ಕಾದಂಬರಿಗೆ ಯಾವ ತಡೆಯಾಜ್ಞೆಯೂ ಬಂದಿಲ್ಲ: ಅಭಿರಾಮ್ ಸ್ಪಷ್ಟನೆ
ಬೆಂಗಳೂರು, ನವೆಂಬರ್ 8: ಕಾದಂಬರಿಯೊಂದಕ್ಕೆ ಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿದೆ ಎಂಬ ವಿಚಾರದ ಬಗ್ಗೆ ಒನ್ ಇಂಡಿಯಾ ಕನ್ನಡ ಸುದ್ದಿ ಪ್ರಕಟಿಸಿತ್ತು. ರಾಮಚಂದ್ರಪುರ ಮಠದಿಂದ ಕೋರ್ಟ್ ಗೆ ಮೊರೆ ಹೋಗಿ, ಇಂಜೆಂಕ್ಷನ್ ಪಡೆದುಕೊಳ್ಳಲಾಗಿದೆ ಎಂಬ ಸುದ್ದಿ ಇತ್ತು. ಆ ಕಾದಂಬರಿಯ ಲೇಖಕರಾದ ಅಭಿರಾಮ್ ಹೆಗಡೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅದರ ಸಂಪೂರ್ಣ ಒಕ್ಕಣೆ ಇಲ್ಲಿದೆ.
ಮಾನ್ಯ ನ್ಯಾಯಾಲಯದಿಂದ ಯಾವುದೇ ರೀತಿಯ ಪತ್ರ ವ್ಯವಹಾರವಾಗಲಿ ಆದೇಶವಾಗಲಿ ಈ ಕ್ಷಣದವರೆಗೂ ನನಗೆ ತಲುಪಿಲ್ಲವಾಗಿಯೂ, ಸದರಿ ವಿಚಾರದ ಬಗ್ಗೆ ಊಹಾಪೋಹಗಳು ಮತ್ತು ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ಈ ವಿಚಾರದಲ್ಲಿ ನಾನು ಸ್ಪಷ್ಟಪಡಿಸುವುದೇನೆಂದರೆ, ನನ್ನ ಕಾದಂಬರಿ ಕೇವಲ ಕಾಲ್ಪನಿಕವಾಗಿದ್ದು ಯಾರೂ ಸಹ ನಾನು ಅವರ ಪೂರ್ವಾಪರ ವೃತ್ತಾಂತದ ಬಗ್ಗೆ ಬರೆಯುತ್ತಿರುವುದಾಗಿ ಭಾವಿಸಬಾರದು. ಅಲ್ಲದೇ ಅವರ ಗಣಗಳೂ ಕೂಡ ಈ ಬಗ್ಗೆ ಸ್ಪಷ್ಟತೆ ಹೊಂದುವುದು ಒಳಿತು.
ಮುಂದುವರೆದು ಸದರೀ ಪ್ರಕರಣದ ಬಗ್ಗೆ ಹರಡಲಾದ ಸುಳ್ಳು ಸುದ್ದಿಯನ್ನು ನಂಬಿ ಹಲವಾರು ಜನರು ನನ್ನ ತೇಜೋವಧೆ ಮಾಡುತ್ತಿರುವುದು ಖಂಡನಾರ್ಹ. ಈಗಾಗಲೇ ಹಲವಾರು ಜನರನ್ನು ಹಿಂದೂ ವಿರೋಧಿಗಳು, ಹಾಗಾಗಿ ಕೊಲ್ಲುತ್ತಿದ್ದೇವೆ ಎಂಬ ಮನೋವಿಕಾರ ಹೊಂದಿರುವ ಸನಾತನ ಸಂಸ್ಥೆ ಜೊತೆಗೆ ಒಡನಾಟ ಹೊಂದಿರುವ, ಜೊತೆಜೊತೆಗೆ ರಾಘವೇಶ್ವರರ ಶಿಷ್ಯರು ಎಂದು ಹೇಳಿಕೊಳ್ಳುವ ಕೆಲವರು ಸಹ ನನ್ನ ವಿರುದ್ಧ ಸುಳ್ಳು ಸುದ್ದಿಯನ್ನು ಹಬ್ಬಿಸುವಲ್ಲಿ ನಿರತರಾಗಿರುವುದು ಆತಂಕ ಹುಟ್ಟಿಸುತ್ತಿದೆ.

ಮುಂದುವರೆದು ರಾಘವೇಶ್ವರರವರು ನನ್ನ ವಿರುದ್ಧ ಮೂಲಭೂತ ಹಕ್ಕಾದ ವಾಕ್ ಸ್ವಾತಂತ್ರ್ಯವನ್ನು ದಿಗ್ಬಂಧಿಸಿದ್ದಾಗಿ, ಕೋರ್ಟ್ ನ ಆದೇಶವಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದು, ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿರುವುದಿಲ್ಲ. ಮಾನ್ಯ ನ್ಯಾಯಾಲಯವು ಸದರಿ ದಿಗ್ಬಂಧನ ಮಾಡಲು ಕೋರಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸುತ್ತಿದ್ದು, ಈ ಕುರಿತಾಗಿ ನನಗೆ ನೋಟಿಸ್ ಜಾರಿ ಮಾಡಲು ಮಾತ್ರ ಆದೇಶಿಸಿದ್ದು, ಪ್ರತಿ ನನಗೆ ತಲುಪಿದ ನಂತರ ನಾನು ನ್ಯಾಯಾಂಗ ಹೋರಾಟ ಮುಂದುವರಿಸಲಿದ್ದೇನೆ.












Click it and Unblock the Notifications