ಬೆಂಗಳೂರು ಮುಂಗಾರು ಅಂತರ್ಜಲ ಹೆಚ್ಚಳ ಬೋರ್ವೆಲ್ ಫುಲ್
ಬೆಂಗಳೂರು, ಸೆಪ್ಟೆಂಬರ್ 28: ಕಳೆದ 3-4 ತಿಂಗಳಿಂದ ರಾಜಧಾನಿಯಲ್ಲಿ ದಾಖಲೆಯ ಮಳೆ ಸುರಿದಿದ್ದು ಅಂತರ್ಜಲಮಟ್ಟ ಭಾರಿ ಪ್ರಮಾಣದಲ್ಲಿ ಸುಧಾರಿಸಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ನೀರು ಮತ್ತೆ ಚಿಮ್ಮುತ್ತಿದೆ. ಮುಂಗಾರಿನಲ್ಲಿ ಧಾರಾಕಾರವಾಗಿ ಸುರಿದ ವರ್ಷಧಾರೆ ಕೆರೆಗಳಿಗೆ ಜೀವಕಳೆ ತುಂಬಿದೆ. ಇನ್ನು ಮುಂದಿನ ದಿನಗಳಲ್ಲಿ ಹಿಂಗಾರಿನಲ್ಲಿಯೂ ಉತ್ತಮ ಮಳೆಯಾದರೆ, ಅಂತರ್ಜಲ ಇನ್ನಷ್ಟು ಸಮೃದ್ಧವಾಗಲಿದೆ.
ಆದರೆ 3-4 ವರ್ಷಗಳಿಂದ ನಗರದಲ್ಲಿ ವಾಡಿಕೆಯ ಮಳೆಯೂ ಬಿದ್ದಿರಲಿಲ್ಲ. ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿತ್ತು. ಪರಿಣಾಮವಾಗಿ, ಗರಿಷ್ಠ ಪ್ರಮಾಣದಲ್ಲಿ ಮಹದೇವಪುರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ 1,200- 1,500 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆದರೂ ಹನಿ ನೀರು ಸಿಗುತ್ತಿರಲಿಲ್ಲ.
ಕೆಆರ್ ಪುರ, ಯಲಹಂಕ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಯಶವಂತಪುರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಕಡೆ 1,000 ಅಡಿಯಷ್ಟು ಆಳಕ್ಕೆ ಭೂಮಿಯನ್ನು ಬಗೆದರೂ ನೀರು ಜಿನುಗುತ್ತಿರಲಿಲ್ಲ.

ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಕೆರೆಗಳ ಮಗ್ಗುಲಲ್ಲಿರುವ ಕೊಳವೆ ಬಾವಿಗಳ ನೀರಿನ ಮಟ್ಟದಲ್ಲಿ ಗಣನೀಯ ಹೆಚ್ಚಳವಾಗಿದೆ. ನೂರಾರು ಅಡಿಗಳವರೆಗೆ ನೀರಿನ ಮಟ್ಟ ಏರಿಕೆಯಾಗಿರುವ ಸಾಧ್ಯತೆಯಿದೆ. ಕೆಲವೆಡೆ ತೆರೆದ ಬಾವಿಗಳಲ್ಲೂ ನೀರು ಮೇಲೆ ಬಂದಿರುವುದು ಅಂತರ್ಜಲ ಮಟ್ಟ ಏರಿಕೆಯನ್ನು ಖಾತ್ರಿಪಡಿಸುತ್ತದೆ. ಹಲವು ಕೆರೆಗಳಲ್ಲಿ ಅಡಿಗಟ್ಟಲೆ ನೀರು ನಿಂತಿದ್ದರೆ, ಹತ್ತಾರು ಕೆರೆಗಳು ಕೋಡಿ ಬಿದ್ದಿವೆ. ಬೇಸಿಗೆಯಲ್ಲಿ ಶೇ. 40ರಷ್ಟು ಬೋರ್ ವೆಲ್ ಗಳು ಬತ್ತಿದ್ದವು. ಆದರೆ ಈಗ ಎಲ್ಲ ಬೋರ್ ವೆಲ್ ಗಳಲ್ಲಿಯೂ ನೀರು ಲಭ್ಯ!
ಖಾಸಗಿ ಟ್ಯಾಂಕರ್ಗಳಿಗೆ ವಿಶ್ರಾಂತಿ:
ಬೇಸಿಗೆಯಲ್ಲಿ ಉಂಟಾದ ನೀರಿನ ಅಭಾವದಿಂದಾಗಿ ಜನರು ಖಾಸಗಿ ಟ್ಯಾಂಕರುಗಳಿಂದ ನೀರು ಖರೀದಿಸುತ್ತಿದ್ದರು. ನೀರಿನ ಬವಣೆಯನ್ನೇ ಬಂಡವಾಳವಾಗಿಸಿಕೊಂಡಿದ್ದ ಟ್ಯಾಂಕರ್ ಮಾಲೀಕರು ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದರು. ಟ್ಯಾಂಕರ್ ನೀರಿಗೆ 600-800 ರೂ. ವಸೂಲಿ ಮಾಡಲಾಗುತ್ತಿತ್ತು. ಆದರೆ, ಈಗ ಸತತವಾಗಿ ಸುರಿದ ವರುಣನ ಕೃಪೆಯಿಂದಾಗಿ ಖಾಸಗಿ ಟ್ಯಾಂಕರ್ ಭರಾಟೆಗೆ ತಡೆ ಬಿದ್ದಿದೆ. (ಕೃಪೆ: ವಿಜಯ ಕರ್ನಾಟಕ)












Click it and Unblock the Notifications