Bajrang Dal Controversy: ಪ್ರಣಾಳಿಕೆಯಲ್ಲಿ ಬದಲಾವಣೆ ಮಾಡಲ್ಲ: ಬಜರಂಗದಳಕ್ಕೂ ಆಂಜನೇಯನಿಗೂ ಏನು ಸಂಬಂಧ? ಡಿಕೆಶಿ ಪ್ರಶ್ನೆ
ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗದಳ, ಪಿಎಫ್ಐ ಸೇರಿದಂತೆ ಸಮಾಜದ ಶಾಂತಿಗೆ ಭಂಗ ತರುವ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇನೆ ಎಂದು ಭರವಸೆ ನೀಡಿರುವುದು ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ. ಬಜರಂಗದಳ ನಿಷೇಧ ಘೋಷಣೆಯನ್ನು ಬಂಡವಾಳವಾಗಿಸಿಕೊಂಡಿರುವ ಬಿಜೆಪಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಣಾಳಿಕೆಯಲ್ಲಿ ಬದಲಾವಣೆ ಮಾಡಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿಯವರು ಮಾತ್ರ ಆಂಜನೇಯನ ಭಕ್ತರಾ? ನಾವೂ ಹನುಮನ ಭಕ್ತರೇ. ಶಾಂತಿ ತೋಟ ಹಾಳಾಗಬಾರದು, ಸೌಹಾರ್ದತೆ ಇರಬೇಕು, ಬಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಬಿಜೆಪಿಯವರು ಯಾಕೆ ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯವರು ಬಹಳ ಪ್ರವೋಕ್ ಮಾಡ್ತಿದ್ದಾರೆ, ಜನಕ್ಕೆ ಅವರ ಉದ್ದೇಶ ಅರ್ಥವಾಗಿದೆ ಎಂದ ಅವರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

"ನಾವು ಹನುಮನ ಭಕ್ತರು, ಆಂಜನೇಯ ಬೇರೆ ಬಜರಂಗದಳ ಬೇರೆ, ಬಿಜೆಪಿಯವರು ಬಜರಂಗಿ ಎಂದು ಕ್ಯಾಂಪೇನ್ ಮಾಡುವ ಅಗತ್ಯವಿಲ್ಲ. ಜನರಿಗೆ ಹೊಟ್ಟೆಗೆ ಏನು ಕೊಟ್ಟಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಹೇಳಿ ಎಂದರು. ಮೇ 4ರಂದು ರಾಜ್ಯದಲ್ಲಿ ಹನುಮ ಚಾಲಿಕ ಪಠಣೆ ಮಾಡುವ ಬಗ್ಗೆ ಮಾತನಾಡಿ, ನಾವು ದಿನಾ ಹನುಮ ಚಾಲಿಸ ಮಾಡ್ತೀವಿ, ಅವರೊಬ್ಬರೇನಾ ಮಾಡೋದು, ಮೊದಲಿದ್ದ ಆರ್ ಎಸ್ಎಸ್ ಬೇರೆ ಈಗಿರುವ ಆರ್ ಎಸ್ಎಸ್ ಬೇರೆ ಎಂದು ಹೇಳಿದ್ದಾರೆ.
ಬಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಬಿಜೆಪಿಯವರು ಯಾಕೆ ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ..
— oneindiakannada (@OneindiaKannada) May 3, 2023
-ಡಿಕೆ ಶಿವಕುಮಾರ್#DKShivakumar #bhajarangadala #BanBhajarangadala #KarnatakaElections2023 #congressmanifesto #BJP pic.twitter.com/V7cOLuRGJ0
ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿಯವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ. ಆಯನೂರು ಮಂಜುನಾಥ್ ಏನು ಹೇಳಿದ್ರು ಎಲ್ಲರಿಗೂ ಗೊತ್ತಿದೆ. ಈಶ್ವರಪ್ಪಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಹೇಳಲಿ. ನಾವು ಐತಿಹಾಸಿಕ ಭರವಸೆ ನೀಡಿದ್ದೇವೆ, ಅದನ್ನು ಈಡೇರಿಸ್ತೀವಿ. ಬಿಜೆಪಿಯವರು ಏನೆ ಮಾಡಿದ್ರು ಅದು ಸಫಲವಾಗಲ್ಲ ಎಂದರು.
ನಾನೂ ಕೂಡ ಹಿಂದೂ, ಆಂಜನೇಯ ಮತ್ತು ರಾಮನ ಭಕ್ತ. ಬಿಜೆಪಿಯವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ನಮಗೆ 141 ಸೀಟು ಬರೋದು ಗ್ಯಾರಂಟಿ. ಮೇ 13ರಂದು ಫಲಿತಾಂಶ ಬಂದ ನಂತರ ಎಲ್ಲರಿಗೂ ಅರ್ಥವಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications