ಅನಂತಕುಮಾರ್ ದುರ್ಬಲ ಪರಿಸ್ಥಿತಿಯಲ್ಲಿದ್ದಾರೆ- ನಿಲೇಕಣಿ
ಬೆಂಗಳೂರು, ಮಾರ್ಚ್ 14-ತಮ್ಮ ರಾಜಕೀಯ ಪ್ರವೇಶಕ್ಕೆ ಆಧಾರವಾಗಿದ್ದ ಆಧಾರ್ ಪೀಠಕ್ಕೆ ಬೆಂಗಳೂರಿನಿಂದಲೇ ರಾಜೀನಾಮೆ ಸಲ್ಲಿಸಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಮರಕ್ಕೆ ಸಜ್ಜಾಗಿರುವ ಕಾಂಗ್ರೆಸ್ ಸೇನಾನಿ ನಂದನ್ ನಿಲೇಕಣಿ ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮ ಸಂವಾದ ನಡೆಸಿದರು.
'ನನಗೆ ವೈಯಕ್ತಿವಾಗಿ ರಾಜಕೀಯದಿಂದ ಯಾವುದೇ ಲಾಭ/ ಪ್ರಯೋಜನ ಆಗಬೇಕಾದ್ದಿಲ್ಲ. ಬೆಂಗಳೂರಿನ ಸಮಗ್ರ ಬದಲಾವಣೆಗೆ ನಾನೊಂದು ಸಾಧನವಾಗಿ ಬಳಕೆಯಾಗಬೇಕಿದೆ ಎಂಬುದಷ್ಟೇ ನನ್ನ ಬಯಕೆ. ಏಕೆಂದರೆ ಬೆಂಗಳೂರಿನ ಜನತೆಗೆ ಅತ್ಯುತ್ತಮವಾದ್ದು ಬೇಕಿದೆ; ಅದನ್ನು ನಾನು ಕೊಡಬಲ್ಲೆ ಎಂಬ ವಿಶ್ವಾಸ ನನಗಿದೆ. ಅಷ್ಟು ಸಾಕು ಚುನಾವಣೆಯಲ್ಲಿ ನಾನು ಗೆಲ್ಲಲು' ಎಂದು ಮಾಧ್ಯಮಗಳ ಎದುರು 58 ವರ್ಷದ ಟೆಕ್ಕಿ ನಂದನ ಮನೋಹರ ನಿಲೇಕಣಿ ಅವರು ಮಾತನಾಡುತ್ತಿದ್ದರೆ 'ಯಸ್ ಈ ಮನುಷ್ಯ ನಿಜಕ್ಕೂ ಸ್ಪಷ್ಟ ಗುರಿ ಧ್ಯೇಯೋದ್ದೇಶಗಳೊಂದಿಗೆ ಏನನ್ನೋ ಸಾಧಿಸಲು ಹೊರಟಿದ್ದಾರೆ ಅನಿಸುತ್ತಿದೆ.
ಹೌದು, ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟವು high profile candidate ಕಾಂಗ್ರೆಸ್ಸಿನ ನಂದನ್ ನಿಲೇಕಣಿ ಅವರೊಂದಿಗೆ ಈ ಬಾರಿಯ ಲೋಕಸಭಾ ಚುನಾವಣಾ ಅಭ್ಯರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಇಂದು ಶುಕ್ರವಾರ ಶುಭಾರಂಭ ಮಾಡಿದೆ. ಟೆಕ್ಕಿ ನಂದನ್ ಏನೆಲ್ಲಾ ಮಾತನಾಡಿದ್ದಾರೆ ಎಂಬುದರ ಸಂಕ್ಷಿಪ್ತ ರೂಪ ಇಲ್ಲಿದೆ:

ನಾನು ಬೆಂಗಳೂರಿಗ. ವಾಣಿವಿಲಾಸ್ ಆಸ್ಪತ್ರೆಯಲ್ಲಿ ಜನಿಸಿದವನು
ನಾನು ಅಪ್ಪಟ ಬೆಂಗಳೂರಿಗ. ಇದೇ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಬಡಕುಟುಂಬದಲ್ಲಿ ಜನಿಸಿದವನು. ನಮ್ಮ ಅಪ್ಪ ಮಾಗಡಿ ರಸ್ತೆಯ ಮಿನರ್ವ ಮಿಲ್ ನಲ್ಲಿ ಚಿಕ್ಕ ಉದ್ಯೋಗದಲ್ಲಿದ್ದರು. ಮುಂದೆ ನಾನು ಧಾರವಾಡಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಯಿತು. ಚಿಕ್ಕಪ್ಪನ ಮನೆಯಲ್ಲಿ ಓದಿ ಬೆಳೆದ. ಅದೃಷ್ಟ ಮತ್ತು ಕಠಿಣ ಪರಿಶ್ರಮ ನನ್ನ ಕೈಹಿಡಿಯಿತು. ಇದೀಗ ನಾನು 'ಕೈ'ಹಿಡಿದಿದ್ದೇನೆ.

ನಾನು ಹಂಡ್ರೆಡ್ ಪರ್ಸೆಂಟ್ ಬೆಂಗಳೂರಿನವನೇ
ಜಯನಗರ, ಬಿಟಿಎಂ ಲೇಔಟಿನಲ್ಲಿ ಇನ್ಫೋಸಿಸ್ ಕಚೇರಿ ಆರಂಭಿಸಿ, ಅಲ್ಲೇ ಉದ್ಯೋಗ ಮಾಡಿದೆ. ಹಾಗಾಗಿ ನಾನು ಹಂಡ್ರೆಡ್ ಪರ್ಸೆಂಟ್ ಬೆಂಗಳೂರಿನವನೇ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಧ್ಯಮಗಳ ಮೂಲಕ ಮತದಾರರಿಗೆ ಮನದಟ್ಟು ಮಾಡಿಕೊಟ್ಟರು ನಿಲೇಕಣಿ.

ಕಾಂಗ್ರೆಸ್ಸೇ ಯಾಕೆ ಸೇರಿದೆ ಅಂದರೆ
ಕಾಂಗ್ರೆಸ್ಸೇ ಯಾಕೆ ಸೇರಿದೆ ಅಂದರೆ ಅದರ ತತ್ವಗಳಲ್ಲಿ ನನಗೆ ನಂಬಿಕೆಯಿದೆ. ಅದರಲ್ಲಿ ವೈವಿಧ್ಯತೆಯಿದೆ. ಪಕ್ಷವು ಎಲ್ಲ ಜನರನ್ನೂ ತಲುಪುತ್ತದೆ. ನನ್ನ ಅಭಿಲಾಷೆಯೂ ಅದೇ ಆಗಿದೆ. ಆಡಳಿತ ಯಂತ್ರ/ ಸರಕಾರ ಎಲ್ಲರನ್ನೂ ತಲುಪುವಂತಾಗಬೇಕು.

ಯಶಸ್ವಿ ವ್ಯಕ್ತಿಗಳು ಸಮಾಜಕ್ಕೆ ಕಾಣಿಕೆ ನೀಡಬೇಕು
ಭ್ರಷ್ಟಾಚಾರ ಯಾವ ಪಕ್ಷದಲ್ಲಿ ಇಲ್ಲ ಹೇಳಿ. ಒಳ್ಳೆಯ ಜನ ವ್ಯವಸ್ಥೆಯಲ್ಲಿ ಪಾಲುದಾರರಾಗಬೇಕು. ಭ್ರಷ್ಟಾಚಾರವನ್ನು ತೊಡೆದು ಹಾಕುವ ಮೂಲಕ ಅದನ್ನು ಮೆಟ್ಟಿ ನಿಲ್ಲಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಂಥ ಯಶಸ್ವಿ ವ್ಯಕ್ತಿಗಳು ಸಮಾಜಕ್ಕೆ ಏನಾದರೂ ಕಾಣಿಕೆ ನೀಡಬೇಕು/ ನಾವು ಪಡೆದಿರುವುದನ್ನು ವಾಪಸ್ ನೀಡಬೇಕು.

ಉತ್ತಮ ಬೆಂಗಳೂರಿಗಾಗಿ ನಾನೊಬ್ಬ problem solver
ಆಳವಾಗಿ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಟಿವಿ ಮಾಧ್ಯಮಗಳಲ್ಲಿ ಸ್ಟೈಲಿಷ್ ಆಗಿ ಪೋಸ್ ಕೊಡುತ್ತಾ ಮಾತನಾಡುವುದರಿಂದ ಏನೂ ಸಾಧಿಸಿದಂತಾಗುವುದಿಲ್ಲ. ನಮ್ಮ ಸುತ್ತ ಮುತ್ತ ಸಾವಿರಾರು ಸಮಸ್ಯೆಗಳು ಹರಡಿಕೊಂಡಿವೆ. ಸಮಸ್ಯೆಗಳನ್ನಷ್ಟೇ ನೋಡುತ್ತಾ ಕುಳಿತರೆ ಏನೂ ಆಗದು. ಅದನ್ನು ಪರಿಹರಿಸುವ ದೃಢ ಮನಸ್ಸು ಮಾಡಬೇಕು. ಸೋ ನಾನೊಬ್ಬ problem solver ಅಂತ ನನಗೆ ಅನಿಸಿದೆ. ಈ ಹಿನ್ನೆಲೆಯಲ್ಲಿ 'ಉತ್ತಮ ಬೆಂಗಳೂರಿಗಾಗಿ' ನಾನು ರಾಜಕೀಯ ಪ್ರವೇಶಿದ್ದೇನೆ.

ಸಮಸ್ಯೆ ಬೆಟ್ಟದಷ್ಟಿವೆ. ಅದನ್ನೆಲ್ಲಾ ಪರಿಹರಿಸುವ ದೃಢ ಚಿತ್ತವಿದೆ
ಬೆಂಗಳೂರಿನಲ್ಲಿ 25 ವರ್ಷದ ಯುವಕರೇ ಹೆಚ್ಚಾಗಿರುವುದು. ಅವರಿಗೆ ಭವ್ಯ ಭವಿಷ್ಯ ಕಲ್ಪಿಸಬೇಕಿದೆ. Infosys, BATF, Aadhaar ನಾನು ಯಶಸ್ವೀ ಪುರುಷ ಅನ್ನಿಸಿಕೊಂಡಿದ್ದೇನೆ. ಆ ಯಶಸ್ಸನ್ನು ಇದೀಗ ರಾಜಕೀಯದ ಮೂಲಕವೂ ಜನರಿಗೆ ತಲುಪಿಸಬೇಕು. ರಾಜಕೀಯದಲ್ಲಿ ಜನರ ಸಮಸ್ಯೆಗಳನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಹಾಗೆಂದು MTR, SLV ಮುಂತಾದ ಹೋಟೆಲುಗಳಲ್ಲಿ ಜನರನ್ನು ಭೇಟಿಯಾಗುತ್ತಿದ್ದೇನೆ. ರಸ್ತೆಬದಿ ಜನರನ್ನು ಮುಖತಃ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಸಮಸ್ಯೆಗಳು ಬೆಟ್ಟದಷ್ಟಿವೆ. ಅದನ್ನೆಲ್ಲಾ ಪರಿಹರಿಸುವ ದೃಢ ಚಿತ್ತ ನನ್ನದು.

ಕಾಂಗ್ರೆಸ್ sinking ship ಅನ್ನುವುದು ಅಪಪ್ರಚಾರ
ಕಾಂಗ್ರೆಸ್ sinking ship ಅನ್ನುವುದು ಅಪಪ್ರಚಾರ. ನಾನು ಸೋಲುವ ಮಾತೇ ಇಲ್ಲ. ಒಂದು ವೇಳೆ ಸೋತರೆ? ರಾಜಕೀಯದಲ್ಲೇ ಮುಂದುವರಿಯುವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ.

Aadhaarಗೂ ಭವಿಷ್ಯವಿದೆ
Aadhaarಗೂ ಭವಿಷ್ಯವಿದೆ. ಇತರೆ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲೂ Aadhaar ನೋಂದಣಿ ಯಶಸ್ವಿಯಾಗಿದೆ. ರಾಜಕೀಯವಾಗಿ ನನ್ನ ಬಗ್ಗೆ ಭಯ ಮೂಡಿದ್ದು, ಆಧಾರ್ ಅಸ್ತ್ರವನ್ನು ಝಳಪಿಸಲು ಯತ್ನಿಸುತ್ತಿದ್ದಾರೆ, ಅಷ್ಟೇ. ಚುನಾವಣಾ ಫಲಿತಾಂಶ ಏನೇ ಬರಲಿ, ಆಧಾರ್ ಅಂತೂ ಇದ್ದೇ ಇರುತ್ತದೆ. ನೋಡ್ತಿರಿ, ಮುಂದಿನ ಆಗಸ್ಟ್ ವೇಳೆಗೆ 100 ಕೋಟಿ ಮಂದಿಗೆ ಆಧಾರ್ ಸಂಖ್ಯೆ ಪ್ರಾಪ್ತಿಯಾಗಿರುತ್ತದೆ.

tech-savvy ಎಂಬ ಹಣೆಪಟ್ಟಿ ಹಚ್ಚಬೇಡಿ
ಅಂತರ್ಜಾಲದಲ್ಲಿ ನಾನಿರುವ ಜಾಹೀರಾತು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. Social media ಚುನಾವಣಾ ಪ್ರಚಾರದ ಒಂದು ಭಾಗವಷ್ಟೇ. ಹಾಗಂತ ನನಗೆ tech-savvy ಎಂಬ ಹಣೆಪಟ್ಟಿ ಹಚ್ಚಬೇಡಿ

ಪತ್ನಿ ರೋಹಿಣಿಯ ಅರ್ಘ್ಯಂ ಫೌಂಡೇಶನ್ ನೆರವು ಪಡೆಯುವೆ
ಬೆಂಗಳೂರು ಮಹಾನಗರವನ್ನು ಬಹುವಾಗಿ ಕಾಡುತ್ತಿರುವುದು ಕುಡಿಯುವ ನೀರಿನ ಸಮಸ್ಯೆ. ಅದಕ್ಕೆ ನನ್ನ ಪತ್ನಿ ರೋಹಿಣಿ ಅವರ ಅರ್ಘ್ಯಂ ಫೌಂಡೇಶನ್ ಇದೆ. ಅದು ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದೆ. ಅದರ ನೆರವು ಪಡೆದು ಬೆಂಗಳೂರಿನ ನೀರಿನ ಸಮಸ್ಯೆಯನ್ನು ಪರಿಹರಿಸುವೆ.

ಮಾಜಿ ಸಹೋದ್ಯೋಗಿ ಬಾಲಾಗೆ ಶುಭ ಕೋರುವೆ
ನನ್ನ ಸ್ನೇಹಿತ, ಮಾಜಿ ಸಹೋದ್ಯೋಗಿ ವಿ ಬಾಲಕೃಷ್ಣನ್ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಶುಭ ಕೋರುವೆ. ಆದರೆ ನಾನು ನನ್ನ ಪಕ್ಷಕ್ಕೆ ಕೆಲಸ ಮಾಡುವೆ.

ಪ್ರತಿಸ್ಪರ್ಧಿ ಅನಂತಕುಮಾರ್ ತುಂಬಾ weak situation ನಲ್ಲಿದ್ದಾರೆ
ನನ್ನ ಪ್ರತಿಸ್ಪರ್ಧಿ ಅನಂತಕುಮಾರ್ ತುಂಬಾ weak situation ನಲ್ಲಿದ್ದಾರೆ. 5 ಬಾರಿ ಸಂಸದರಾಗಿರುವುದೇ ಅವರಿಗೆ ಮುಳುವಾಗಿದೆ. ನಾನು ಕ್ಷೇತ್ರದಲ್ಲಿ ಭೇಟಿ ಮಾಡುವ ಜನರೆಲ್ಲಾ ಹೇಳುವುದು ಒಂದೇ. ಅವರು ಸಿಗುವುದೇ ಇಲ್ಲ. ಬೆಂಗಳೂರಿನಲ್ಲಿ ಇರುವುದೇ ಇಲ್ಲ, ಅಂತ. ಸೋ ಜನ ಅದಾಗಲೇ ನಿರ್ಧರಿಸಿಯಾಗಿದೆ, ಯಾರಿಗೆ ಮತ ಹಾಕಬೇಕು ಅಂತ.

ಜನಕ್ಕೆ ಭ್ರಷ್ಟರಲ್ಲದ ಜನ ಬೇಕಾಗಿದ್ದಾರೆ; ನಾನು ಉತ್ತಮ ಆಯ್ಕೆ
ಜನಕ್ಕೆ ಭ್ರಷ್ಟರಲ್ಲದ ಜನ ಬೇಕಾಗಿದ್ದಾರೆ. ಜನ ಕೇಳ್ತಾರೆ ನಾನು ಮುಂದೆ ಭ್ರಷ್ಟನಾದರೆ ಅಂತ. ಆದರೆ ನಾನೇಕೆ ಭ್ರಷ್ಟನಾಗಬೇಕು. ಅದರ ಅಗತ್ಯ ನನಗೇನಿದೆ. ವ್ಯವಸ್ಥೆಯನ್ನು ಹಾಳು ಮಾಡಿ ನಾನು ಗಳಿಸಬೇಕಿದ್ದು ಏನೂ ಇಲ್ಲ. ನಾನು corruptible ಆಗಲು ಸಾಧ್ಯವೇ ಇಲ್ಲ. ಜನಕ್ಕೆ ಅಷ್ಟು ಸಾಕು.

ಚುನಾವಣೆಗೆ funding ನನ್ನದೇ
ಇನ್ನು, ಚುನಾವಣೆಗೆ funding ಎಲ್ಲಿಂದ ಬರುತ್ತಿದೆ? ಕಾಂಗ್ರೆಸ್ ಪಕ್ಷ ಕೊಡ್ತಿದೆಯಾ ಅಂತ ಕೇಳುವವರೂ ಇದ್ದಾರೆ. ಆದರೆ ಚುನಾವಣೆಯಲ್ಲಿ ನನ್ನ ಹಣವನ್ನೇ ಖರ್ಚು ಮಾಡುತ್ತಿದ್ದೇನೆ. ಯಾರದೇ obligationನಲ್ಲಿ ಇರುವುದು ನನಗೆ ಬೇಡವಾಗಿದೆ.












Click it and Unblock the Notifications