ಬೆಂಗಳೂರಿನ ಹೋಟೆಲ್ಗಳಿಗೆ ಶಾಕ್ ಕೊಟ್ಟ ಬಿಬಿಎಂಪಿ, ಗ್ರಾಹಕರಿಗೂ ತಟ್ಟಲಿದೆ ಬೆಲೆ ಬಿಸಿ!
ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ಇದೀಗ ಹೊಸದಾಗಿ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಶಾಕ್ ಕೊಟ್ಟಿದೆ. ಬೆಂಗಳೂರಿನಲ್ಲಿ ಈಗಾಗಲೇ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ಮತ್ತೊಂದು ಶುಲ್ಕದ ಹೊರೆಯನ್ನು ವಿಧಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಕ್ರಮಕ್ಕೆ ಹೋಟೆಲ್ ಉದ್ಯಮಗಳ ಸಂಘವು ವಿರೋಧಿಸಿವೆ. ನಾವು ಈಗಾಗಲೇ ಟ್ಯಾಕ್ಸ್ ಪೇ ಮಾಡುತ್ತಿದ್ದೇವೆ. ಇದೀಗ ಕಸಕ್ಕೂ ಹೊಸ ಟ್ಯಾಕ್ಸ್ ವಿಧಿಸುತ್ತಿರುವುದು ಸರಿಯಲ್ಲ ಎಂದು ಹೇಳಿವೆ. ಹಾಗಾದರೆ ಬಿಬಿಎಂಪಿಯ ಹೊಸ ನೀತಿ ಏನು ಎನ್ನುವ ವಿವರ ಇಲ್ಲಿದೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ಹೋಟೆಲ್ ಉದ್ಯಮಗಳು ಹೇಳಿವೆ. ಇದೀಗ ಬಿಬಿಎಂಪಿಯು ಕಸಕ್ಕೂ ಸೆಸ್ ವಿಧಿಸಲು ಮುಂದಾಗಿರುವುದಕ್ಕೆ ಹೋಟೆಲ್ ಉದ್ದಿಮೆಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ.

ಬಿಬಿಎಂಪಿಯ ಹೊಸ ಪ್ರಸ್ತಾವನೆ ಏನು ?
ಬೆಂಗಳೂರಿನಲ್ಲಿ ಸಗಟು ತ್ಯಾಜ್ಯ (ಹೆಚ್ಚು ಕಸ) ಉತ್ಪಾದಿಸುವವರಿಗೆ ಟ್ಯಾಕ್ಸ್ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಹೆಚ್ಚು ಕಸ ಉತ್ಪಾದಿಸುವವರು ಅವರು ಉತ್ಪಾದನೆ ಮಾಡುವ ಕಸವನ್ನು ಅವರೇ ಸಂಸ್ಕರಣೆ (ಕಾಂಪೋಸ್ಟ್) ಮಾಡಬೇಕು ಎಂದು ಹೇಳಿದ್ದರೂ, ಯಾರು ಕಸವನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡುತ್ತಿಲ್ಲ. ಹೀಗಾಗಿ, ಕಸದ ನಿರ್ವಹಣೆ ಮಾಡುವುದು ಬಿಬಿಎಂಪಿಗೆ ಸವಾಲಾಗಿದೆ. ಅಲ್ಲದೇ ಈ ರೀತಿ ಬೃಹತ್ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುತ್ತಿರುವುದರಿಂದಾಗಿ ಅದರ ನಿರ್ಹವಣೆಯೂ ಸವಾಲಾಗಿದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ಈಗಾಗಲೇ ನಾವು ಎಲ್ಲಾ ಎಲ್ಲಾ ಉದ್ದಿಮೆಗಳಿಗೂ ಜಾಗೃತಿ ಮೂಡಿಸಿದ್ದೆವು ಆದರೆ, ಯಾರೂ ಸಹ ಕಸ ಸಂಸ್ಕರಣೆ ಮಾಡುವ ವಿಧಾನವನ್ನು ಅಳವಡಿಸಿಕೊಂಡಿಲ್ಲ. ಹೀಗಾಗಿ, ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಬಿಬಿಎಂಪಿಯು ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದೆ. ಈ ವಿಷಯವಾಗಿ ನಮ್ಮೊಂದಿಗೆ ಯಾವುದೇ ಚರ್ಚೆಯನ್ನು ಮಾಡಿಲ್ಲ ಎಂದು
ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ಸ್ (ಬಿಬಿಎಚ್ಎ) ಹೇಳಿದೆ. ಮೊದಲು ಪ್ರತಿ ಕೆಜಿ ತ್ಯಾಜ್ಯಕ್ಕೆ 50 ಪೈಸೆ ವಿಧಿಸಿದ್ದರು. ಇದೀಗ ಪ್ರತಿ ಕೆಜಿ ಹಸಿ ಕಸಕ್ಕೆ 12 ರೂಪಾಯಿ ಸೆಸ್ ವಿಧಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಇದು ಜಾರಿಯಾದರೆ, ಸಣ್ಣ ಹೋಟೆಲ್ಗಳ ಮಾಲೀಕರು ಪ್ರತಿ ತಿಂಗಳು 30,000 ಸಾವಿರ ರೂಪಾಯಿಯಿಂದ 35,000 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಆಕ್ಷೇಪಣೆ ವ್ಯಕ್ತಪಡಿಸಿದೆ.
ಹೋಟೆಲ್ಗಳಿಗೆ ನೋಟಿಸ್: ಬಿಬಿಎಂಪಿಯು
ಇನ್ನು ಬಿಬಿಎಂಪಿಯು ಈಗಾಗಲೇ ಬೆಂಗಳೂರಿನ ಹಲವು ಹೋಟೆಲ್ಗಳಿಗೆ ನೋಟಿಸ್ ನೀಡಿ ಶಾಕ್ ಕೊಟ್ಟಿದೆ. ಏಕಾಏಕಿ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರಿನ ಹೋಟೆಲ್ಗಳ ಮಾಲೀಕರು ಹಾಗೂ ಹೋಟೆಲ್ ನಡೆಸುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಕೆಜಿ ಹಸಿ ಕಸಕ್ಕೆ 12 ರೂಪಾಯಿ ಎಂದರೆ, ತಿಂಗಳಿಗೆ ಸಾವಿರಾರು ರೂಪಾಯಿ ಆಗುತ್ತದೆ ಎಂದು ಹೋಟೆಲ್ ಉದ್ದಿಮೆ ನಡೆಸುವವರು ಅಸಮಾಧಾನ ಹೊರ ಹಾಕಿದ್ದಾರೆ.
ಇದು ಅವೈಜ್ಞಾನಿಕ ಮೊದಲೇ ಹೇಳಬೇಕಿತ್ತು: ಪಿ.ಸಿ.ರಾವ್
ಈ ರೀತಿ ಕಸಕ್ಕೆ ಸೆಸ್ ವಿಧಿಸಲು ಮುಂದಾಗಿರುವುದು ಅತ್ಯಂತ ಅವೈಜ್ಞಾನಿಕ ಎಂದು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ಸ್ ಅಧ್ಯಕ್ಷ ಪಿ.ಸಿ.ರಾವ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಒನ್ ಇಂಡಿಯಾ ಕನ್ನಡ (Oneindia kannada)ದೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಬಿಬಿಎಂಪಿ ಈ ರೀತಿ ನೋಟಿಸ್ ಜಾರಿ ಮಾಡಿದೆ.
ಪ್ರತಿ ಕೆಜಿ ಹಸಿಕಸಕ್ಕೆ 12 ರೂಪಾಯಿ ಎನ್ನುವುದು ಅತ್ಯಂತ ಅವೈಜ್ಞಾನಿಕ ಹಾಗೂ ಹೊರೆಯಾಗುತ್ತದೆ. ಹೋಟೆಲ್ ಉದ್ಯಮ ಪ್ರಾರಂಭಿಸುವಾಗಲೇ ಹೇಳಿದ್ದರೆ, ಏನಾದರೂ ವ್ಯವಸ್ಥೆ ಮಾಡಿಕೊಳ್ಳಬಹುದಾಗಿತ್ತು. ಆದರೆ, ಈಗ ಹೇಳಿದರೆ ಏನ್ಮಾಡ್ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಹೋಟೆಲ್ಗಳಲ್ಲೇ ಕಸ ಸಂಸ್ಕರಣೆ ಮಾಡುವುದು ಸವಾಲಿನ ಕೆಲಸ. ಪ್ಲಾನಿಂಗ್ ಆರ್ಡರ್ನಲ್ಲೇ ಇದನ್ನು ಸೇರಿಸಬೇಕಾಗಿತ್ತು. ಈಗ ಬಿಬಿಎಂಪಿ ಏಕಾಏಕಿ ನೋಟಿಸ್ ಜಾರಿ ಮಾಡ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ
ಈ ಬೆಲೆ ಏರಿಕೆ ಮುಂದಿನ ದಿನಗಳಲ್ಲಿ ಹೋಟೆಲ್ನಲ್ಲಿ ಊಟ, ತಿಂಡಿ ಸವಿಯುವ ಗ್ರಾಹಕರಿಗೂ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಬಿಬಿಎಂಪಿಯು ಹೋಟೆಲ್ಗಳ ಮೇಲೆ ಹೊಸ ಸೆಸ್ ವಿಧಿಸಲು ಪ್ರಾರಂಭಿಸಿದರೆ, ಅದು ಹೋಟೆಲ್ ಉದ್ಯಮಗಳಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಲಿದ್ದು, ಇದರಿಂದ ಹೋಟೆಲ್ಗಳು ಅನಿವಾರ್ಯವಾಗಿ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.












Click it and Unblock the Notifications