ಬೆಂಗಳೂರಲ್ಲಿ ಸಂಚಾರ ವ್ಯವಸ್ಥೆ ನಿರ್ವಹಣೆ, ಬಿಬಿಎಂಪಿ ಆಯುಕ್ತರ ಸೂಚನೆ
ಬೆಂಗಳೂರು ಆಗಸ್ಟ್ 08: ಸಮರ್ಪಕ ವಾಹನ ಸಂಚಾರ, ಸಂಚಾರ ದಟ್ಟಣೆ ನಿರ್ವಹಣೆ ನಿಟ್ಟಿನಲ್ಲಿ ನಗರದ ಹೊರ ವರ್ತುಲ ರಸ್ತೆಯ ಪಕ್ಕದ ಸರ್ವೀಸ್ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ತಡೆಗೆ ಸೂಕ್ತ ಕ್ರಮ ವಹಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಜೊತೆಗಿನ ಸಮನ್ವಯ ಸಭೆಯಲ್ಲಿ ತುಷಾರ್ ಗಿರಿನಾಥ್ ಮಾತನಾಡಿದರು.
ಬೆಂಗಳೂರು; ಮಗುವಿನ ಜತೆ ನೇಣು ಬಿಗಿದುಕೊಂಡು ದಂತ ವೈದ್ಯೆ ಆತ್ಮಹತ್ಯೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಗರದ ಹೊರ ವರ್ತುಲ ರಸ್ತೆಗಳ ಸರ್ವೀಸ್ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಇದರಿಂದ ಸರ್ವೀಸ್ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಈ ಸಂಬಂಧ ಹೊರವರ್ತುಲ ರಸ್ತೆಗಳ ಸರ್ವೀಸ್ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಬಾರದು ಹಾಗೂ ಸಂಚಾರಿ ಪೊಲೀಸ್ ವಿಭಾಗ ಹಾಗೂ ಪಾಲಿಕೆ ಸಹಯೋಗದಲ್ಲಿ ನೋ ಫಾರ್ಕಿಂಗ್ ನಾಮಫಲಕಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕೋಲ್ಡ್ ಮಿಕ್ಸ್ ಬಳಸಿ ರಸ್ತೆಗುಂಡಿ ಮುಚ್ಚಿ
ನಗರದಲ್ಲಿ ಪ್ರತಿನಿತ್ಯ ಮಳೆ ಸುರಿಯುತ್ತಿರುವ ಕಾರಣ ಹಾಟ್ ಮಿಕ್ಸ್ ರಸ್ತೆ ಗಂಡಿಗಳನ್ನು ಸರಿಯಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಚಾರಕ್ಕೆ ಅನುಕೂಲ ಮಾಡುವ ಉದ್ದೇಶದಿಂದ ಆದಷ್ಟು ಕೂಡಲೇ ಕೋಲ್ಡ್ ಮಿಕ್ಸ್ ಬಳಸಿ ರೆಸ್ತೆ ಗುಂಡಿಗಳನ್ನು ಮುಚ್ಚಬೇಕು. ಇದನ್ನು ಸೂಕ್ತ ರೀತಿಯಲ್ಲಿ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರಿಗೆ ತಿಳಿಸಲಾಯಿತು.
ಪಾದಾಚಾರಿ ರಸ್ತೆಯಲ್ಲಿನ ವ್ಯಾಪಾರ ತಡೆಗಟ್ಟಿ
ಹೊರ ವರ್ತುಲ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಕೆಪಿಟಿಸಿಎಲ್, ಬೆಸ್ಕಾಂ, ಬೆಂಗಳೂರು ಜಲಮಂಡಳಿ ಸೇರಿದಂತೆ ಇನ್ನಿತರ ಇಲಾಖೆಗಳು ಕೆಲಸ ಮಾಡುವ ಸಾಮಗ್ರಿಗಳನ್ನು ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲೇ ಬಿಟ್ಟಿದ್ದರೆ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಅವನ್ನು ಹತ್ತಿರದಲ್ಲಿರುವ ಖಾಲಿ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಸೂಚನೆ ಮೇರೆಗೂ ಎಲ್ಲೆಂದರಲ್ಲಿ ರಸ್ತೆ, ಪಾದಾಚಾರಿ ಮಾರ್ಗದ್ಲಲಿ ಕಸ, ಕಟ್ಟಡಗಳ ಸಾಮಗ್ರಿ ಹಾಕುವುದು ಕಂಡು ಬಂದರೆ ಸಾಮಗ್ರಿ ವಶಕ್ಕೆ ಪಡೆದು ದಂಡ ವಿಧಿಸಬೇಕೆಂದು ಎಂದು ತಾಕೀತು ಮಾಡಿದರು.
ರಸ್ತೆಗಿಂತ ಎತ್ತರವಿರುವ ಮ್ಯಾನ್ ಹೋಲ್ಸ್ ಸರಿಪಡಿಸಿ
ನಗರದ ಪ್ರಮುಖ ರಸ್ತೆಗಳಲ್ಲಿ ಮ್ಯಾನ್ ಹೋಲ್ಗಳು ರಸ್ತೆ ಮಟ್ಟಕ್ಕಿತ ಎತ್ತರವಾಗಿವೆ. ಇದು ಕೂಡ ಸುಗಮ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತದೆ. ಆದ್ದರಿಂದ ಎಲ್ಲೆಲ್ಲಿ ರಸ್ತೆಗಳಿಗಿಂತ ಮ್ಯಾನ್ ಹೋಲ್ಗಳು ಎತ್ತರವಾಗಿವೆಯೇ ಅವನ್ನು ಜಲಮಂಡಳಿಯಿಂದ ಗುರುತಿಸಿ ದುರಸ್ತಿಗೊಳಿಸಿ. ವಾಹನ ಸವಾರರಿಗೆ ಅನುಕೂಲ ಮಾಡಿ. ಇನ್ನೂ ರಸ್ತೆ ಬದಿ ಪಾದಚಾರಿ ಮಾರ್ಗಗಳ ಸೈಡ್ ಡ್ರೈನ್ಗಳ ಮೇಲೆ ಅಳವಡಿಸಿರುವ ಸ್ಲ್ಯಾಬ್ ಗಳು ಹಾಳಾಗಿವೆ. ಇದರಿಂದ ಮಳೆಗಾಲದಲ್ಲಿ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಆದ್ದರಿಂದ ಎಲ್ಲೆಲ್ಲಿ ಸ್ಲ್ಯಾಬ್ ಗಳು ಹಾಳಾಗಿವೆ ಅವುಗಳನ್ನು ತ್ವರಿತವಾಗಿ ಸರಿಪಡಿಸಿ ಎಂದರು.
ಜಂಕ್ಷನ್ಗಳಲ್ಲಿನ ಕಾಮಗಾರಿ ಬೇಗ ಪೂರ್ಣಗೊಳಿಸಿ
ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಪ್ರಮುಖ ರಸ್ತೆ ಜಂಕ್ಷನ್ ಗಳಾದ ಸಿಲ್ಕ್ ಬೋರ್ಡ್ ಜಂಕ್ಷನ್, ಜಯದೇವ ಜಂಕ್ಷನ್, ಟಿನ್ ಫ್ಯಾಕ್ಟರಿ ಮತ್ತು ಹೆಬ್ಬಾಳ ಜಂಕ್ಷನ್, ಗೊರಗುಂಟೆಪಾಳ್ಯ, ಕಾಡುಬಿಸಲಹಳ್ಳಿ ಜಂಕ್ಷನ್, ಸಾರಕ್ಕಿ ಜಂಕ್ಷನ್, ಆರ್.ಆರ್.ಎಂ.ಆರ್ ಜಂಕ್ಷನ್, ಇಬ್ಬಲೂರು ಜಂಕ್ಷನ್ ಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತಾಗಿ ಪೂರ್ಣಗೊಳಿಸಿ. ಈ ಜಂಕ್ಷನ್ಗಳಲ್ಲಿ ವಾಹನ ನಿಲ್ಲದಂತೆ, ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತುಷಾರ್ ಹೇಳಿದರು.
ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಜಲಮಂಡಳಿ ಅಧ್ಯಕ್ಷ ಜಯರಾಮ್, ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಬಿಎಂಟಿಸಿ ನಿರ್ದೇಶಕ ಸೂರ್ಯಸೇನ್, ಬಿಬಿಎಂಪಿ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಕೆಎಸ್ಆರ್ಸಿ, ಬಿಡಿಎ ಇನ್ನಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Recommended Video