ಹೆಚ್ಡಿಕೆ ಮನೆ ಮುಂದೆ ಅಂಟಿಸಿದ್ದ 'ವಿದ್ಯುತ್ ಕಳ್ಳ' ಪೋಸ್ಟರ್ ತೆರವು ಮಾಡಿದ ಪೊಲೀಸರು
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಒಂದು ದಿನದ ನಂತರ ಬೆಂಗಳೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ನಿವಾಸದ ಹೊರಗೆ ಹಾಕಲಾಗಿದ್ದ ಪೋಸ್ಟರ್ಗಳನ್ನು ಪೊಲೀಸರು ಬುಧವಾರ ತೆಗೆದುಹಾಕಿದ್ದಾರೆ.
ಮಂಗಳವಾರ ನಗರದ ಜೆಡಿಎಸ್ ಕಚೇರಿ ಹಾಗೂ ಅವರ ಮನೆ ಬಳಿಯ ಗೋಡೆಗಳ ಮೇಲೆ ಅವರನ್ನು ಕಳ್ಳ ಎಂದು ಬಿಂಬಿಸುವ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.

ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಮುಖ್ಯಸ್ಥ ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೆಪಿ ನಗರದಲ್ಲಿನ ತಮ್ಮ ನಿವಾಸವನ್ನು ಅಲಂಕಾರಿಕ ದೀಪಗಳಿಂದ ಬೆಳಗಿಸಲು ಕಾನೂನುಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿತ್ತು.
ಎಕ್ಸ್ (ಟ್ವಿಟರ್) ನಲ್ಲಿನ ಪೋಸ್ಟ್ನಲ್ಲಿ, ಕರ್ನಾಟಕ ಕಾಂಗ್ರೆಸ್ ಕುಮಾರಸ್ವಾಮಿ ಅವರ ವಿದ್ಯುತ್ ದೀಪದಿಂದ ಅಲಂಕೃತವಾದ ಮನೆಯ ವೀಡಿಯೊವನ್ನು ಹಂಚಿಕೊಂಡಿತ್ತು. "ವಿಶ್ವದ ಏಕೈಕ ಮಹಾಪ್ರಮಾಣಿಕ ಎಚ್ಡಿ ಕುಮಾರಸ್ವಾಮಿ ಅವರ ಜೆಪಿ ನಗರ ನಿವಾಸಕ್ಕೆ ದೀಪಾವಳಿ ದೀಪಗಳಿಗೆ ವಿದ್ಯುತ್ ಕಂಬದಿಂದ ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಕಳ್ಳತನಕ್ಕೆ ಮಾಜಿ ಸಿಎಂ ಬಲಿಯಾಗಿರುವುದು ದುರಂತ" ಎಂದು ವ್ಯಂಗ್ಯವಾಡಿತ್ತು. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.
ಸಮರ್ಥನೆ ಮಾಡಿಕೊಂಡಿದ್ದ ಹೆಚ್ಡಿಕೆ
ಇದಕ್ಕೆ ಉತ್ತರ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಸಮೀಪದ ವಿದ್ಯುತ್ ಕಂಬದಿಂದ ನೇರವಾಗಿ ಸಂಪರ್ಕ ಹಾಕಿಕೊಂಡಿದ್ದು ಖಾಸಗಿ ಡೆಕೋರೇಟರ್, ವಿಷಯ ತಿಳಿದ ಕೂಡಲೇ ಮನೆಯ ಮೀಟರ್ ಬೋರ್ಡ್ನಿಂದ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದರು.
"ದೀಪಾವಳಿಗೆ ನನ್ನ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಖಾಸಗಿ ಡೆಕೋರೇಟರ್ ಅವರಿಗೆ ಹೇಳಿದ್ದೆ. ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಪಕ್ಕದ ಕಂಬದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ಪರೀಕ್ಷೆ ನಡೆಸಿದ್ದರು. ನಿನ್ನೆ ರಾತ್ರಿ ಮನೆಗೆ ವಾಪಸ್ಸು ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂದಿದೆ. ತಕ್ಷಣ ಅದನ್ನು ತೆಗೆದು ಮನೆಯ ಮೀಟರ್ ಬೋರ್ಡ್ ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಇದು ವಾಸ್ತವ." ಎಂದು ಕುಮಾರಸ್ವಾಮಿ ಹೇಳಿದ್ದರು.
ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ವರದಿಯಾದ ನಂತರ ಹೆಚ್ಡಿಕೆ ಅವರ ಮನೆಗೆ ಭೇಟಿ ನೀಡಿದ್ದ ಬೆಸ್ಕಾಂ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳ್ಳತನ ಆರೋಪದ ಮೇಲೆ ಪ್ರಕರಣ ಕೂಡ ದಾಕಲಿಸಲಾಗಿದೆ.
ಈ ಹಿನ್ನಲೆಯಲ್ಲಿ ಅವರ ಮನೆ ಮುಂದೆ ಕಿಡಿಗೇಡಿಗಳು ವಿದ್ಯುತ್ ಕಳ್ಳ ಹೆಚ್ಡಿ ಕುಮಾರಸ್ವಾಮಿ ಎಂದು ಪೋಸ್ಟರ್ ಅಂಟಿಸಿದ್ದರು.












Click it and Unblock the Notifications