ಅಂಬಿಕಾಪತಿ ಮನೆಯಲ್ಲಿ ಸಿಕ್ಕ 42 ಕೋಟಿ ಹಣದ ಮೂಲ ಪತ್ತೆ ಸುಲಭ: ಯತ್ನಾಳ್
ಬೆಂಗಳೂರು, ಅಕ್ಟೋಬರ್ 13: ಕಾಂಗ್ರೆಸ್ ಪಕ್ಷದ ಸದಸ್ಯೆ ಮಾಜಿ ಕಾರ್ಪೋರೇಟ್ ಅಶ್ವತಮ್ಮ ಅವರ ಪತಿಯಾದ ಅಂಬಿಕಾಪತಿ ಅವರ ಸಂಬಂಧಿ ಮನೆಯಲ್ಲಿ ಐಟಿ ದಾಳಿ ವೇಳೆ 42 ಕೊಟಿ ರೂಪಾಯಿ ಹಣ ದೊರೆತಿದೆ. ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇದೀಗ ಈ ಹಣ್ಣ ಎಲ್ಲಿಂದ ಬಂತು ಎಂಬುದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗಪಡಿಸಿದ್ದಾರೆ.
ಬೆಂಗಳೂರು ಅನೇಕ ಕಡೆಗಳಲ್ಲಿ ಒಂದು ವಾರದಿಂದಲೂ ಆದಾಯ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (IT Raid) ದಾಳಿ ನಡೆಸುತ್ತಿದ್ದಾರೆ. ಚಿನ್ನದ ವ್ಯಾಪಾರಿಗಳು, ಬಿರಿಯಾನಿ ಹೋಟೆಲ್ಗಳು, ಕಾಫಿ ಬೋರ್ಡ್ ನಿರ್ದೇಶಕರ ಮನೆ ಮೇಲಿನ ದಾಳಿ ಬಳಿಕ ಇದೀಗ ಮಾಜಿ ಕಾರ್ಪೋರೇಟರ್ ಸಂಬಂಧಿ ಮನೆ ಮೇಲೆ ದಾಳಿ ನಡೆದಿದೆ. ಈ ದಾಳಿಯನ್ನು ಬೆಂಗಳೂರಿನ ಇತಿಹಾಸದಲ್ಲಿನ ದೊಡ್ಡ ದಾಳಿ ಅಂತಲೂ ಕರೆಯಲಾಗುತ್ತಿದೆ.

ಈ ದಾಳಿ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕಾಂಗ್ರೆಸ್ ಏಜಂಟ್ ಅಂಬಿಕಾಪತಿಯ ಮನೆಯಲ್ಲಿ ದೊರೆತ 42 ಕೋಟಿ ಹಣದ ಮೂಲವನ್ನು ಹುಡುಕುವುದು ಬಹಳ ಸುಲಭ. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಇದೆಲ್ಲ ನೋಡಿದರೆ ತಿಳಿಯುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
1. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ!
2. 650 ಕೋಟಿ ರೂಗಳಿಗೆ ಎಷ್ಟು ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು?
3. ಈ ಹಣ ತಮಿಳುನಾಡಿನಿಂದ ತೆಲಂಗಾಣಕ್ಕೆ ಕಳುಹಿಸಲು ಯಾಕೆ ಯೋಜನೆ ಮಾಡಲಾಗಿತ್ತು?
4. ತೆಲಂಗಾಣಕ್ಕೆ ಕಳುಹಿಸುವುದಾದರೆ ಚುನಾವಣೆಗಾಗಿ ಅಲ್ಲವೇ?
5. ಕುಮಾರಕೃಪಾ ಗೋಡೆಗಳನ್ನು ಕೇಳಿದರು ಹೇಳುವುದು ಈ ಹಣ ನೀಡಿರುವ ಸುಮಾರು 23 ಗುತ್ತಿಗೆದಾರರು ಯಾರೆಂದು!
6. ಕೆಂಪಣ್ಣ ಆಂಡ್ ಕಂಪನಿಗೆ ಈ ಮಾಹಿತಿ ಇಲ್ಲವಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ಜೋರಾಗಿದೆ. ಮಹದೇವಪ್ಪನ ದುಡ್ಡು, ಕಾಕಾ ಪಾಟಿಲನ ದುಡ್ಡು, ದಯಾನಂದನ ದುಡ್ಡು, ಅದರಲ್ಲಿ 1/4ರಷ್ಟು ರಾಜಸ್ಥಾನ, ಮಧ್ಯಪ್ರದೇಶಕ್ಕೆ, ತೆಲಂಗಾಣ ರಾಜ್ಯ ಮತ್ತು ಛತ್ತೀಸಘಡಕ್ಕೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇತ್ತ ಎಚ್ಡಿ ಕುಮಾರಸ್ವಾಮಿ ಅವರು ಸಹ ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ, ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ ಗಳಲ್ಲಿ ಕುಣಿಯುತ್ತಿದೆ. ಯಾರ ಪಾಪದ ಹಣವದು ಎಂದು ತಿಳಿಸಿ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ಐಟಿ ದಾಳಿಯುವ ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ.












Click it and Unblock the Notifications