ಎಲ್ಪಿಜಿ ಬೆಲೆ ಏರಿಕೆಗೆ ಖಂಡಿಸಿ ಆಟೋ ಚಾಲಕರ ಪ್ರತಿಭಟನೆ
ಬೆಂಗಳೂರು ನವೆಂಬರ್ 9: ಇತ್ತೀಚೆಗೆ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯಾಗುತ್ತಲೇ ಇದೆ. ಇದರ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು ಪರ್ಯಾಯವಾಗಿ ಆಹಾರ ಉತ್ಪನ್ನಗಳ ಮೇಲೆ ಹಾಗೂ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಈ ಮಧ್ಯೆ ಆಟೋ ರಿಕ್ಷಾಗಳಿಗೆ ಬಳಸುವ ಎಲ್ಪಿಜಿ ಬೆಲೆಯು ಕಳೆದ ಒಂದು ವರ್ಷದಲ್ಲಿ ಸುಮಾರು ಎರಡು ಪಟ್ಟು ಏರಿಕೆಯಾಗಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯ ಆಟೋ ಚಾಲಕರ ಘಟಕ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಆಟೋ ಘಟಕದ ರಾಜ್ಯಾಧ್ಯಕ್ಷರಾದ ಅಯೂಬ್ ಖಾನ್, "ಎಲ್ಪಿಜಿ ಬೆಲೆ ಏರಿಕೆ ಮಾಡುವ ಮೂಲಕ ಆಟೋ ಚಾಲಕರ ಜೀವನದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಲೀಟರ್ಗೆ 38 ರೂಪಾಯಿಯಿದ್ದ ಎಲ್ಪಿಜಿ ಬೆಲೆ ಈಗ 66 ರೂಪಾಯಿ ತಲುಪಿದೆ. ಅಂದರೆ, ಕೇವಲ ಒಂದು ವರ್ಷದಲ್ಲಿ 28 ರೂಪಾಯಿ ಏರಿಕೆಯಾಗಿದೆ. ಕಳೆದ ವಾರ ಒಂದೇ ಸಲ 6 ರೂಪಾಯಿ ಹೆಚ್ಚಿಸಲಾಗಿದೆ. ಪ್ರಯಾಣಿಕರು ನೀಡುವ ಹಣವು ಎಲ್ಪಿಜಿಗೇ ಖರ್ಚಾಗುತ್ತಿದ್ದು, ಆದಾಯವಿಲ್ಲದೇ ಚಾಲಕರ ಬದುಕು ದುಸ್ತರವಾಗಿದೆ. ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ" ಎಂದು ಸರ್ಕಾರದ ವಿರುದ್ಧ ಬೇಸರಗೊಂಡರು.
"ಈ ಸರ್ಕಾರಕ್ಕೆ ಆಟೋ ಚಾಲಕರು ಹಾಗೂ ಪ್ರಯಾಣಿಕರ ಹಿತ ಬೇಕಾಗಿಲ್ಲ. ಎಲ್ಪಿಜಿ ಪೂರೈಸುವ ಕಂಪನಿಗಳ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಉದ್ಯಮಿಗಳು ಕೊಡುವ ಹಣದ ಆಸೆಗಾಗಿ ಸಾಮಾನ್ಯ ಜನರ ಜೀವನವನ್ನು ಶೋಚನೀಯ ಸ್ಥಿತಿಗೆ ತಳ್ಳಲಾಗುತ್ತಿದೆ. ಉಳ್ಳವರ ಪರವಾಗಿರುವ ಈ ಸರ್ಕಾರವನ್ನು ಆಡಳಿತದಿಂದ ಕಿತ್ತೊಗೆಯುವವರೆಗೂ ಜನಸಾಮಾನ್ಯರಿಗೆ ನೆಮ್ಮದಿ ಎಂಬುದಿಲ್ಲ. ಎಲ್ಪಿಜಿ ಬೆಲೆಯನ್ನು ಮನಸೋ ಇಚ್ಛೆ ಹೆಚ್ಚಿಸುತ್ತಿರುವ ನರೇಂದ್ರ ಮೋದಿಯವರ ಸರ್ಕಾರವು ದೇಶ ಕಂಡ ಅತ್ಯಂತ ಜನವಿರೋಧಿ ಸರ್ಕಾರವಾಗಿದೆ" ಎಂದು ಸರ್ಕಾರದ ವಿರುದ್ಧ ಅಯೂಬ್ ಖಾನ್ ಹರಿಹಾಯ್ದರು.
ಜೊತೆಗೆ "ಸರ್ಕಾರಕ್ಕೆ ಆಟೋ ಚಾಲಕರ ಬಗ್ಗೆ ಕಾಳಜಿಯಿದ್ದರೆ ಈಗಲಾದರೂ ಬೆಲೆ ಇಳಿಕೆ ಮಾಡಲಿ" ಎಂದು ಬೆಂಗಳೂರು ನಗರ ಎಎಪಿ ಆಟೋ ಚಾಲಕರ ಘಟಕದ ಅಧ್ಯಕ್ಷರಾದ ವೆಂಕಟೇಗೌಡ ಆಗ್ರಹಿಸಿದ್ದಾರೆ.
ಅಕ್ಟೋಬರ್ 6ರಂದು ಸಬ್ಸಿಡಿ ಇಲ್ಲದ 14.2 ಕೆ.ಜಿ. ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 15 ರೂ ಏರಿಕೆ ಮಾಡಿರುವುದಾಗಿ ಸರ್ಕಾರಿ ತೈಲ ಕಂಪನಿಗಳು ಮಾಹಿತಿ ನೀಡಿವೆ. ಅಕ್ಟೋಬರ್ ಮೊದಲ ದಿನದಂದು ತೈಲ ಕಂಪನಿಗಳು 19 ಕೆ.ಜಿ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 43.5 ರೂ ಏರಿಕೆ ಮಾಡಿದ್ದರು. ಇದೀಗ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದರಿಂದ 5 ಕೆ.ಜಿ, ಸಿಲಿಂಡರ್ ಬೆಲೆ 502 ರೂ ಆಗಿದೆ. ಅಕ್ಟೋಬರ್ 6ರಿಂದಲೇ ಹೊಸ ಬೆಲೆ ಜಾರಿಗೆ ಬಂದಿದೆ. ಎರಡು ತಿಂಗಳಿನಲ್ಲಿ ನಾಲ್ಕನೇ ಬಾರಿ ಬೆಲೆ ಏರಿಕೆಯಾಗಿದ್ದು ಸೆಪ್ಟೆಂಬರ್ 1ರಂದು ಕೊನೆಯದಾಗಿ ಸಬ್ಸಿಡಿ ಹಾಗೂ ಸಬ್ಸಿಡಿರಹಿತ ಸಿಲಿಂಡರ್ ಬೆಲೆಯನ್ನು 25ರೂ ಏರಿಕೆ ಮಾಡಲಾಗಿತ್ತು. ಇಂದಿನ ಬೆಲೆ ಹೆಚ್ಚಳದೊಂದಿಗೆ ಜನವರಿ 1ರಿಂದ ಸಿಲಿಂಡರ್ಗೆ ಒಟ್ಟು 205ರೂ ಏರಿಕೆಯಾದಂತಾಗಿದೆ.
ಇನ್ನೂ ಪ್ರತಿಭಟನೆಯಲ್ಲಿ ಬೆಂಗಳೂರು ನಗರದ ಎಎಪಿ ಆಟೋ ಚಾಲಕರ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಕರ್ನಾಟಕ ಪ್ರಜಾಧಿಕಾರ ಹೋರಾಟ ಸಮಿತಿಯ ಕಾರ್ಯದರ್ಶಿ ಜಗನ್, ಎಎಪಿ ಮುಖಂಡರಾದ ಲಕ್ಷ್ಮೀಕಾಂತ ರಾವ್, ಅತೀಕ್ ಅಹ್ಮದ್, ಅನಂತರಾಮು, ರಾಮಕೃಷ್ಣ, ಹೇಮಂತ್ ಹಾಗೂ ಅನೇಕ ಆಟೋ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Recommended Video