವಸ್ತುಗಳನ್ನು ರಾಜಕಾಲುವೆಯಲ್ಲಿ ಮತ್ತು ಪಾದಾಚಾರಿ ಮಾರ್ಗದಲ್ಲಿ ಹಾಕುತ್ತಿರುವುದು ಕಂಡು ಬಂದಿದೆ.. ಇದರಿಂದಾಗಿ ಅಭಿವೃದ್ಧಿಪಡಿಸಲಾದ ಕೆಲ ಭಾಗಗಳಿಗೆ ಹಾನಿಯಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಆದ್ದರಿಂದ, ಈ ರೀತಿ ಪಾದಾಚಾರಿಗಳ ಮಾರ್ಗಕ್ಕೆ ಆಡಚಣೆಯಾಗುವ ರೀತಿಯಲ್ಲಿ ಹಾಕಿರುವ ಸಾಮಗ್ರಿಗಳನ್ನು ಸಂಬಂಧಪಟ್ಟ ಮಳಿಗೆಗಳ ಮಾಲೀಕರುಗಳು ಕೂಡಲೇ ತೆರವುಗೊಳಿಸಲುಬೇಕು. ಜೊತೆಗೆ ಇನ್ನು ಮುಂದೇ ಯಾವುದೇ ಸಾಮಗ್ರಿಗಳನ್ನು ಮತ್ತು ತ್ಯಾಜ್ಯ ವಸ್ತುಗಳನ್ನು ಪಾದಾಚಾರಿ ಮಾರ್ಗದಲ್ಲಿ ಹಾಕದಂತೆ ಬಿಬಿಎಂಪಿ ತಾಕೀತು ಮಾಡಿದೆ.
ಅಭಿವೃದ್ಧಿಪಡಿಸಲಾದ ಕಾಲುವೆಯ ಭಾಗಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಸಂಬಂಧಪಟ್ಟ ಮಳಿಗೆಯವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪ್ರಧಾನ ಅಭಿಯಂತರ ಪ್ರಹ್ಲಾದ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.