75ನೇ ಸ್ವಾತಂತ್ಯ್ರ ಸಂಭ್ರಮ: ಬೆಂಗಳೂರಿನಲ್ಲಿ 2 ಲಕ್ಷ ರಾಷ್ಟ್ರಧ್ವಜ ವಿತರಿಸಲು ಬಿಬಿಎಂಪಿ ಸಿದ್ಧತೆ
ಬೆಂಗಳೂರು, ಜುಲೈ 25; ಭಾರತ ಸ್ವಾತಂತ್ಯ್ರದ 75ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಭಾರತದಾದ್ಯಂತ 20 ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ ಕೂಡ ಕೇಂದ್ರದ ಆಶಯಕ್ಕೆ ಬೆಂಬಲ ಸೂಚಿಸಿದೆ. ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜ ವಿತರಣೆಯ ಜವಾಬ್ದಾರಿಯನ್ನು ಸರ್ಕಾರ ಬಿಬಿಎಂಪಿಗೆ ವಹಿಸಿದೆ.
ಸರ್ಕಾರ 2 ಲಕ್ಷ ತ್ರಿವರ್ಣ ಧ್ವಜಗಳನ್ನು ಬಿಬಿಎಂಪಿಗೆ ನೀಡಲಿದ್ದು, ಬೆಂಗಳೂರಿನ ಎಲ್ಲೆಡೆ ಇವುಗಳನ್ನು ಹಂಚಲಾಗುತ್ತದೆ. ಮನೆಗಳು, ಅಂಗಡಿಗಳಿಗೆ ಈ ಧ್ವಜಗಳನ್ನು ವಿತರಿಸುವ ಜವಾಬ್ದಾರಿ ಈ ಬಿಬಿಎಂಪಿ ಪಾಲಿಗೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ತ್ರಿವರ್ಣ ಧ್ವಜಗಳನ್ನು ಬಿಬಿಎಂಪಿಗೆ ನೀಡುವ ಸಾಧ್ಯತೆ ಇದೆ.
ನೂರು ಕೋಟಿಗೂ ಹೆಚ್ಚು ಜನರಿಂದ 'ಹರ್ ಘರ್ ತಿರಂಗ' ಬಾವುಟ ಹಾರಾಟ
"ಧ್ವಜದೊಂದಿಗಿನ ನಮ್ಮ ಸಂಬಂಧವು ಯಾವಾಗಲೂ ವೈಯಕ್ತಿಕಕ್ಕಿಂತ ಹೆಚ್ಚು ಔಪಚಾರಿಕ ಮತ್ತು ಸಾಂಸ್ಥಿಕವಾಗಿದೆ. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಇಡೀ ದೇಶದಲ್ಲಿ ಸಾಮೂಹಿಕವಾಗಿ ಧ್ವಜವನ್ನು ಮನೆಗೆ ತರುವುದು ತ್ರಿವರ್ಣ ಧ್ವಜದ ಜೊತೆ ವೈಯಕ್ತಿಕ ಬಾಂಧವ್ಯದ ಸಂಕೇತ ಮಾತ್ರವಲ್ಲ ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಬದ್ಧತೆಯನ್ನು ತೋರಿಸುವ ವಿಧಾನವಾಗಿದೆ" ಎಂಬುದು ಅಭಿಯಾನದ ಸಂದೇಶವಾಗಿದೆ.
ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರಚೋದಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವುದು ಅಭಿಯಾನದ ಹಿಂದಿನ ಉದ್ಧೇಶವಾಗಿದೆ.
Just in: ರಾಷ್ಟ್ರ ಧ್ವಜ ಸಂಹಿತೆಯಲ್ಲಿ ಬದಲಾವಣೆ ಮಾಡಿದ ಸರ್ಕಾರ
ಮನೆ ಬಾಗಿಲಿಗೆ ಧ್ವಜ ತಲುಪಿಸಲಿದೆ ಬಿಬಿಎಂಪಿ
ಪ್ರತಿ ರಾಷ್ಟ್ರಧ್ವಜಕ್ಕೆ 25 ರೂಪಾಯಿ ಶುಲ್ಕ ವಿಧಿಸಲು ಬಿಬಿಎಂಪಿ ಯೋಜಿಸಿದೆ. ಧ್ವಜಗಳು ವಾರ್ಡ್ ಕಚೇರಿಗಳಲ್ಲಿ ಲಭ್ಯವಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ನಾವು ಮನೆಗಳಿಗೆ ಭೇಟಿ ನೀಡಿ ನಿವಾಸಿಗಳಿಗೆ ಹಸ್ತಾಂತರಿಸಲು ಯೋಜಿಸುತ್ತಿದ್ದೇವೆ" ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನವು ಆಗಸ್ಟ್ 13 ಮತ್ತು 15 ರ ನಡುವೆ ದೇಶಾದ್ಯಂತ 20 ಕೋಟಿ ಮನೆಗಳ ಮೇಲೆ ಧ್ವಜಗಳನ್ನು ಹಾರಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು 'ಆಜಾದಿ ಕಾ ಅಮೃತ ಮಹೋತ್ಸವ' ಕಾರ್ಯಕ್ರಮದ ಭಾಗವಾಗಿ ತ್ರಿವರ್ಣ ಧ್ವಜವನ್ನು ಮನೆಗೆ ತರಲು ಮತ್ತು ಹಾರಿಸಲು ದೇಶದ ಜನತೆಗೆ ಕರೆ ನೀಡಿದೆ.
ಬಿಬಿಎಂಪಿ ವಲಯವಾರು ಧ್ವಜ ಹಂಚಿಕೆ
ಬಿಬಿಎಂಪಿ ವಲಯವಾರು ಒಟ್ಟು 2 ಲಕ್ಷ ಧ್ವಜಗಳನ್ನು ಹಂಚಿಕೆ ಮಾಡಲಾಗಿದೆ. ಮಹದೇವಪುರ - 20000, ದಾಸರ ಹಳ್ಳಿ-10,000, ರಾಜರಾಜೇಶ್ವರಿ ನಗರ- 16,000, ಬೊಮ್ಮನಹಳ್ಳಿ - 22000, ಯಲಹಂಕ ವಲಯ-14000, ಪೂರ್ವ ವಲಯ-42,000, ಪಶ್ಚಿಮ ವಲಯ- 36,000, ದಕ್ಷಿಣ ವಲಯ-40000 ಧ್ವಜಗಳನ್ನು ವಿತರಣೆ ಮಾಡಲಾಗಿದೆ.
ಆಯಾ ವಲಯವಾರು ಕಾರ್ಯಪಾಲಕ ಅಭಿಯಂತರರು ಧ್ವಜ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಮತ್ತು ಈ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿ ಕಾರ್ಯ ನಿರ್ವಹಿಸಲು ಸಾರ್ವಜನಿಕ ಸಂಪರ್ಕಾಕಾರಿಗೆ ವಹಿಸಲಾಗಿದೆ ಎಂದು ಬೆಂಗಳೂರು ಮಹಾ ನಗರ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಾರಲಿವೆ ಒಂದು ಕೋಟಿ ಧ್ವಜ
ಹರ್ ಘರ್ ತಿರಂಗ ಅಭಿಯಾನದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಭರವಸೆ ನೀಡಿದ್ದರು, ಮನೆ ಮತ್ತು ಕಚೇರಿಗಳ ಮೇಲೆ ಒಂದು ಕೋಟಿ ಧ್ವಜಗಳನ್ನು ಹಾರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪೈಕಿ ಶೇ.60ರಷ್ಟು ಗ್ರಾಮೀಣ ಪ್ರದೇಶದ ಸರ್ಕಾರಿ, ಖಾಸಗಿ ಕಚೇರಿಗಳು, ಶಾಲೆ, ಕಾಲೇಜುಗಳು, ಹೆಚ್ಚು ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಹಾರಿಸಲಾಗುವುದು. ಉಳಿದ ಶೇ.40ರಷ್ಟುರಾಷ್ಟ್ರಧ್ವಜಗಳನ್ನು ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಹಾರಿಸಲಾಗುವುದು ಎಂದರು.
ಧಾರವಾಡದಲ್ಲಿ 50 ಲಕ್ಷ ಧ್ವಜ ತಯಾರಿ
ಕಾರ್ಯಕ್ರಮಕ್ಕೆ ಧ್ವಜ ಪೂರೈಕೆ ಮಾಡಲು ಖಾದಿ ಧ್ವಜಕ್ಕೆ ಹೆಸರುವಾಸಿಯಾಗಿರುವ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೆ ಆರ್ಡರ್ ನೀಡಲಾಗುವುದು. ಸ್ವಸಹಾಯ ಸಂಘಗಳ ಮೂಲಕ 50 ಲಕ್ಷದಷ್ಟು ಧ್ವಜಗಳನ್ನು ರಾಜ್ಯಕ್ಕಾಗಿಯೇ ತಯಾರು ಮಾಡಲಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರಧ್ವಜಗಳನ್ನು ರವಾನಿಸುವ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಯಿತು. ಕಳೆದ ಕೆಲವು ತಿಂಗಳುಗಳಲ್ಲಿ, ಐತಿಹಾಸಿಕ ವರ್ಷವನ್ನು ಜನಪ್ರಿಯಗೊಳಿಸಲು ರಾಜ್ಯ ಸರ್ಕಾರವು ಮೆಟ್ರೋ ರೈಲಿನ ಕೋಚ್ಗಳು, ಬಸ್ ನಿಲ್ದಾಣಗಳು ಮತ್ತು ಪ್ರಮುಖ ಸ್ಥಾನಗಳಲ್ಲಿ ಪ್ರಚಾರ ಮಾಡುತ್ತಿದೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಖತಿ ಇಲಾಖೆಯ ನಿರ್ದೇಶಕರು ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಉನ್ನತ ಮಟ್ಟದ ಸಮಿತಿ ಎರಡು ಲಕ್ಷ ಧ್ವಜಗಳನ್ನು ಬೆಂಗಳೂರು ಮಹಾ ನಗರ ಪಾಲಿಕೆಗೆ ವಿತರಿಸಿದ್ದು, ಅವುಗಳನ್ನು ವಲಯವಾರು ಹಂಚಿಕೆ ಮಾಡಲಾಗಿದೆ.