ಮೊದಲು ಆರ್ಎಸ್ಎಸ್ ನಿಷೇಧಿಸಿ; ಜಮೀರ್ ಅಹ್ಮದ್ ಖಾನ್
ಬೆಂಗಳೂರು, ಏಪ್ರಿಲ್ 04; "ಎಸ್ಡಿಪಿಐ, ಪಿಎಫ್ಐ ಯಾಕೆ ನಿಷೇಧಿಸಬೇಕು?. ಮೊದಲು ಆರ್ಎಸ್ಎಸ್ & ಭಜರಂಗದಳವನ್ನು ನಿಷೇಧಿಸಿ" ಎಂದು ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಸರ್ಕಾರ ಎಸ್ಡಿಪಿಐ & ಪಿಎಫ್ಐ ನಿಷೇಧಿಸುವ ಬದಲು ಆರ್ಎಸ್ಎಸ್ & ಭಜರಂಗದಳವನ್ನು ನಿಷೇಧಿಸಲಿ. ಇದುವರೆಗೂ ಶಾಂತಿ, ಸಮನ್ವಯತೆಯಿಂದ ಇದ್ದ ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದು ಯಾರು?" ಎಂದು ಪ್ರಶ್ನಿಸಿದರು.
Recommended Video

"ಹಲಾಲ್ ವಿಚಾರವಾಗಿ ಗೊಂದಲ ಸೃಷ್ಟಿಸುತ್ತಿರುವವರು ಯಾರು?. ಇವುಗಳಿಗೆ ಕಾರಣವಾಗಿರುವ ಆರ್ಎಸ್ಎಸ್ & ಭಜರಂಗದಳವನ್ನು ಮೊದಲು ನಿಷೇಧಿಸಬೇಕು" ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.

"ರಾಜ್ಯ ಸರ್ಕಾರ ಮಾರ್ಚ್ 4ರಂದು ಘೋಷಣೆ ಮಾಡಿರುವ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ 3200 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು" ಎಂದು ಜಮೀರ್ ವಿವರಣೆ ನೀಡಿದರು.
"ಇದೀಗ ಬಿಜೆಪಿ ಸರ್ಕಾರದ ಬಜೆಟ್ನಲ್ಲಿ ಅನುದಾನವನ್ನು 1150 ಕೋಟಿ ರೂ. ಗೆ ಇಳಿಸಿದೆ. ಅದಕ್ಕಾಗಿ ಮುಸ್ಲಿಂ ರಾಜಕೀಯ ನಾಯಕರೆಲ್ಲರೂ ಸೇರಿ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಭೇಟಿ ಮಾಡಿ ಅಲ್ಪಸಂಖ್ಯಾತರ ಬಜೆಟ್ ಮೊತ್ತ ಇಳಿಕೆ ಮಾಡದಂತೆ ಮನವಿ ಸಲ್ಲಿಸಲಾಗಿದೆ" ಎಂದರು.
ಮೈಕ್ ವಿವಾದಗಳು; ಮಸೀದಿ ಮತ್ತು ಮೈಕ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, "ರಾತ್ರಿ 12 ರಿಂದ ಬೆಳಗ್ಗೆ 6ರವರೆಗೆ ಜೋರಾಗಿ ಧ್ವನಿ ವರ್ಧಕಗಳನ್ನು ಬಳಸದಂತೆ ನ್ಯಾಯಾಲಯದ ಆದೇಶವಿದೆ. ಆ ಪ್ರಕಾರ, ಮಸೀದಿಗಳಲ್ಲಿ 10 ಡೆಸಿಬಲ್ಗಿಂತ ಕಡಿಮೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದರು.
"ಮೊದಲಿನಿಂದಲೂ ಹಿಂದೂ ಮತ್ತು ಮುಸ್ಲಿಂಮರು ಸಹಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ಆದರೆ ಬಿಜೆಪಿ ಸರ್ಕಾರ ನಮ್ಮ ಬಾಂಧವ್ಯ ಮಧ್ಯೆ ಒಡಕು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಹಿಜಾಬ್ ಆಯಿತು. ಇದೀಗ ಹಲಾಲ್ ವಿಚಾರ ಎಳೆದು ತಂದು ಇಲ್ಲದ ಗೊಂದಲ ಸೃಷ್ಟಿಸಿ ಸರ್ಕಾರ ಏನು ಸಾಧಿಸಲು ಹೊರಟಿದೆ ತಿಳಿಯುತ್ತಿಲ್ಲ. ಇದರಿಂದ ಬಡ ವ್ಯಾಪಾರಿಗಳಿಗೆ ಆಗುವ ನಷ್ಟ ಭರಿಸುವವರು ಯಾರು?" ಎಂದು ಪ್ರಶ್ನಿಸಿದರು.
ಜಾತಿ ರಾಜಕಾರಣದಿಂದ ರಾಜ್ಯದ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ಹೂಡಿಕೆದಾರರು ರಾಜ್ಯದಲ್ಲಿ ಹಣ ಹೂಡಿಕೆ ಮಾಡಲು ಮುಂದೆಬರುವುದಿಲ್ಲ. ಇದರಿಂದ ರಾಜ್ಯವು ಆರ್ಥಿಕವಾಗಿ ಹಿಂದೆ ಉಳಿಯುತ್ತದೆ ಎಂದು ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ಟ್ವೀಟ್ ಬಗ್ಗೆ ಉಲ್ಲೇಖಿಸಿ, "ಇನ್ನಾದರೂ ಈ ಜಾತಿ ರಾಜಕಾರಣ ಬಿಟ್ಟು ಎಲ್ಲರೂ ಜೊತೆಯಾಗಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಮಾಡೋಣ" ಎಂದರು.












Click it and Unblock the Notifications