ಬೆಂಗಳೂರಲ್ಲಿ ಎಎಸ್ಐ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ
ಬೆಂಗಳೂರು, ಡಿಸೆಂಬರ್ 13: ವಂಚನೆ ಪ್ರಕರಣವೊಂದರಲ್ಲಿ ಬಂಧಿಸಲು ತೆರಳಿದ್ದ ಎಎಸ್ಐ ಮೇಲೆ ದುಷ್ಕರ್ಮಿಗಳು ಕಾರು ಹರಿಸಿರುವ ಘಟನೆ ಅರಮನೆ ರಸ್ತೆಯ ಪ್ರತಿಷ್ಠಿತ ಹೋಟೆಲ್ನ ಆವರಣವೊಂದರಲ್ಲಿ ನಡೆದಿದೆ.
ಕಬ್ಬನ್ ಪಾರ್ಕ್ ಠಾಣೆ ಸಬ್ ಇನ್ಸ್ಪೆಕ್ಟರ್ ಹನುಮಂತರಾಜು(50) ಅವರ ತಲೆ, ಎಡಗಣ್ಣು ಹಾಗೂ ಎಡಗಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಪ್ರಕರಣದ ಸಂಬಂಧ ಕೇರಳ ಮೂಲದ ಎಂ. ಶರೂನ್, ರಿಬಿನ್ ಹಾಗೂ ಸೈಯದ್ ಅಹಮದ್ನನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರೂ. ಪಡೆದು ಆರೋಪಿಗಳು ವಂಚಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೆ ಅರಮನೆ ರಸ್ತೆಯಲ್ಲಿರುವ ಹೋಟೆಲ್ ಒಂದಕ್ಕೆ ಅರವಿಂದ್ ತಂಡ ಬರುವ ಕುರಿತು ಮಾಹಿತಿ ದೊರೆತಿತ್ತು. ಅವರನ್ನು ಬಂಧಿಸಲು ತೆರಳಿದ್ದಾಗ ಕೊಲೆ ಯತ್ನ ನಡೆದಿದೆ.

ಕೇರಳ ಮೂಲದ ಸುಮಾ ಎಂಬುವವರು ಸ್ನೇಹಿತೆ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ಸಂದೇಶ ಬಂದಿತ್ತು. ಆಗ ಸಾಲಕ್ಕಾಗಿ ಸುಮಾ ಅವರು, ತಕ್ಷಣವೇ ಸ್ನೇಹಿತೆ ಪರವಾಗಿ ಸಂದೇಶ ಕಳುಹಿಸಿದ್ದ ನಂಬರ್ಗೆ ಕರೆ ಮಾಡಿದ್ದರು.
ಕರೆ ಸ್ವೀಕರಿಸಿದ ಅರವಿಂದ್ ನಿಮಗೆ 25 ಲಕ್ಷ ರೂ. ಸಾಲ ಕೊಡಿಸುತ್ತೇನೆ, ಇದಕ್ಕೆ ಪ್ರತಿಯಾಗಿ 1.87 ಲಕ್ಷ ಕಮಿಷನ್ ಕೊಡಬೇಕೆಂದು ಹೇಳಿದ್ದರು.
ಈ ಮಾತಿನಿಂದ ಖುಷಿಯಾಗಿದ್ದ ಸುಮಾ 50ಲಕ್ಷ ರೂ ಸಾಲ ಕೊಡುವಂತೆ ಕೇಳಿದ್ದರು. ಮತ್ತೊಂದು ದಿನ ಕರೆ ಮಾಡಿ ಸಾಲ ಮಂಜೂರಾಗಿದೆ ಬೆಂಗಳೂರಿಗೆ ಬಂದು ತೆಗೆದುಕೊಳ್ಳುವಂತೆ ತಿಳಿಸಿದ್ದ, ಅಂತೆಯೇ ಆಕೆ ಬೆಂಗಳೂರಿಗೆ ಬಂದು ಅವರನ್ನು ಭೇಟಿಯಾಗಿದ್ದರು. ಛಾಪಾ ಕಾಗದ ಶುಲ್ಕವೆಂದು ಮೂರು ಲಕ್ಷ ರೂ ಪಡೆದು ಆರವಿಂದ್ ತಂಡ ಪರಾರಿಯಾಗಿತ್ತು.
ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರನ್ನು ಹಿಡಿಯಲು ಹೋಟೆಲ್ಗೆ ತೆರಳಿದ್ದ ಎಎಸ್ಐಮೇಲೆ ಕಾರಿನಿಂದ ಗುದ್ದಿಸಿ ಹಲ್ಲೆ ಮಾಡಿ ಪರಾರಿಯಾಗಿತ್ತು.












Click it and Unblock the Notifications