ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ, ಜಾಹೀರಾತು ಬೈಲಾ ತಿದ್ದುಪಡಿ: ಬಿಬಿಎಂಪಿ ಆಯುಕ್ತ
ಬೆಂಗಳೂರು,ಜನವರಿ 27: ಅಂಗಡಿ ಮುಂಗಟ್ಟುಗಳಲ್ಲಿರುವ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ನಿಯಮಕ್ಕೆ ತಿದ್ದುಪಡಿ ತರುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕನ್ನಡ ಭಾಷೆಗೆ ಆದ್ಯತೆ ನೀಡಲು ಬಿಬಿಎಂಪಿ ಜಾಹೀರಾತು ಬೈಲಾಗಳಿಗೆ ತಿದ್ದುಪಡಿ ತರಲಾಗುತ್ತಿದೆ.
ಜಾಹೀರಾತು ಬೈಲಾ ತಿದ್ದುಪಡಿ ಜಾರಿಯಾದ ಬಳಿಕ ಕಾನೂನಾತ್ಮಕ ಸಮಸ್ಯೆ ಇರುವುದಿಲ್ಲ, ಬಳಿಕ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ನಿಯಮದ ಅನುಷ್ಠಾನ ಸುಲಭ, ಈ ನಿಯಮ ಉಲ್ಲಂಘಿಸುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದರು.

ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ.67ರಷ್ಟು ಪ್ರಾತಿನಿಧ್ಯವಿರಬೇಕು. ಶೇ.33ರಷ್ಟು ಹಿಂದಿ, ಇಂಗ್ಲಿಷ್ ಅಥವಾ ಇತರೆ ಭಾಷೆ ಬಳಸಬಹುದು.
ಕನ್ನಡ ಭಾಷೆಗೆ ಆದ್ಯತೆ ನೀಡದಿದ್ದರೆ ಅಂಗಡಿ ಮಾಲೀಕರಿಗೆ ಬಿಬಿಎಂಪಿಯಿಂದ ನೀಡಲಾದ ಉದ್ದಿಮೆ ಪರವಾನಗಿ ರದ್ದು ಮಾಡುತ್ತೇವೆ ಎಂದು ಪಾಲಿಕೆ ಈ ಹಿಂದೆಯೇ ಹೇಳಿತ್ತು.
ಇದನ್ನು ಪ್ರಶ್ನಿಸಿ ಕೆಲವು ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು, ಈ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹಾಗಾಗಿ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಜಾಹೀರಾತು ಬೈಲಾದಲ್ಲಿ ಕಡ್ಡಾಯ ಮಾಡುತ್ತಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ.
ಬಿಬಿಎಂಪಿ ಹೊರಡಿಸುವ ಪ್ರತಿಯೊಂದು ಸುತ್ತೋಲೆಯಲ್ಲೂ ಕನ್ನಡ ಇರುತ್ತದೆ. ಆದರೆ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಸುತ್ತೋಲೆಗಳು ಮಾತ್ರ ಇಂಗ್ಲಿಷ್ನಲ್ಲೂ ಇರುತ್ತದೆ.












Click it and Unblock the Notifications