ಬೆಂಗಳೂರಿನಲ್ಲಿ ಮನೆ ತೆರವಿಗೆ ನಿಂತ ಬಿಬಿಎಂಪಿ: ಆತ್ಮಹತ್ಯೆಗೆ ಯತ್ನಿಸಿದ ದಂಪತಿಯ ರಕ್ಷಣೆ
ಬೆಂಗಳೂರು ಅಕ್ಟೋಬರ್ 12: ಬಿಬಿಎಂಪಿ ಮನೆ ತೆರವು ವಿರೋಧಿಸಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಂಪತಿಗಳನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಗಾಯತ್ರಿ ಲೇಔಟ್ನ ಮನೆಗಳ ತೆರವಿಗೆ ಇಂದು ಮುಂದಾಗಿದ್ದರು. ಈ ವೇಳೆ ದಂಪತಿ ಮನೆ ತೆರವು ಕಾರ್ಯಚರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಯ ಎಚ್ಚರಿಕೆ ನೀಡಿದರು. ಪೊಲೀಸರು ಬಿಬಿಎಂಪಿ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ದಂಪತಿ ಆತ್ಮಹತ್ಯೆ ಮಾತಿಂದ ದೂರ ಸರಿಯಲಿಲ್ಲ. ತಕ್ಷಣ ತೆರವು ಕಾರ್ಯಚರಣೆಯನ್ನು ನಿಲ್ಲಿಸಿದ ಅಧಿಕಾರಿಗಳು ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಪೊಲೀಸರ ಸಹಾಯದೊಂದಿಗೆ ದಂಪತಿಯನ್ನು ರಕ್ಷಣೆ ಮಾಡಿದ್ದಾರೆ.
ರಾಜಕಾಲುವೆಗೆ ಸೇರಿದ ಜಾಗದ ಒತ್ತುವರಿ ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿರುವ ಕಾರಣದಿಂದಲೇ ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಮತ್ತು ಕೆಲ ಪ್ರದೇಶಗಳು ಜಲಾವೃತವಾದ ಪರಿಸ್ಥಿತಿ ಉದ್ಭವಿಸಿದೆ ಎಂದು ಹೈಕೋರ್ಟ್ ಕಳೆದ ತಿಂಗಳು ಕಿಡಿಕಾರಿತ್ತು. ಬೆಂಗಳೂರಿನ ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ಹೈಕೋರ್ಟ್ 2019ರ ಜೂ.18ರಂದು ನೀಡಿರುವ ನಿರ್ದೇಶನದ ಅನ್ವಯ ನಗರದಲ್ಲಿನ ರಾಜಕಾಲುವೆಯ ಒತ್ತುವರಿಯನ್ನು ತೆರವುಗೊಳಿಸಲು ಸರಕಾರ ಮತ್ತು ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಗಳು ತಕ್ಷಣವೇ ಕ್ರಮ ಕೈಗೊಂಡು ವಸ್ತುಸ್ಥಿತಿ ವರದಿ ಸಲ್ಲಿಸಬೇಕು.
ಬೆಂಗಳೂರಿನಲ್ಲಿ ಮನೆ ತೆರವಿಗೆ ನಿಂತ ಬಿಬಿಎಂಪಿ: ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ
ಹಾಗೆಯೇ, ರಾಜಕಾಲುವೆ ಮತ್ತು ಮಳೆ ನೀರು ಕಾಲುವೆಗೆ ಯಾವುದೇ ರೀತಿ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಬೇಕು ಎಂದು ನಿರ್ದೇಶಿಸಿತ್ತು. ವಿಚಾರಣೆ ವೇಳೆ ವಕೀಲ ಜಿ.ಆರ್.ಮೋಹನ್ ಮಧ್ಯಂತರ ಅರ್ಜಿ ಸಲ್ಲಿಸಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿದ್ದ ಪ್ರವಾಹದ ಕುರಿತು ನ್ಯಾಯಪೀಠಕ್ಕೆ ಫೋಟೋ ಸಹಿತ ಮಾಹಿತಿ ಒದಗಿಸಿದರು.
ಅದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ರಾಜಕಾಲುವೆ ಮತ್ತು ಮಳೆ ನೀರು ಕಾಲುವೆ ಜಾಗದ ಒತ್ತುವರಿ ತೆರವುಗೊಳಿಸುವ ಸಂಬಂಧ ನ್ಯಾಯಾಲಯ ಹಲವು ಬಾರಿ ನಿರ್ದೇಶನ ನೀಡಿದೆ. ಅಲ್ಲದೆ, ಮಳೆ ನೀರು ಕಾಲುವೆಗಳ ಸಮೀಕ್ಷೆ ನಡೆಸುವ ಹಾಗೂ ಅವುಗಳ ಒತ್ತುವರಿಗಳನ್ನು ತೆರವುಗೊಳಿಸುವಂತೆ 2019ರ ಜೂ.18ರಂದು ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿ, ಆ ಕುರಿತು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲು ಆರು ವಾರ ಕಾಲಾವಕಾಶ ನೀಡಿತ್ತು. ಆದರೆ, ಈವರೆಗೂ ನ್ಯಾಯಾಲಯದ ನಿರ್ದೇಶನಗಳು ಪಾಲನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಹೈಕೋರ್ಟ್ ನಿರ್ದೇಶನದಂತೆ ನಗರದಲ್ಲಿನ ಮಳೆನೀರು ಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ರಾಜಕಾಲುವೆ ಒತ್ತುವರಿ ತೆರವಿಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿತ್ತು. ಇದರಿಂದಾಗಿ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆತ್ಮಹತ್ಯೆಯ ಬೆದರಿಕೆ ಕೂಡ ಹಾಕಿದ್ದಾರೆ.
ಸ್ಥಳೀಯರ ಆರೋಪವೇನು?
ಈ ಮನೆ ಕಟ್ಟುವಾಗ ಬಿಬಿಎಂಪಿ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಅನುಮತಿ ಕೊಟ್ಟು ಲಕ್ಷಾಂತರ ಬ್ಯಾಂಕ್ ಲೋನ್ ಕೂಡ ತೆಗೆದುಕೊಳ್ಳಲಾಗಿದೆ. ಮನೆ ಕಟ್ಟುವರೆಗೂ ಸುಮ್ನಿದ್ದು. ಈಗ ಏಕಾಏಕಿ ಜೆಸಿಬಿ ತಂದು ಡೆಮಾಲಿಷನ್ ಮಾಡಲು ನಿಂತಿದ್ದಾರೆ ಎಂದು ಆತ್ಮಹತ್ಯಗೆ ಯತ್ನಿಸಿ ದಂಪತಿ ಆರೋಪಿಸಿದ್ದಾರೆ.
ಹಾಗಾದರೆ ಬಿಬಿಎಂಪಿಗೆ ಮನೆ ಕಟ್ಟುವ ವೇಳೆ ಅನುಮತಿ ನೀಡುವಾಗ ಇದು ರಾಜಕಾಲುವೆಯಲ್ಲಿದೆ ಎನ್ನುವ ಮಾಹಿತಿ ಇರಲಿಲ್ಲವೇ? ಆಗಲೇ ನಮಗೆ ಅನುಮತಿ ನೀಡಬಾರದಿತ್ತು. ಸೈಟ್ ಮಾರಿದವನಿಗೆ ಶಿಕ್ಷೆ ಯಾಕಿಲ್ಲ? ಕಾರ್ಪೋರೇಟರ್ ಗಳು ಯಾಕೆ ಬಿಬಿಎಂಪಿ ಅಧಿಕಾರಿಗಳನ್ನು ಆಗಲೇ ಪ್ರಶ್ನೆ ಮಾಡಿಲ್ಲ? ಮನೆ ಕಟ್ಟುವಾಗ ಹಣ ತಿಂದು ಅನುಮತಿ ನೀಡಿದ್ದಾರೆ. ಮನೆ ಕಟ್ಟುವವರೆಗೂ ಸುಮ್ಮನಿದ್ದಾರೆ. ಸಾಲ ಮಾಡಿ ಮನೆ ಕಟ್ಟಲಾಗಿದೆ. ಆ ಸಾಲ ಇನ್ನೂ ಕೂಡ ತೀರಿಲ್ಲ. ಹೀಗಿರುವಾಗ ಮನೆ ತೆರವಿಗೆ ಮುಂದಾಗಿದ್ದಾರೆ. ಇದು ಅನ್ಯಾಯ ಎಂದು ದಂಪತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. 'ಮನೆ ತೆರವು ಮಾಡಿದರೆ ನಮ್ಮ ಮನೆಯೊಂದಿಗೆ ನಾವೂ ಸುಟ್ಟು ಬೂದಿಯಾಗುತ್ತೇವೆ' ಎಂದು ದಂಪತಿ ಎಚ್ಚರಿಕೆ ನೀಡಿದ್ದಾರೆ.
#BBMPDemolishionDrive-High drama during the drive. Resident Sona Singh and Sunil Singh at KR Puram threatening to commit suicide by setting them ablaze if BBMP touches thier house.@XpressBengaluru,@NewIndianXpress,@BoskyKhanna,@Cloudnirad,@Ashokmruthyu,
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.