ಉತ್ತರಹಳ್ಳಿ ರಸ್ತೆ ಅಗಲೀಕರಣ:143 ಆಸ್ತಿಗಳ ಸ್ವಾಧೀನಕ್ಕೆ ಮುಂದಾದ ಬಿಬಿಎಂಪಿ
ಬೆಂಗಳೂರು, ಮಾರ್ಚ್ 15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಉತ್ತರಹಳ್ಳಿ ಮುಖ್ಯರಸ್ತೆಯ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, 143 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.
ಬಿಬಿಎಂಪಿಯು ಉತ್ತರ ಹಳ್ಳಿಯಿಂದ ಆದಿತ್ಯ ಬೇಕರಿ ಮಾರ್ಗವಾಗಿ ಮೈಸೂರು ರಸ್ತೆ ಕಡೆಗೆ ಸುಮಾರು 3.5 ಕಿ.ಮೀ ಉದ್ದದ ರಸ್ತೆಯನ್ನು ಅಗಲೀಕರಣ ಮಾಡುತ್ತಿದೆ. ಆ ರಸ್ತೆಗೆ ಡಾ. ವಿಷ್ಣುರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ನಾಲ್ಕು ಪಥದ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಬಿಬಿಎಂಪಿ ಚಿಂತನೆ ನಡೆಸಿದೆ.
ಒಂದೊಮ್ಮೆ ನಾಲ್ಕು ಮಾರ್ಗದ ಪಥ ನಿರ್ಮಾಣವಾದರೆ ಮೈಲಸಂದ್ರ ಕೆರೆಯ ಅರ್ಧಭಾಗ ಹೋಗುತ್ತದೆ. ಜತೆಗೆ ಮಹಾವೀರ್ ಲೇಕ್ಸ್ ಅಪಾರ್ಟ್ಮೆಂಟ್ ಉಳಿಸುವ ಉದ್ದೇಶದಿಂದಲೂ ಬಿಬಿಎಂಪಿ ಎರಡು ಮಾರ್ಗದ ರಸ್ತೆಯನ್ನು ನಿರ್ಮಿಸಲು ಮುಂದಾಗಿದೆ.

ಕಟ್ಟಡ ನೆಲಸಮ ಮಾಡಲು ಮುಂದಾದ ಬಿಬಿಎಂಪಿ
ರಸ್ತೆ ನಿರ್ಮಾಣ ಮಾಡಲು ಬಿಬಿಎಂಪಿ 2400 ಸ್ಕ್ವೇರ್ ಮೀಟರ್ನಷ್ಟು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಬರುವ ಸಾಕಷ್ಟು ಕಟ್ಟಡಗಳನ್ನು ನೆಲಸಮ ಮಾಡಲು ಬಿಬಿಎಂಪಿ ಮುಂದಾಗಿದೆ. ಭೂಮಿ ಕಳೆದುಕೊಂಡವರಿಗೆ ಪರಿಹಾರ ಮೊತ್ತವನ್ನು ನೀಡಲಿದೆ.

ನಮಗೆ ನಗದು ಪರಿಹಾರ ಬೇಕು
ನಮಗೆ ನಗದು ಪರಿಹಾರ ಬೇಕು ಎಂದು ಆದಿತ್ಯ ಬೇಕರಿ ಮಾಲೀಕರು ಒತ್ತಾಯಿಸಿದ್ದಾರೆ. ಆದರೆ ಬಿಬಿಎಂಪಿಯು ಆಸ್ತಿ ಮಾಲಿಕರು ಮೊದಲು ಟಿಡಿಆರ್ ಸರ್ಟಿಫಿಕೇಟ್ ಪಡೆದುಕೊಳ್ಳಲಿ ಇದು ಮೊದಲ ಹಂತ, ಬಳಿಕ ಸರ್ಕಾರಕ್ಕೆ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ. ಆದರೆ ಆಸ್ತಿ ಮಾಲೀಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನೇರವಾಗಿ ಮಾತುಕತೆಗೆ ಬರುವಂತೆ ಒತ್ತಾಯಿಸಿದ್ದಾರೆ.

ರಸ್ತೆ ಅಗಲೀಕರಣದಿಂದ ಯಾರ್ಯಾರಿಗೆ ತೊಂದರೆ
ಬನಶಂಕರಿ 6ನೇ ಹಂತ, ಸುಬ್ರಹ್ಮಣ್ಯಪುರ, ಉತ್ತರಹಳ್ಳಿ, ಹೆಮ್ಮಿಗೆಪುರದವರಿಗೆ ತೊಂದರೆಯುಂಟಾಗಲಿದೆ, ಆದರೆ ರಸ್ತೆ ಅಗಲೀಕರಣವನ್ನು ಸ್ವಾಗತಿಸುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.
Recommended Video

143 ಆಸ್ತಿಗಳ ಸ್ವಾಧೀನ
ಉತ್ತರಹಳ್ಳಿ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಲು ಮುಂದಾಗಿರುವ ಬಿಬಿಎಂಪಿ 143 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಚಿಂತನೆ ನಡಸಿದೆ. ಇದಕ್ಕೆ ಆಸ್ತಿ ಮಾಲೀಕರಿಂದ ವಿರೋಧವೂ ಕೂಡ ವ್ಯಕ್ತವಾಗಿದೆ.












Click it and Unblock the Notifications