ಸೀಲ್ ಡೌನ್ ಆದ್ರೂ ಕೇರ್ ಮಾಡಲಿಲ್ಲ ಬಾಪೂಜಿ ನಗರದ ಜನ
ಬೆಂಗಳೂರು, ಏಪ್ರಿಲ್ 14: ಬೆಂಗಳೂರಿನ ಬಾಪೂಜಿನಗರವನ್ನು ಸೀಲ್ಡೌನ್ ಎಂದು ಘೋಷಣೆ ಮಾಡಿದ್ದರೂ, ಅಲ್ಲಿನ ಜನರು ತಲೆ ಕಡೆಸಿಕೊಳ್ಳುತ್ತಿಲ್ಲ. ಕಾರಣ ಇಲ್ಲದೆ ರಸ್ತೆಯಲ್ಲಿ ಓಡಾಟ ಮಾಡುವ ದೃಶ್ಯ ಕಂಡು ಬರುತ್ತಲೇ ಇದೆ.
ನಿನ್ನೆ ಪೋಲಿಸರು ಬಾಪೂಜಿ ನಗರದ ನಿವಾಸಿಗಳಿಗೆ ಯಾರು ಸಹ ಸಂಚಾರ ಮಾಡಬಾರದು ಸೂಚಿಸಿದ್ದರು. ಏರಿಯಾಗೆ ತಗಡಿನ ಶೀಟ್ ಕಲ್ಲುಗಳನ್ನು ಹಾಕಿ ತಡೆ ಹಾಕಿದ್ದರು. ಆದರೆ, ಅವುಗಳನ್ನು ಇಂದು ಸಾರ್ವಜನಿಕರು ತೆರವು ಮಾಡಿದ್ದಾರೆ. ಪೊಲೀಸರ ಮಾತಿಗೂ ಕ್ಯಾರೆ ಎನ್ನದ ಜನ ಅನವಶ್ಯಕವಾಗಿ ಎಂದಿನಂತೆ ತಿರುಗಾಟ ಮಾಡುತ್ತಿದ್ದಾರೆ.
ಕೇವಲ ಒಂದೇ ಒಂದು ಕೊರೊನಾ ಪ್ರಕರಣ ಹೊಂದಿರುವ ಭಾರತದ 3 ರಾಜ್ಯಗಳು
ರೋಡ್ ಗೆ ಅಡ್ಡಲಾಗಿ ಹಾಕಿದ್ದ ತಡಗಿನ ಶೀಟ್ ಗಳು ದಾಟಿ ಬರಲು ಯತ್ನಸುತ್ತಿದ್ದಾರೆ. ಎಂದಿನಂತೆ ಬೈಕ್ ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಏರಿಯಾದಲ್ಲಿ ಕಾರಣ ಇಲ್ಲದೆ ಅನವಶ್ಯಕವಾಗಿ ಓಡಾಡೋರಿಗೆ ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಮಾತು ಕೇಳದವರಿಗೆ ಲಾಟಿ ಏಟನ್ನು ನೀಡಿದ್ದಾರೆ.
ಬಾಪೂಜಿನಗರದ ದ್ವಾರದಲ್ಲಿ ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ನಡೆಸುತ್ತಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡರು ಜನ ಮಾತ್ರ ಮಾತು ಕೇಳುತ್ತಿಲ್ಲ. ಕೊರೋನಾ ಸೋಂಕಿಗೂ ಭಯ ಪಡುತ್ತಿಲ್ಲ. ಎಂದಿನಂತೆ ಮನೆಯಿಂದ ಹೊರಗಡೆ ಬಂದು ಬೇಕಾಬಿಟ್ಟಿಯಾಗಿ ಓಡಾಟ ನಡೆಸಿದ್ದಾರೆ. ಕೆಲವರು ಟೈಮ್ ಪಾಸ್ ಮಾಡಲು ಅಂಗಡಿ ಕಟ್ಟೆಗಳ ಮೇಲೆ ಕುಳಿತುಕೊಂಡಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಏಪ್ರಿಲ್ 10 ರಂದು ಬಾಪೂಜಿ ನಗರ ಹಾಗೂ ಪಾದರಾಯನಪುರವನ್ನು ಬಿಬಿಎಂಪಿ ಸೀಲ್ಡೌನ್ ಮಾಡಿತ್ತು.