ಆಕರ್ಷಕ ಬ್ರಾಂಡ್ ಬೆಂಗಳೂರಿಗೆ ಶಿಫಾರಸು ಮಾಡುವಂತೆ ಬಿಬಿಎಂಪಿ ಆಯುಕ್ತರ ಮನವಿ, ನೀವು ಮಾಡಿ
ಬೆಂಗಳೂರು, ಜುಲೈ 27: ಬ್ರಾಂಡ್ ಬೆಂಗಳೂರು ಯೋಜನೆಯಡಿ ಜನಹಿತ/ಆಕರ್ಷಕ ಬೆಂಗಳೂರು ವಿಷಯಾಧಾರಿತವಾಗಿ ಬರುವ ಪ್ರಮುಖ ಶಿಫಾರಸುಗಳನ್ನು ಪರಿಗಣಿಸಿ ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಕಾರ್ಯರೂಪಕ್ಕೆ ತರಲಾಗುವುದೆಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ಆಕರ್ಷಕ ಬೆಂಗಳೂರಿನ ನೋಡಲ್ ಅಧಿಕಾರಿಯಾದ ಜಯರಾಮ್ ರಾಯಪುರ ತಿಳಿಸಿದರು.
ಬ್ರಾಂಡ್ ಬೆಂಗಳೂರು ಯೋಜನೆಯಡಿ ರಚಿಸಿರುವ ಸಮಿತಿಯಲ್ಲಿ ಬರುವ ಜನಹಿತ/ಆಕರ್ಷಕ ಬೆಂಗಳೂರು ವಿಷಯಾಧಾರಿತ ರಚಿಸಿರುವ ಪ್ರತ್ಯೇಕ ಸಮಿತಿಯ ಜೊತೆ ಬುಧವಾರ ಮೊದಲ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಗರದಲ್ಲಿನ ಮೇಲು ಸೇತುವೆಗಳ ಕೆಳಗಿರುವ ಜಾಗವನ್ನು ಜನರ ಅನುಕೂಲಕ್ಕಾಗಿ ಹೇಗೆ ಬಳಸಿಕೊಳ್ಳಬೇಕು, ರಸ್ತೆ ಬದಿ ಆಸನಗಳ ವ್ಯವಸ್ಥೆ, ನಗರದ ಗೋಡೆಗಳ ಮೇಲೆ ನಗರದ ಸಂಸ್ಕೃತಿಯ ಬಗ್ಗೆ ಕಲಾತ್ಮಕವಾಗಿ ಚಿತ್ರಿಸುವುದು.

ನಗರದ ಪಾರಂಪರಿಕ ತಾಣಗಳ ಚಿತ್ರಣ, ಬೆಂಗಳೂರು/ಸಾಂಸ್ಕೃತಿಕ ಹಬ್ಬಗಳನ್ನು ಮಾಡುವುದು. ಪಾರಂಪರಿಕ ತಾಣಗಳನ್ನು ಪ್ರದರ್ಶಿಸುವ ಆಂಪಿ-ಥಿಯೇಟರ್ಗಳ ನಿರ್ಮಾಣ, ಸಾರ್ವಜನಿಕ ಚರ್ಚೆ/ಸಂವಾದಗಳಿಗೆ ತೆರೆದ ಪ್ರದೇಶಗಳ ಬಳಕೆ, ಜನರ ಓದುವ ಹವ್ಯಾಸವನ್ನು ಹೆಚ್ಚಿಸಲು ಪಾಲಿಕೆಯು ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ವಾಚನಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಇನ್ನಿತರೆ ಆಕರ್ಷಕ ವಿಷಯಗಳ ಕುರಿತು ಶಿಫಾರಸುಗಳನ್ನು ನೀಡುವಂತೆ ಸಭೆಯಲ್ಲಿ ಅವರು ಮನವಿ ಮಾಡಿದರು.
ತಿಂಗಳಲ್ಲಿ 20 ಯೋಜನೆ ಅನುಷ್ಠಾನಕ್ಕೆ ಸೂಚನೆ
ಬೆಂಗಳೂರನ್ನು ಆಕರ್ಷಕ ನಗರವನ್ನಾಗಿ ರೂಪಿಸುವ ಸಲುವಾಗಿ ಬರುವಂತಹ ಶಿಫಾರಸುಗಳನ್ನು ಒಂದು ತಿಂಗಳ ಅವಧಿಯಲ್ಲಿ ಪರಿಗಣಿಸಿ, ಕನಿಷ್ಠ 20 ಯೋಜನೆಗಳನ್ನು ನಿಗಧಿತ ಸಮಯದೊಳಗಾಗಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಿಬೇಕು. ಅದಕ್ಕೆ ಬೇಕಾದಂತಹ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು ಅವರು ಅಧಿಕಾರಿಗಳಿಗೆ ಹೇಳಿದರು.

ಬ್ರಾಂಡ್ ಬೆಂಗಳೂರಿಗಾಗಿ ಬರುವ ಶಿಫಾರಸುಗಳನ್ನು ಕಡಿಮೆ ಅವಧಿ (ಶಾರ್ಟ್ ಟರ್ಮ್), ಮಧ್ಯಮ (ಮೀಡಿಯಮ್) ಮತ್ತು ದೀರ್ಘಾವಧಿ (ಲಾಂಗ್ ಟರ್ಮ್) ಎಂದು ವಿಂಗಡಿಸಿ ಅದನ್ನು ಇಂತಿಷ್ಟು ದಿನಗಳಲ್ಲಿ ಮುಗಿಸುವ ಯೋಜನೆ ರೂಪಿಸಿಕೊಳ್ಳಬೇಕು.
ಈ ಸಂಬಂಧ ಆಕರ್ಷಕ ಬೆಂಗಳೂರಿಗಾಗಿ ರಚಿಸಿರುವ ಪ್ರತ್ಯೇಕ ಸಮಿತಿ ಜೊತೆ 2ನೇ ಸಭೆಯನ್ನು ಆಗಸ್ಟ್ 8 ರಂದು ನಡೆಯಲಿದೆ. ಆ ಸಭೆ ಹೊತ್ತಿಗೆ ಅಂತಿಮ ಶಿಫಾರಸುಗಳನ್ನು ಸರ್ಕಾರದ ಮುಂದಿರಲಿವೆ. ಅವುಗಳನ್ನು ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ಬ್ರಾಂಡ್ ಬೆಂಗಳೂರಿಗಾಗಿ ಸಲ್ಲಿಕೆಯಾದ ಶಿಫಾರಸುಗಳು
* ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್ ನಿರ್ಮಿಸುವುದು. ಬೆಂಗಳೂರಿನ ಕೇಂದ್ರ ಭಾಗದಲ್ಲಿ ಪಾರಂಪರಿಕ ಕಾರಿಡಾರ್ ನಿರ್ಮಿಸುವುದು.
* ಬೆಂಗಳೂರಿನ ಉದ್ಯಮಗಳ ಬಗ್ಗೆ ತಿಳಿಸಲು ವಿಜೃಂಭಣೆಯಿಂದ ಡಿಸೆಂಬರ್ ತಿಂಗಳಲ್ಲಿ 10 ದಿನಗಳ ಬೆಂಗಳೂರು ಹಬ್ಬವನ್ನು ಆಚರಿಸುವುದು.
* ಪ್ರತಿ ವರ್ಷ ಜೂನ್ ಅಂತ್ಯದಲ್ಲಿ 7 ದಿನಗಳ ಸಾಂಸ್ಕೃತಿಕ ಉತ್ಸವ ನಡೆಸುವುದು. ಬೆಂಗಳೂರಿನಲ್ಲಿ ಮಾರ್ಚ್ ಮೊದಲ ವಾರದಲ್ಲಿ ಹೂ ಹಬ್ಬ ವನ್ನು ಆಚರಿಸುವುದು.
* ಜೆಸಿ ರಸ್ತೆಯಲ್ಲಿರುವ ಪಾಲಿಕೆ ಸ್ಥಳದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ಸಭಾಂಗಣ ಹಾಗೂ ಆರ್ಟ್ ಗ್ಯಾಲರಿ ನಿರ್ಮಾಣ ಮಾಡುವುದು.
* ನಗರದಲ್ಲಿ ಪ್ರಮುಖ ಪಾರಂಪರಿಕ ಕಟ್ಟಡ, ಪರಿಸರ ತಾಣಗಳು, ಪ್ರವಾಸಿ ತಾಣಗಳನ್ನು ಗುರುತಿಸುವುದು ಹಾಗೂ ಇವುಗಳ ಐತಿಹಾಸಕತೆಯ ಪರಿಚಯ ಹೇಳುವುದು.
* ಕೆರೆಗಳ ಹಬ್ಬ, ಪಾರ್ಕ್ ಗಳಲ್ಲಿ ಓಪನ್ ಥಿಯೇಟರ್ ಗಳ ಸಮರ್ಪಕ ಬಳಕೆ, ಥಿಯೇಟರ್ ಹಬ್, ಮಕ್ಕಳಿಗಾಗಿಯೇ ಸಾಂಸ್ಕೃತಿಕ ಹಬ್ ನಿರ್ಮಿಸುವುದು.
* ಮೇಲುಸೇತುವೆಗಳ ಕೆಳಭಾಗವನ್ನು ವಿವಿಧ ಥೀಮ್ ಗಳಲ್ಲಿ ಅಭಿವೃದ್ಧಿಪಡಿಸುವುದು.
* ನಗರದ ವಿವಿಧ ಭಾಗಗಳಲ್ಲಿ ಭಾನುವಾರದಂದು ನಾಲ್ಕು ಫಥಗಳಿರುವ ರಸ್ತೆಯಲ್ಲಿ ಎರಡು ಪಥದಲ್ಲಿ ಮಾತ್ರ ಸಂಚಾರಕ್ಕೆ ಅನುಮಾಡಿಕೊಟ್ಟು, ಮತ್ತೆರಡು ಪಥವನ್ನು ಬ್ಲಾಕ್ ಮಾಡಿ ಸಾರ್ವಜನಿಕರಿಂದ ಸಮುದಾಯ ಕಾರ್ಯಕ್ರಮಗಳು/ವಿವಿಧ ಚಟುವಟಿಕೆಗಳನ್ನು ಮಾಡಲು ಅನುವು ಮಾಡುವುದು.
ಸಭೆಯಲ್ಲಿ ಸಮಿತಿಯ ನಗರ ಯೋಜಕರಾದ ನರೇಶ್ ನರಸಿಂಹನ್, ಸಾಮಾಜ ಸೇವಕರಾದ ರಘುನಂದನ್ ರಾಮಣ್ಣ, ತಂತ್ರಜ್ಞಾನರಾದ ಪ್ರಶಾಂತ್ ಪ್ರಕಾಶ್, ಕಲಾ ವಿನ್ಯಾಸಕ ಮತ್ತು ಪಾರಂಪರಿಕ ತಜ್ಞರಾದ ಕೃಷ್ಣಕುಮಾರ್, ಸಾಹಿತಿಯಾದ ಕೆ.ವೈ. ನಾರಾಯಣಸ್ವಾಮಿ, ಕಲೆಗಾರರಾದ ಶಶಿಧರ ಭರಿಘಾಟ್, ನಗರ ತಜ್ಞರಾದ ಬಿ. ರವಿಚಂದ್ರನ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications