Rama Navami 2022: ಬಾಡೂಟ ಪ್ರಿಯ ಬೆಂಗಳೂರಿಗರೆ ಗಮನಿಸಿ, ನಾಳೆ ಮಾಂಸದಂಗಡಿಗಳಿಗೆ ನಿಷೇಧ
ರಾಮನವಮಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ನಾಳೆ ಭಾನುವಾರ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಬೆಂಗಳೂರು, ಏ. 9: ರಾಮನವಮಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ನಾಳೆ ಭಾನುವಾರ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬರುವ ಯಾವುದೇ ಪ್ರದೇಶದಲ್ಲೂ ಏಪ್ರಿಲ್ 10, ಭಾನುವಾರದಂದು ಯಾವುದೇ ಮಾಂಸದಂಗಡಿ ತೆರೆಯುವಂತಿಲ್ಲ ಎಂದು ಬಿಬಿಎಂಪಿ ನಿನ್ನೆ ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ಈ ಮೊದಲು ಗಾಂಧಿ ಜಯಂತಿಯಂದು ಮಾತ್ರವೇ ಮಾಂಸ ಮಾರಾಟವನ್ನು ಅಧಿಕೃತವಾಗಿ ಬಂದ್ ಮಾಡಲಾಗುತ್ತಿತ್ತು. ಉಳಿದಂತೆ ವಿವಿಧ ಹಬ್ಬ ಹರಿದಿನಗಳಂದು ಅನೇಕ ಮಾಂಸದಂಗಡಿಗಳು ಸ್ವಯಂ ಆಗಿ ಬಂದ್ ಆಗುತ್ತಿದ್ದವು. ಇತ್ತೀಚೆಗೆ ಹಬ್ಬ ಹರಿದಿನಗಳಂದು ಸರಕಾರವೇ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಕಳೆದ ಮಹಾಶಿವರಾತ್ರಿ ಮತ್ತು ಗಣೇಶ ಚತುರ್ಥಿಯಂದೂ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿತ್ತು.
ದೆಹಲಿಯಲ್ಲಿ 9 ದಿನ ನಿಷೇಧ:
ಇನ್ನು, ರಾಜಧಾನಿ ದೆಹಲಿಯ ದಕ್ಷಿಣ ಮತ್ತು ಪೂರ್ವ ಭಾಗದ ಪ್ರದೇಶಗಳಲ್ಲಿ ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ಮಾಂಸ ಮಾರಾಟ ನಿಷೇಧ ಹಾಕಲಾಗಿದೆ. ಏಪ್ರಿಲ್ 2ರಂದು ಆರಂಭಗೊಂಡಿರುವ ನಿಷೇಧ 11ನೇ ತಾರೀಖಿನವರೆಗೆ ಇರಲಿದೆ. ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯ ಮೇಯರ್ಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ದೆಹಲಿಯ ಬಹುತೇಕ ಜನರು ನವರಾತ್ರಿ ದಿನಗಳಂದು ಮಾಂಸ ಇರಲಿ, ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನೂ ಮುಟ್ಟುವುದಿಲ್ಲ. ಹೀಗಾಗಿ, ಸಾರ್ವಜನಿಕರ ಭಾವನೆಗೆ ಸ್ಪಂದನೆಯಾಗಿ ನವರಾತ್ರಿ ದಿನಗಳಂದು ಮಾಂಸ ಮಾರಾಟ ಮಾಡಲಾಗಿದೆ ಎಂದು ದಕ್ಷಿಣ ದೆಹಲಿ ನಗರ ಪಾಲಿಕೆ ಮೇಯರ್ ಮುಕೇಶ್ ಸುರಯಾನ್ ಹೇಳಿದ್ದಾರೆ.
"ಸಾರ್ವಜನಿಕ ಸ್ಥಳ ಅಥವಾ ದೇವಸ್ಥಾನಗಳ ಬಳಿ ಮಾಂಸ ಮಾರಾಟವಾಗುತ್ತಿದ್ದರೆ ಜನರಿಗೆ ಮುಜುಗರಾಗುತ್ತದೆ. ಬಹುಸಂಖ್ಯಾತ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತದೆ" ಎಂದು ಈ ಮೇಯರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪೂರ್ವ ದೆಹಲಿ ನಗರ ಪಾಲಿಕೆ ಮೇಯರ್ ಶ್ಯಾಮ್ ಸುಂದರ್ ಅಗರವಾಲ್ ಅವರು, ನವರಾತ್ರಿ ಹಬ್ಬದಲ್ಲಿ ಮಾಂಸದಂಗಡಿಗಳನ್ನ ಮುಚ್ಚಿದರೆ ನಗರದಲ್ಲಿ ಸೌಹಾರ್ದತೆಯ ವಾತಾವರಣಕ್ಕೆ ಪುಷ್ಟಿ ಸಿಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುತೂಹಲವೆಂದರೆ, ದೆಹಲಿಯ ಆಮ್ ಆದ್ಮಿ ಸರಕಾರ ಮಾಂಸ ಮಾರಾಟ ನಿಷೇಧಿಸಿ ಯಾವುದೇ ಆದೇಶ ಹೊರಡಿಸಿಲ್ಲ. ಪಾಲಿಕೆ ಸಂಸ್ಥೆಗಳು ಮಾತ್ರವೇ ತಮ್ಮ ಅಧಿಕಾರ ಬಳಸಿ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾಂಸ ಮಾರಾಟ ನಿಷೇಧದ ಆದೇಶ ಹೊರಡಿಸಿವೆ.
ದೆಹಲಿಯಲ್ಲಿ ದಕ್ಷಿಣ, ಪೂರ್ವ ಮತ್ತು ಉತ್ತರ ನಗರ ಪಾಲಿಕೆಗಳಲ್ಲಿ ಬಿಜೆಪಿಯೇ ಆಡಳಿತದಲ್ಲಿದೆ. ಈಗ ದಕ್ಷಿಣ ಮತ್ತು ಪೂರ್ವ ದೆಹಲಿ ನಗರ ಪಾಲಿಕೆಗಳು ಮಾಂಸ ಮಾರಾಟ ನಿಷೇಧಿಸಿದರೆ, ಉತ್ತರ ದೆಹಲಿ ಪಾಲಿಕೆಯಿಂದ ಈ ಆದೇಶ ಬಂದಿಲ್ಲ.
ಮಾಂಸ ಮಾರಾಟ ನಿರ್ಧಾರಕ್ಕೆ ವಿರೋಧ:
ದೆಹಲಿಯಲ್ಲಿ ಮಾಂಸ ಮಾರಾಟ ನಿಷೇಧಿಸುವ ಈ ಕ್ರಮ ಸಾಕಷ್ಟು ಪರ ವಿರೋಧ ಚರ್ಚೆಗೂ ಕಾರಣವಾಗಿದೆ. ದೆಹಲಿಯಲ್ಲಿರುವ ಬಹುತೇಕ ಮಾಂಸದಂಗಡಿಗಳು ಮುಸ್ಲಿಮರಿಗೆ ಸೇರಿದ್ಧಾಗಿದೆ. ಹೀಗಾಗಿ, ಮುಸ್ಲಿಮರನ್ನ ಆರ್ಥಿಕವಾಗಿ ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲವರು ಆಕ್ಷೇಪಿಸಿದ್ದಾರೆ.
ಬಹುಸಂಖ್ಯಾತ ಜನರ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಮಾಂಸ ಮಾರಾಟ ನಿಷೇಧ ಮಾಡುತ್ತಾರೆ. ಆದರೆ ರಂಜಾನ್ ಹಬ್ಬದಂದು ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಕಾಲಘಟ್ಟದಲ್ಲಿ ಮುಸ್ಲಿಮರು ಆಹಾರ ಸೇವಿಸುವುದಿಲ್ಲ. ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಈ ಅವಧಿಯಲ್ಲಿ ಹೋಟೆಲ್ ಬಂದ್ ಮಾಡಬಹುದಾ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನೆ ಮಾಡಿದ್ದಾರೆ.
ನವರಾತ್ರಿಯಂದು ಮಾಂಸದಂಗಡಿಗಳನ್ನ ಯಾಕೆ ಮುಚ್ಚಬೇಕು? ಉಪವಾಸ ಮಾಡುವವರು ಅಥವಾ ಸಸ್ಯಾಹಾರಿಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಅವರ ಆಹಾರ ಪ್ರವೃತ್ತಿಯನ್ನು ಇತರರ ಮೇಲೆ ಹೇರುವುದು ಎಷ್ಟು ಸರಿ ಎಂದು ಹಲವು ಮಂದಿ ಪ್ರಶ್ನಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications