ಬೆಂಗಳೂರು ಉತ್ತರ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಅಂತಿಮ
ಬೆಂಗಳೂರು, ಮಾರ್ಚ್ 13: ಆಂತರಿಕ ಚುನಾವಣೆ ಮೂಲಕ ಕಾಂಗ್ರೆಸ್ ಪಕ್ಷವು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದೆ. ಇಂದು (ಮಾರ್ಚ್ 13) ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸಿ ನಾರಾಯಣ ಸ್ವಾಮಿ ಅವರು ಆಯ್ಕೆಗೊಂಡಿದ್ದಾರೆ.
ಕಣದಲ್ಲಿ ಒಟ್ಟು ನಾಲ್ಕು ಮಂದಿಯಿದ್ದರು. ಮಾಜಿ ಸಂಸದ ಸಿ ನಾರಾಯಣಸ್ವಾಮಿ, ಜಿಸಿ ಚಂದ್ರಶೇಖರ್, ನೆಲ ನರೇಂದ್ರಬಾಬು ಮತ್ತು ಪ್ರೊ. ಎಂವಿ ರಾಜೀವ್ ಗೌಡ ಕಣದಲ್ಲಿದ್ದರು. ಈ ನಾಲ್ವರ ಪೈಕಿ ಅಂತಿಮವಾಗಿ ಸಿ ನಾರಾಯಣಸ್ವಾಮಿ ಗೆಲುವು ಸಾಧಿಸುವ ಮೂಲಕ ಪಕ್ಷದ ಅಭ್ಯರ್ಥಿಯಾಗುವುದು ಖಚಿತವಾಗಿದೆ.
ಇದರೊಂದಿಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮತ್ತು ಸಿ ನಾರಾಯಣಸ್ವಾಮಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಅತ್ತ ದಕ್ಷಿಣ ಕನ್ನಡದಲ್ಲಿ ಜನಾರ್ದನ ಪೂಜಾರಿ ಅವರು ಈಗಾಗಲೇ ಭಾರಿ ಅಂತರದೊಂದಿಗೆ ಆಂತರಿಕ ಚುನಾವಣೆ ಗೆದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಅಮೆರಿಕದ ಮಾದರಿಯಲ್ಲಿ ಪಕ್ಷದೊಳಗೇ ನಡೆದ ಆಂತರಿಕ ಚುನಾವಣೆಯಲ್ಲಿ (primaries -internal election) ಸಿ ನಾರಾಯಣಸ್ವಾಮಿ ಅವರಿಗೆ ಒಟ್ಟು 189 ಮತ ಲಭಿಸಿದೆ. ಉಳಿದಂತೆ ಜಿಸಿ ಚಂದ್ರಶೇಖರ್ ಅವರಿಗೆ 123, ನೆ.ಲ. ನರೇಂದ್ರಬಾಬುಗೆ 40 ಮತ ಹಾಗೂ ಪ್ರೊ. ಎಂವಿ ರಾಜೀವ್ ಗೌಡ ಅವರಿಗೆ 69 ಮತ ಪ್ರಾಪ್ತಿಯಾಗಿದೆ.
ಆಂತರಿಕ ಚುನಾವಣೆಗೆ ಮುನ್ನ ಬಿಎಲ್ ಶಂಕರ್, ಕೃಷ್ಣ ಬೈರೇಗೌಡರಂತಹ ಘಟಾನುಘಟಿಗಳ ಹೆಸರು ಪ್ರಸ್ತಾಪಕ್ಕೆ ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರೆಲ್ಲಾ ಆಂತರಿಕ ಚುನಾವಣಾ ಕಣದಿಂದ ದೂರ ಸರಿದಿದ್ದರು. (ಬೆಂ.ಉತ್ತರ: ಹಗುರವಾದ ಕಾಂಗ್ರೆಸ್ ಅಭ್ಯರ್ಥಿಗಳು)












Click it and Unblock the Notifications