ಕಾಲುವೆ ಜಾಗ ಒತ್ತುವರಿ ಮಾಡಿದ್ದೇವೆ: ಬಾಗ್ಮನೆ ಟೆಕ್ ಪಾರ್ಕ್ ಕೊಟ್ಟ ಕಾರಣ ಇದು
ಬೆಂಗಳೂರು, ಸೆ. 15: ವಿವಿಧ ಪ್ರದೇಶಗಳಲ್ಲಿ ಆಗಿರುವ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಹಲವು ಕಡೆ ಮುಲಾಜಿಲ್ಲದೆ ಬಿಬಿಎಂಪಿ ಒತ್ತುವರಿ ತೆರವು ಕಾರ್ಯ ನಡೆಸುತ್ತಿದೆ. ಇಕೋ ಸ್ಪೇಸ್, ನಲಪಾಡ್ ಅಕಾಡೆಮಿ, ಬಾಗ್ಮನೆ ಟೆಕ್ ಪಾರ್ಕ್, ಚೈತನ್ಯ ಶಾಲೆ, ಕೊಲಂಬಿಯಾ ಏಷ್ಯಾ, ಪ್ರೆಸ್ಟೀಜ್ ಅಪಾರ್ಟ್ಮೆಂಟ್, ಸಲಾರ್ಪುರಿಯಾ ಅಪಾರ್ಟ್ಮೆಂಟ್ಸ್ ಇತ್ಯಾದಿ ಅನೇಕ ಕಟ್ಟಡಗಳು ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿರುವುದು ಬಿಬಿಎಂಪಿ ಸರ್ವೆಯಿಂದ ತಿಳಿದುಬಂದಿದೆ. ಅವೆಲ್ಲಾ ಒತ್ತುವರಿ ತೆರವಿಗೆ ಕಾರ್ಯಾಚರಣೆ ನಡೆದಿದೆ.
ಇದೇ ವೇಳೆ, ಮಹದೇವಪುರ ಕೆರೆ ಸಮೀಪ ಇರುವ ಬಾಗ್ಮನೆ ಟೆಕ್ ಪಾರ್ಕ್ನಲ್ಲಿ ಒತ್ತುವರಿ ತೆರವು ನಡೆದಿದೆ. ಒತ್ತುವರಿ ಮಾಡಿರುವ ಸಂಗತಿಯನ್ನು ಟೆಕ್ ಪಾರ್ಕ್ ಒಪ್ಪಿಕೊಂಡಿದೆ. ಆದರೆ, ಪೂರ್ವಂಕರ ಬಿಲ್ಡರ್ ಇದಕ್ಕೆ ಕಾರಣ ಎಂದು ದೂಷಿಸಿದೆ.
ಬಾಗ್ಮನೆ ಟೆಕ್ ಪಾರ್ಕ್ ಮನವಿ ಮಾಡಿದ ಬೆನ್ನಲ್ಲೇ ಬಿಬಿಎಂಪಿ ನಿನ್ನೆ ಬುಧವಾರ ಆ ಪ್ರದೇಶದ ರೀಸರ್ವೆ ಮಾಡಿತ್ತು. ಇದರಲ್ಲಿ ಪೂರ್ವಂಕರ ಡೆವಲಪರ್ಸ್ನವರು ನಿರ್ಮಿಸಿದ ಐಷಾರಾಮಿ ಲೇಔಟ್ ಎನಿಸಿದ ಪೂರ್ವಂಕರ ಪೂರ್ವರಿಡ್ಜ್ ಪ್ರದೇಶದಲ್ಲಿ ಒತ್ತುವರಿಯಾಗಿರುವ ಸಂಗತಿ ತಿಳಿದುಬಂದಿದೆ.

ಬಾಗ್ಮನೆ ಟೆಕ್ ಟಾರ್ಕ್ನಿಂದ 2.5 ಮೀಟರ್ನಷ್ಟು ರಾಜಕಾಲುವೆ ಜಾಗದ ಒತ್ತುವರಿ ಆಗಿದೆ. ಆ ಜಾಗವನ್ನು ಕಾಂಕ್ರೀಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಈ ಸಂಗತಿಯನ್ನು ಬಾಗ್ಮನೆ ಗ್ರೂಪ್ನ ಅಧಿಕಾರಿ ಚಕ್ರವರ್ತಿ ಒಪ್ಪಿಕೊಂಡಿದ್ದಾರೆ.
"ಹೌದು ನಾವು ಕಾಲುವೆ ಜಾಗವನ್ನು ಕಾಂಕ್ರೀಟ್ ಸ್ಲಾಬ್ನಿಂದ ಮುಚ್ಚಿದ್ದೇವೆ. ಮಹದೇವಪುರ ಕೆರೆಯಿಂದ ನೀರು ಹಿಂದಕ್ಕೆ ಬರದಂತೆ ನಡೆಯಲು ಈ ಕೆಲಸ ಮಾಡಿದ್ದೇವೆ. ಇಲ್ಲದಿದ್ದರೆ ಟೆಕ್ ಪಾರ್ಕ್ ಜಾಗದಲ್ಲಿ ಪ್ರವಾಹ ಸೃಷ್ಟಿಯಾಗುತ್ತಿತ್ತು. ಇಲ್ಲಿ ಪೂರ್ವಂಕರ ಪೂರ್ವರಿಡ್ಜ್ ವಿಲ್ಲಾಗಳದ್ದೇ ಮುಖ್ಯ ತಪ್ಪು. ಅವರು ಇಡೀ ಕಾಲುವೆ ಜಾಗವನ್ನೇ ಮುಚ್ಚಿದ್ದಾರೆ" ಎಂದು ಚಕ್ರವರ್ತಿ ಹೇಳಿದ್ದಾರೆ.
ಪೂರ್ವಂಕರ ಪೂರ್ವ ಪಾರ್ಕ್ ರಿಡ್ಜ್ನಲ್ಲಿ ಕೋಟಿ ಕೋಟಿ ಬೆಲೆಯ 149 ವಿಲ್ಲಾಗಳಿವೆ. ಇವುಗಳ ಪೈಕಿ ಬಾಗ್ಮನೆ ಟೆಕ್ ಪಾರ್ಕ್ನ ಕಾಂಪೌಂಡ್ ಆಚೆ ಇರುವ ಎರಡು ವಿಲ್ಲಾಗಳಿಂದ 2.5 ಮೀಟರ್ನಷ್ಟು ಕಾಲುವೆ ಒತ್ತುವರಿ ಆಗಿರುವುದು ದೃಢಪಟ್ಟಿದೆ.

ತಿಂಗಳ ಹಿಂದೆಯೇ ನಡೆದಿತ್ತು ಸರ್ವೆ
ಬಿಬಿಎಂಪಿ ಕಳೆದ ತಿಂಗಳೇ ಈ ಪೂರ್ವಂಕರ ಬಡಾವಣೆಯ ಪ್ರದೇಶದಲ್ಲಿ ಸರ್ವೆ ನಡೆಸಿತ್ತು. ಇಲ್ಲಿ ರಾಜಕಾಲುವೆಯ ಜಾಗದ ಅತಿಕ್ರಮಣ ಆಗಿರುವ ಸಂಗತಿ ಸರ್ವೆಯಿಂದ ತಿಳಿದಿತ್ತು. ಆದರೆ, ಇಲ್ಲಿನ ನಿವಾಸಿಗಳು ಇದನ್ನು ಒಪ್ಪದೇ ಕೋರ್ಟ್ ಮೊರೆ ಹೋದರು. ಯಾವ ಒತ್ತುವರಿ ಮಾಡಲಾಗಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ಸರ್ವೆ ನಡೆದಿದೆ ಎಂದು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ನಿವಾಸಿಗಳ ಸಮ್ಮುಖದಲ್ಲೇ ಬಿಬಿಎಂಪಿ ಸಿಬ್ಬಂದಿ ಬಂದು ಇಲ್ಲಿ ಎರಡನೇ ಬಾರಿ ಸರ್ವೆ ನಡೆಸಿದರು. ರಾಜಕಾಲುವೆಯ ಮೇಲೆಯೇ ವಿಲ್ಲಾಗಳನ್ನು ಕಟ್ಟಲಾಗಿರುವ ಸಂಗತಿ ಬೆಳಕಿಗೆ ಬಂದಿತ್ತು.
ಈಗ ಈ ವಿಚಾರವನ್ನು ಕೋರ್ಟ್ ಇತ್ಯರ್ಥಪಡಿಸಲಿದೆ. "ಕೋರ್ಟ್ ತೀರ್ಪಿನ ಮೇಲೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದ ಬಿಬಿಎಂಪಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಆರ್ ಮಾಲತಿ ಹೇಳಿದ್ದಾರೆ.
ಬುಧವಾರ ನಡೆದ ಸರ್ವೆಯಲ್ಲಿ ಪೂರ್ವಂಕರ ಪೂರ್ವ ಪಾರ್ಕ್ರಿಡ್ಜ್ನಿಂದ 2.5 ಮೀಟರ್ ಕಾಲುವೆ ಜಾಗದ ಒತ್ತುವರಿ ಆಗಿರುವುದರ ಜೊತೆಗೆ ಬಾಗ್ಮನೆ ಟೆಕ್ ಪಾರ್ಕ್ನಿಂದ 2.5 ಮೀಟರ್ ಅಗಲದ ಕಾಲುವೆ ಜಾಗದ ಒತ್ತುವರಿ ಆಗಿರುವುದು ಬೆಳಕಿಗೆ ಬಂದಿದೆ. ಗರುಡಾಚಾರ್ ಪಾಳ್ಯ ಕೆರೆಯಿಂದ ಮಹದೇವಪುರ ಕೆರೆಯ ಭಾಗದಲ್ಲಿ ರಾಜಕಾಲುವೆಯ 13 ಮೀಟರ್ ಅಗಲದ ಜಾಗದ ಮೇಲೆ ಕಟ್ಟಡಗಳನ್ನು ನಿರ್ಮಿಸಲಾಗಿರುವುದು ಸರ್ವೆಯಿಂದ ಗೊತ್ತಾಗಿದೆ.
ಬೆಂಗಳೂರಿನ ಐಟಿ ಪ್ರದೇಶಗಳಲ್ಲಿ ಮಾತ್ರವಲ್ಲ ನಗರದ ಅನೇಕ ಭಾಗಗಳಲ್ಲಿ ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ಆಗಿದೆ. ಕೆರೆ ಮತ್ತು ರಾಜಕಾಲುವೆಗಳ ನಡುವಿನ ಸಂಪರ್ಕ ಕೊಂಡಿಯೇ ಅನೇಕ ಕಡೆ ಕತ್ತರಿಸಿಹೋಗಿದೆ. ಅಲ್ಲದೇ ಅನೇಕ ಕೆರೆಗಳು ಮಾಯವಾಗಿ ಲೇಔಟ್ಗಳು, ವಿವಿಧ ಬಡಾವಣೆಗಳಾಗಿ ಮಾರ್ಪಟ್ಟಿವೆ. ಜೀವಂತ ಇರುವ ಕೆರೆಗಳು ಹೂಳು ತುಂಬಿ ಸೊರಗುತ್ತಿವೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications