ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ: ಸಮುದಾಯವನ್ನು ಸಮರ್ಥಿಸಿಕೊಂಡ ಜಮೀರ್
ಬೆಂಗಳೂರು, ಏಪ್ರಿಲ್ 3: ನಗರದ ಸಾದಿಕ್ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ದಾಳಿಯ ಹೇಯ ಕೃತ್ಯಕ್ಕೆ ರಾಜ್ಯದೆಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, "ಜನರು ತಪ್ಪು ಕಲ್ಪನೆಯಿಂದ ಹಾಗೆ ಮಾಡಿರಬಹುದು" ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಜೊತೆಗಿನ ಸಭೆಗೆ ಮುನ್ನ ಮತ್ತು ನಂತರ ಮಾತನಾಡುತ್ತಿದ್ದ ಜಮೀರ್, "ನನ್ನ ಕ್ಷೇತ್ರದಲ್ಲಿ ಹಲವರನ್ನು ಪರೀಕ್ಷೆಗೆ ನಾನೇ ಖುದ್ದು ಒಳಪಡಿಸಿದ್ದೇನೆ. ಅವರದ್ದೆಲ್ಲಾ ನೆಗಟಿವ್ ಬಂದಿದೆ, ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ತಪ್ಪೇನಿದೆ" ಎಂದಿದ್ದಾರೆ.
ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯ ವಿಚಾರದ ಬಗ್ಗೆ ಮಾತನಾಡುತ್ತಾ, "ಅಲ್ಲಿನ ಜನರಿಗೆ ಯಾವ ಕಾರಣಕ್ಕೆ ಇವರು ಬಂದರು ಅನ್ನೋದು ಗೊತ್ತಿರಲಿಲ್ಲ. NRC ಸರ್ವೇಗೆ ಬಂದರು ಎಂದು ಜನ ಭಯಗೊಂಡು ಆ ರೀತಿ ಮಾಡಿದ್ದಾರೆ" ಎಂದು ಕೃತ್ಯವನ್ನು ಸಮರ್ಥಿಸಿಕೊಳ್ಳುವ ಕೆಲಸಕ್ಕೆ ಜಮೀರ್ ಮುಂದಾಗಿದ್ದಾರೆ.

"ಆಶಾ ಕಾರ್ಯಕರ್ತೆಯರು ಸಹ ಯಾರಿಗೂ ಮಾಹಿತಿ ಕೊಡದೇ ಹೋಗಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಯಾರು ಅನುಮತಿ ಕೊಟ್ಟಿರೋದು? ಸರ್ಕಾರದ ಅನುಮತಿ ತೆಗೆದುಕೊಂಡು ಹೋಗಿದ್ರಾ? ಆಶಾ ಕಾರ್ಯಕರ್ತೆಯರಿಗೆ ಸರ್ವೇ ಮಾಡಲು ಯಾರು ಹೇಳಿದರು ಎನ್ನುವ ಪ್ರಶ್ನೆಯನ್ನು ಜಮೀರ್ ತೆಗೆದಿದ್ದಾರೆ.
"ಕಾರ್ಯಕರ್ತೆಯರು ಯಾರಿಗೂ ಮಾಹಿತಿ ನೀಡದೇ ಹೋಗಿರುವುದನ್ನು ನಾವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ. ನಮ್ಮ ಸಮುದಾಯಕ್ಕೆ ತಿಳಿಹೇಳುವಂತೆ ಸಿಎಂ ಹೇಳಿದ್ದಾರೆ, ಅದನ್ನು ನಾವು ಮಾಡುತ್ತೇವೆ" ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಸಿಎಂ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಡಿಸಿಎಂ ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ಸಿ.ಎಂ ಇಬ್ರಾಹಿಂ, ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಹ್ಯಾರಿಸ್ ಮತ್ತು ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು.
"ನನ್ನ ಮೇಲೆ ದಾಳಿ ನಡೆಸಿದ ಐವರನ್ನು ಬಂಧಿಸಿರುವುದಕ್ಕೆ ಖುಷಿಯಾಗಿದೆ. ನಾವು ಜನರಿಗೋಸ್ಕರ ಮತ್ತು ಉತ್ತಮ ಸಮಾಜಕ್ಕಾಗಿ ದುಡಿಯುತ್ತಿದ್ದೇವೆ" ಎಂದು ಹಲ್ಲೆಗೊಳಗಾಗಿದ್ದ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಹೇಳಿದ್ದಾರೆ.












Click it and Unblock the Notifications