‘ಕನಕಪುರ ಕೋಟೆ’ಯಲ್ಲಿ B.L. ಸಂತೋಷ್ ಮೋಡಿ ಮಾಡ್ತಾರಾ?
ಬೆಂಗಳೂರು: ಕನಕಪುರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಗೆಲ್ಲಿಸಲು ಇಡೀ ಕಮಲ ಪಾಳಯ ಒಟ್ಟಾಗಿದೆ. ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ಕನಕಪುರಕ್ಕೆ ದಿಲ್ಲಿಯಿಂದ ಬಿಜೆಪಿ ವರಿಷ್ಠರು ಪ್ರಚಾರಕ್ಕೆ ಬರುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ B.L. ಸಂತೋಷ್ ಕನಕಪುರ ಕೋಟೆಗೆ ಎಂಟ್ರಿ ಕೊಟ್ಟು ಗುಡುಗಿದ್ದಾರೆ.
ಕಾಂಗ್ರೆಸ್ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಕನಕಪುರ ಕ್ಷೇತ್ರದಲ್ಲಿ ಮೊದಲ ಬಾರಿ ಬಿಜೆಪಿ ಬಾವುಟ ಹಾರಿಸುವ ಗುರಿ BJP ನಾಯಕರದ್ದು. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಈ ಸಮಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ B.L. ಸಂತೋಷ್ ಎಂಟ್ರಿ ಕುತೂಹಲ ಕೆರಳಿಸಿದೆ. ಈಗಾಗಲೇ ಪಕ್ಷದ ಸ್ಥಳೀಯ ಕಾರ್ಯಕರ್ತ ಜೊತೆ ಸಭೆ ಆಯೋಜಿಸಿ, ರಾಮನಗರದಲ್ಲಿ ಬಿಜೆಪಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅಲ್ಲದೆ ಡಿಕೆ ಬ್ರದರ್ಸ್ ವಿರುದ್ಧ 'ಬಂಡೆ' ಅಸ್ತ್ರವನ್ನೂ ಪ್ರಯೋಗಿಸಿದ್ದಾರೆ B.L. ಸಂತೋಷ್.

'ಡಿಕೆಶಿ ಅನ್ಯಾಯಕ್ಕೆ ಕಲ್ಲುಬಂಡೆ ಸಾಕ್ಷಿ'
ಹೌದು, B.L. ಸಂತೋಷ್ ರಾಮನಗರಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಕನಕಪುರ ಹೊರವಲಯದ ಕಾಳೇಗೌಡನದೊಡ್ಡಿ ಬಳಿ ತೋಟದ ಮನೆಯಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ವೇಳೆ ಡಿಕೆ ಬ್ರದರ್ ವಿರುದ್ಧ ಹರಿಹಾಯ್ದಿರುವ ಅವರು, 'ಡಿಕೆಶಿ ಸಹೋದರರು ಮಾಡಿರುವ ಅನ್ಯಾಯ ಒಂದೆರೆಡಲ್ಲ. ಇಲ್ಲಿನ ಕಲ್ಲುಬಂಡೆಗಳೇ ಸಾಕ್ಷಿ. ದೆಹಲಿಯಲ್ಲಿ ಗಾಂಧಿ ಕುಟುಂಬ, ಕನಕಪುರದಲ್ಲಿ ಡಿಕೆಶಿ ಕುಟುಂಬಕ್ಕೆ ಅಧಿಕಾರವಾದರೆ ಇನ್ನೆಲ್ಲಿ ಪ್ರಜಾಪ್ರಭುತ್ವ?' ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ 'ಏಕಚಕ್ರಾಧಿಪತ್ಯ ಕೊನೆಗಾಣಿಸಲು ಕಾಲ ಸನ್ನಿಹಿತವಾಗಿದೆ' ಎಂದು ಅಭಿಪ್ರಾಯಪಟ್ಟರು.
ಜೋಡೆತ್ತುಗಳ ವಿರುದ್ಧ ಹೊಸ ಅಸ್ತ್ರ!
ಕಾಂಗ್ರೆಸ್ & ಜೆಡಿಎಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ B.L. ಸಂತೋಷ್, 'ನೀನು ಚಿವುಟಿದಂಗೆ ಮಾಡು, ನಾನು ಕೆರೆದಂತೆ ಮಾಡ್ತೀನಿ ಎಂದು ಮಾಡಿ ಜೋಡೆತ್ತುಗಳಾಗುತ್ತಾರೆ. ಈ ಜೋಡೆತ್ತುಗಳು ಕೆಲಸಕ್ಕೆ ಅಲ್ಲ, ಮೇಯುವ ಜೋಡೆತ್ತುಗಳು. ರಾಜ್ಯವೆಲ್ಲಾ ಸುತ್ತಾಡಿದ ಪಂಚರತ್ನ ಯಾತ್ರೆ ಕನಕಪುರದಲ್ಲೇ ಯಾಕೆ ಪಂಚರ್ ಆಗುತ್ತದೆ? ಎಂದು ಜನರು ಅರಿತಿದ್ದಾರೆ' ಎಂದು ಡಿ.ಕೆ. ಬ್ರದರ್ಸ್ ಹಾಗೂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

ಆರ್.ಅಶೋಕ್ ಪರ ಭರ್ಜರಿ ಪ್ರಚಾರ!
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸವದಿ ಹಾಗೂ ಜಗದೀಶ್ ಶೆಟ್ಟರ್ ಸೋಲಿಗೆ ಬಿಜೆಪಿ ನಾಯಕರು ಶಪಥ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ತೀವ್ರ ಮುತುವರ್ಜಿ ವಹಿಸಿ, ಕನಕಪುರ ಸೇರಿದಂತೆ ಉಳಿದವರ ಕ್ಷೇತ್ರದಲ್ಲಿ ಸಂಘಟನೆ ರೂಪಿಸಿದ್ದಾರೆ ಕಮಲ ಪಾಳಯದ ನಾಯಕರು. ಇದೀಗ B.L. ಸಂತೋಷ್ ಎಂಟ್ರಿ ಕೂಡ ಆಗಿದ್ದು, ಇನ್ನೇನು ಮತದಾನಕ್ಕೆ ಕೆಲವೇ ದಿನ ಉಳಿದಿರುವಾಗ ಗಮನ ಸೆಳೆದಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಇದೇ ಕೆಲಸಕ್ಕೆ ಒಗ್ಗೂಡಿಸುವ ಕೆಲಸವನ್ನ ಕಮಲ ಪಾಳಯ ಮಾಡುತ್ತಿದೆ.
ಸಿ.ಟಿ. ರವಿ ಅಮೇಥಿ ಸವಾಲ್!
ಇನ್ನು ಕೆಲದಿನಗಳ ಹಿಂದೆ ರಾಮನಗರಕ್ಕೆ ಎಂಟ್ರಿ ಕೊಟ್ಟಿದ್ದ ಸಿ.ಟಿ. ರವಿ ಕೂಡ ಡಿ.ಕೆ. ಶಿವಕುಮಾರ್ ವಿರುದ್ಧ ತೊಡೆ ತಟ್ಟಿದ್ದರು. ಸತತ 3 ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದ ರಾಹುಲ್ ಗಾಂಧಿಯನ್ನ 2019ರ ಚುನಾವಣೆಯಲ್ಲಿ ಸೋಲಿಸಿದ್ದನ್ನೇ ಉದಾಹರಣೆಯಾಗಿ ನೀಡಿದ್ದರು ಸಿ.ಟಿ. ರವಿ. ಈ ಮೂಲಕ 'ಅಮೇಥಿಯನ್ನೇ ಬಿಟ್ಟಿಲ್ಲ, ಕನಕಪುರ ಬಿಡ್ತೀವಾ' ಅಂತಾ ಚಾಲೆಂಜ್ ಹಾಕಿದ್ದರು. ಇದೀಗ ಬಿ.ಎಲ್. ಸಂತೋಷ್ ಕೂಡ ಅದೇ ರೀತಿಯ ಸವಾಲು ಹಾಕುವ ಮೂಲಕ ಬಿಜೆಪಿ ಅಭ್ಯರ್ಥಿ ಪರ ಕನಕಪುರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಕನಕಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದಾಳಿ, ವಾಗ್ದಾಳಿ ನಡೆಯುತ್ತಲೇ ಇದೆ. ಎರಡೂ ಪಕ್ಷಗಳ ನಾಯಕರು ಆರೋಪ, ಪ್ರತ್ಯಾರೋಪ ಮಾಡುತ್ತಲ್ಲೇ ಇದ್ದಾರೆ. ಆದರೆ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲಾ ನಿರ್ಧಾರವಾಗುತ್ತೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದೇ ಕನಕಪುರ ಕ್ಷೇತ್ರದಲ್ಲಿ ಕಿಂಗ್ ಯಾರು ಅನ್ನೋದು ಡಿಸೈಡ್ ಆಗಲಿದೆ.












Click it and Unblock the Notifications