ಹೊಂಗಸಂದ್ರ ವಾರ್ಡ್, ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ
ಬೆಂಗಳೂರು, ಆಗಸ್ಟ್ 11 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಜಾತಿ ಪ್ರಮಾಣ ಪತ್ರ ಸಲ್ಲಿಸುವಾಗ ಆದ ಗೊಂದಲದಿಂದಾಗಿ ನಾಮಪತ್ರ ತಿರಸ್ಕಾರವಾಗಿದೆ.
ಕೆ.ಮಹೇಶ್ವರಿ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಂಗಸಂದ್ರ ವಾರ್ಡ್ ( ನಂಬರ್ 189 ) ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರದ ಜೊತೆಗೆ ಪತಿಯ ಜಾತಿ ಪ್ರಮಾಣವನ್ನು ಸಲ್ಲಿಸಿದ್ದರು. [ಕಾಂಗ್ರೆಸ್ ಪಟ್ಟಿಯಲ್ಲಿ ಜಾತಿ, ವಯಸ್ಸು ಲೆಕ್ಕಾಚಾರ]

ಚುನಾವಣಾಧಿಕಾರಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು, ಮಹೇಶ್ವರಿ ಅವರು ಚುನಾವಣಾ ಪತ್ರದೊಂದಿಗೆ ನಕಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು, ಚುನಾವಣಾ ಆಯೋಗದ ದಾರಿ ತಪ್ಪಿಸಿದ್ದಾರೆ. ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ದೂರು ಸಲ್ಲಿಸಿದ್ದರು. [ಕಾಂಗ್ರೆಸ್ ಪ್ರಣಾಳಿಕೆ ಓದಿ]
ಹಿಂದುಳಿದ ವರ್ಗದ (ಎ) ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವಾಗ ಮಹೇಶ್ವರಿ ಅವರು ಪತಿಯ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಸತೀಶ್ ರೆಡ್ಡಿ ಅವರು ಸಲ್ಲಿಸಿದ್ದ ದೂರನ್ನು ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ನಾಮಪತ್ರವನ್ನು ತಿರಸ್ಕರಿಸಿದ್ದಾರೆ.
ಅಂದಹಾಗೆ ಹೊಂಗಸಂದ್ರ ವಾರ್ಡ್ನಲ್ಲಿ ಭಾರತಿ ರಾಮಚಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಸ್ಪರ್ಧಿಸಿದ ಮೂರು ವಾರ್ಡ್ಗಳ ಪೈಕಿ ಹೊಂಗಸಂದ್ರವು ಸೇರಿದೆ. ಆ.22ರ ಶನಿವಾರ ಮತದಾನ ನಡೆಯಲಿದ್ದು, ಆ.25ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications