ಉಚಿತ ಮುನ್ನೆಚ್ಚರಿಕಾ ಡೋಸ್ ಕೋವಿಡ್ ಲಸಿಕೆ ಪಡೆಯಲು ಬೊಮ್ಮಾಯಿ ಕರೆ
ಬೆಂಗಳೂರು ಜುಲೈ 16: ಮುಂದಿನ 75 ದಿನಗಳವರೆಗೆ 18 ವರ್ಷ ಮೇಲ್ಪಟ್ಟ ನಾಗರಿಕರು ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಇಂದು ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಇಂದು ಆರೋಗ್ಯ ಇಲಾಖೆ ಆಯೋಜಿಸಿದ್ದ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ನೀಡುವ ಕೋವಿಡ್ ಲಸಿಕಾಕರಣ ಅಮೃತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸದ್ಯ ಎಲ್ಲೆಡೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಮುಜಾಗೃತ ಕ್ರಮವಾಗಿ ಕರ್ನಾಟಕದಲ್ಲಿ 75 ದಿನಗಳ ಲಸಿಕೆ ಅಭಿಯಾನದಲ್ಲಿ 7500 ಕೇಂದ್ರಗಳಲ್ಲಿ ಲಸಿಕೆಗಳನ್ನು ನಿರಂತರವಾಗಿ ನೀಡಲಾಗುತ್ತಿದ್ದು, ಆರೋಗ್ಯ ಕಾರ್ಯಕರ್ತರು ಅಭಿಯಾನ ರೀತಿಯಲ್ಲಿ ಕೆಲಸ ಮಾಡಲು ಸರ್ಕಾರ ಎಲ್ಲ ಸಹಕಾರ ನೀಡಲಿದೆ. ಆರೋಗ್ಯವಂತ ಸಮಾಜ, ಆರ್ಥಿಕವಾಗಿ ಸಬಲವಾದ ಸಮಾಜವನ್ನು ನಿರ್ಮಿಸುತ್ತದೆ. ಆರೋಗ್ಯ, ಶಿಕ್ಷಣ ಸರಿಯಾಗಿದ್ದರೆ ಮಾತ್ರ ರಾಜ್ಯ ಪ್ರಗತಿಹೊಂದಲು ಸಾಧ್ಯ. ಈ ದಿಸೆಯಲ್ಲಿ ಲಸಿಕೆ ಅಭಿಯಾನ ಮಹತ್ವದ ಹೆಜ್ಜೆಯಾಗಿದೆ ಎಂದು ಸಿಎಂ ಹೇಳಿದರು.
Infographics: ಜುಲೈ 14ರಂದು ಜಗತ್ತಿನಲ್ಲಿ ಕೋವಿಡ್-19 ಅಂಕಿ-ಅಂಶ ತಿಳಿಯಿರಿ
ಕೋವಿಡ್ ಬಂದವರಲ್ಲಿ ಕೋವಿಡ್ ನಂತರ ಪರಿಣಾಮಗಳು ಇದ್ದೇ ಇರುತ್ತದೆ. ಈ ಪರಿಣಾಮಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮೂಲಕ ಅದನ್ನು ಕುಗ್ಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ. ಕೇಂದ್ರ ಸರ್ಕಾರ 'ಹರ್ ಘರ್ ದಸ್ತಕ್' ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಕೊರೊನಾ ನಿಯಂತ್ರಣದಲ್ಲಿ ಕರ್ನಾಟಕದ ಅದ್ಭುತ ಸಾಧನೆ :
ವೈದ್ಯರು, ಅಧಿಕಾರಿಗಳು, ನರ್ಸುಗಳು, ಅರೆವೈದ್ಯಕೀಯ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ನಾಯಕರಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಲಸಿಕೆ ಬಗ್ಗೆ ಅರಿವು ಮೂಡಿಸಿರುವ ಅವರ ನಿಸ್ವಾರ್ಥಸೇವೆಯನ್ನು ಸರ್ಕಾರ ಗುರುತಿಸುತ್ತದೆ. ಅದರ ಪರಿಣಾಮ ರಾಜ್ಯದಲ್ಲಿ ಕೋವಿಡ್ ಮೊದಲ ಡೋಸ್ 102 % ಸಾದನೆ,5.49 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಎರಡನೇ ಡೋಸ್ 5.42 ಕೋಟಿ ಆಗಿದೆ. ಇದೊಂದು ಅದ್ಭುತವಾದ ಸಾಧನೆ. ಲಸಿಕೆ ಅಭಿಯಾನದಲ್ಲಿ ಭಾಗವಹಿಸಿರುವ ವೈದ್ಯರು, ಅಧಿಕಾರಿಗಳು, ನರ್ಸುಗಳು, ಅರೆವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್ ಸೇರಿದಂತೆ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಮಹತ್ತರ ಸಾಧನೆ:
ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್ ನ್ನು ಉಚಿತವಾಗಿ ನೀಡಲು ಆದೇಶಿಸಿದ್ದು, ಲಸಿಕೆಗಳನ್ನು ಪೂರೈಸಿದ್ದಾರೆ. ಇದೊಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಹಲವಾರು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಲಸಕೀಕರಣ ಮಹತ್ವದ ಕೆಲಸವನ್ನು ಮಾಡಿದೆ. ಮೊದಲು ರೋಗ ಉಲ್ಬಣವಾಗಿ ನಾಲ್ಕೈದು ವರ್ಷಗಳ ನಂತರ ರೋಗಕ್ಕೆ ಲಸಿಕೆಗಳನ್ನು ವಿದೇಶದಲ್ಲಿ ಕಂಡುಹಿಡಿಯಲಾಗುತ್ತಿತ್ತು. ನಂತರ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಭಾರತಕ್ಕೆ ಬರುವ ವೇಳೆಗೆ 10-12 ವರ್ಷಗಳು ಬೇಕಾಗುತ್ತಿತ್ತು. ಈಗ ಭಾರತದೇಶದಲ್ಲಿಯೇ ಲಸಿಕೆಗಳನ್ನು ತಯಾರಿಸಿ, 130 ಕೋಟಿ ಜನಸಂಖ್ಯೆಗೆ ಯಶಸ್ವಿಯಾಗಿ ನೀಡಿ ಸಾಂಕ್ರಾಮಿಕವನ್ನು ನಿರ್ವಹಣೆಯೊಂದಿಗೆ ನಿಯಂತ್ರಣವನ್ನೂ ಮಾಡಲಾಯಿತು. ವಿದೇಶಗಳಿಗೂ ರಫ್ತು ಮಾಡಲಾಯಿತು. ಇದು ನಮ್ಮ ವಿಜ್ಞಾನಿಗಳ ವಿಶ್ವಾಸವನ್ನು ಬಿಂಬಿಸುತ್ತದೆ.