ಎಟಿಎಂನಲ್ಲಿ ಹಣ ತುಂಬಲು ಬಂದು 60 ಲಕ್ಷ ದೋಚಿದ ''ಜೋಗಿ''
ಬೆಂಗಳೂರು: ನ. 12: ಎಟಿಎಂಗಳಿಗೆ ನಗದು ತುಂಬುವ ಖಾಸಗಿ ಕಂಪನಿ ಉದ್ಯೋಗಿ ತನ್ನ ಖತರ್ ನಾಕ್ ಐಡಿಯಾ ಬಳಸಿ ಬರೋಬ್ಬರಿ 40 ಕ್ಕೂ ಹೆಚ್ಚು ಎಟಿಎಂಗಳಲ್ಲಿ ಗೊತ್ತಿಲ್ಲದೇ ಹಣ ಲೂಟಿ ಮಾಡಿದ್ದಾನೆ. ಬ್ಯಾಂಕ್ಗಳ ಗಮನಕ್ಕೆ ಬಾರದಂತೆ ಎಟಿಎಂಗಳಲ್ಲಿ 60 ಲಕ್ಷ ರೂ ದೋಚಿ ಮಜಾ ಮಾಡಿದ್ದಾನೆ. ಕೊನೆಗೂ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಮ್ಯಾನೇಜರ್ಗಳ ಮೇಲೆ ಕಿರುಕುಳ ಆರೋಪ ಹೊರೆಸಿ ನಾಟಕ ಮಾಡಿದ್ದ ವಂಚಕ ಬ್ಯಾಡರಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತ ಎಟಿಎಂನಲ್ಲಿ ಹೇಗೆ ಕ್ಯಾಶ್ ಲೂಟ್ ಮಾಡ್ತಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಂದಹಾಗೆ ಬಂಧಿತ ವ್ಯಕ್ತಿ ವಿನಯ್ ಜೋಗಿ. ಉಡುಪಿ ಮೂಲದ ವಿನಯ್ ಜೋಗಿಯ ಆತ್ಮಹತ್ಯೆ ನಾಟಕ, ಎಟಿಎಂ ಲೂಟಿಯ ರೋಚಕ ಸ್ಟೋರಿ ಇಲ್ಲಿದೆ ನೋಡಿ..
ವಿನಯ್ ಜೋಗಿ ಸೆಕ್ಯೂರ್ ವಾಲ್ಯೂ ಎಂಬ ಖಾಸಗಿ ಕಂಪನಿಯಲ್ಲಿ ಎಟಿಎಂಗಳಿಗೆ ಹಣ ತುಂಬುವ ಕೆಲಸಕ್ಕೆ ಸೇರಿದ್ದ. ಹಣ ತುಂಬಲು ಮಾಗ್ನೆಟಿಕ್ ಕೀ ಈತನಿಗೆ ನೀಡಲಾಗಿತ್ತು. ಎಟಿಎಂನಲ್ಲಿ ಹಣ ಹಾಕುವ ಕೆಲಸ ಶಿಸ್ತು ಬದ್ಧವಾಗಿ ಮಾಡುತ್ತಿದ್ದ ವಿನಯ್, ರಜೆ ದಿನಗಳಲ್ಲಿ ಎಟಿಎಂಗಳಿಗೆ ಹೋಗಿ ಮ್ಯಾಗ್ನೆಟಿಕ್ ಕೀ ಬಳಿಸಿ ಚಿಕ್ಕ ಪುಟ್ಟ ಹಣ ತೆಗೆದು ಸುಮ್ಮನಾಗುತ್ತಿದ್ದ.
ತಾವರೆಕೆರೆ, ಬ್ಯಾಡರಹಳ್ಳಿ, ಗೊಲ್ಲರಹಟ್ಟಿ, ಕೆಂಗೇರಿ ಸುತ್ತಮುತ್ತ ಬ್ಯಾಂಕ್ಗಳಲ್ಲಿ ತನ್ನ ಕೈಚಳಕ ತೋರುತ್ತಿದ್ದ. ಮ್ಯಾಗ್ನೆಟಿಕ್ ಕೀ ಬಳಸಿ ಎಟಿಎಂಗಳಲ್ಲಿ ಹಣ ದೋಚುತ್ತಿದ್ದರಿಂದ ಈತನ ಕೃತ್ಯ ಬೆಳಕಿಗೆ ಬರುತ್ತಿರಲಿಲ್ಲ. ಯಾಕೆಂದ್ರೆ ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಕಾಣದಂತೆ ಅವುಗಳಿಗೆ ಅಡ್ಡ ಮಾಡ್ತಿದ್ದ. ಒಂದೇ ಸಲ ಲಕ್ಷಾಂತರ ಲೂಟಿ ಮಾಡುವ ಯೋಜನೆ ರೂಪಿಸಿದ ವಿನಯ್ ಜೋಗಿ ಗೊಲ್ಲರಹಟ್ಟಿಯಲ್ಲಿರುವ ಕೆನರಾ ಬ್ಯಾಂಕ್ ಸೇರಿದಂತೆ ನಾಲ್ಕು ಕಡೆ ಬರೋಬ್ಬರಿ 36 ಲಕ್ಷ ರೂಪಾಯಿ ಎಗರಿಸಿದ್ದ.
|
ಒನ್ಇಂಡಿಯಾಗೆ ಲಭ್ಯವಾಗಿದೆ ನಾಟಕದ ವಿಡಿಯೋ
ಬ್ಯಾಂಕ್ನವರಿಗೆ ಅನುಮಾನ ಬಂದು ಸೆಕ್ಯೂರ್ ವಾಲ್ಯೂ ಕಂಪನಿ ಗಮನಕ್ಕೆ ತಂದಿದ್ದರು. ಇದೇ ವೇಳೆ ವಿನಯ್ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ ನಾಟಕ ಶುರು ಮಾಡಿದ್ದ. ನನಗೆ ಕಂಪನಿ ಮ್ಯಾನೇಜರ್ಗಳು ಟಾರ್ಚರ್ ಕೊಡ್ತಿದ್ದಾರೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಟ್ಟಿದ್ದ. ಆ ವಿಡಿಯೋ ಒನ್ಇಂಡಿಯಾಗೆ ಲಭ್ಯವಾಗಿದೆ.

ಸೆಕ್ಯೂರ್ ವಾಲ್ಯೂ ಕಂಪನಿ ಅಡಿಟ್ ವೇಳೆ ಅನುಮಾನ
ಎಟಿಎಂಗಳಲ್ಲಿ ಹಣವನ್ನು ಸರಿಯಾಗಿ ತುಂಬಿದ್ದ. ಆದರೆ ಜನ ಎಟಿಎಂನಿಂದ ಹಣ ಪಡೆದ ಬಳಿಕ 2 ರಿಂದ 4 ಲಕ್ಷ ರೂ. ವ್ಯತ್ಯಾಸ ಬರುತ್ತಿತ್ತು. ಸೆಕ್ಯೂರ್ ವಾಲ್ಯೂ ಕಂಪನಿ ಅಡಿಟ್ ಮಾಡಿಸಿದಾಗಲೂ ಹಣ ದುರುಪಯೋಗ ಆಗಿರುವ ಸಂಗತಿ ಹೊರಗೆ ಬಂದಿತ್ತು. ಈ ಕುರಿತು ಗೊಲ್ಲರಹಟ್ಟಿ ಕೆನರಾ ಬ್ಯಾಂಕ್ ಮ್ಯಾನೇಜರ್ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ವಿನಯ್ ಜೋಗಿ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು ಆತನ ಆತ್ಮಹತ್ಯೆಯ ನಾಟಕ ವಿಡಿಯೋ ಜಾಡು ಹಿಡಿದಾಗ, ಆತ ಬೆಂಗಳೂರು ಬಿಟ್ಟಿರುವ ಸಂಗತಿ ಹೊರ ಬಂದಿತ್ತು.

ಕೊರಿಯರ್ ಮಾಡಿದ್ದ11 ಲಕ್ಷ ರೂ. ನಗದನ್ನು ಜಪ್ತಿ
ಕೂಡಲೇ ಕಾರ್ಯ ಪ್ರವೃತ್ತರಾದಾಗ, ಉಡುಪಿಯಲ್ಲಿರುವ ತಂದೆಯವರಿಗೆ ಕೊರಿಯರ್ ಮಾಡಿದ್ದ 11 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದರು. ಮಾತ್ರವಲ್ಲದೇ ಉಡುಪಿ ಕೋ ಆಪರೇಟೀವ್ ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡಿದ್ದ 14 ಲಕ್ಷ ನಗದು ಹಣವನ್ನು ಬ್ಯಾಡರಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಎ. ರಾಜೀವ್ ಜಪ್ತಿ ಮಾಡಿಸಿದ್ದರು. ಮೊಬೈಲ್ ಕರೆಗಳ ಜಾಡು ಹಿಡಿದು ಬರೋಬ್ಬರಿ 15 ದಿನ ಪೊಲೀಸರು ಅಲೆದಾಡಿದ್ದರು. ಬಳ್ಳಾರಿ, ಹೊಸಪೇಟೆ, ಹೀಗೆ ರಾಜ್ಯದಲ್ಲಿ ಸುತ್ತಾಡುತ್ತಿದ್ದ ವಿನಯ್ ಜೋಗಿ ಮೊಬೈಲ್ ಕೂಡ ಆನ್ ಮಾಡುತ್ತಿರಲಿಲ್ಲ. ಪದೇ ಪದೇ ಸಿಮ್ ಗಳನ್ನು ಬದಲಿಸುತ್ತಿದ್ದ.

ಬ್ಯಾಡರಹಳ್ಳಿ ಪೊಲೀಸರ ಕಾರ್ಯಾಚರಣೆ
ಆ ಒಂದು ರಾತ್ರಿ ಸೆರೆ : ಉತ್ತರ ಕರ್ನಾಟಕ ಸುತ್ತಾಡಿ ಮಜಾ ಮಾಡ್ತಿದ್ದ ವಿನಯ್ ಜೋಗಿ, ಇದ್ದಕ್ಕಿದ್ದಂತೆ ಬೆಂಗಳೂರಿಗೆ ಬಂದಿದ್ದ. ಒಂದು ದಿನ ರಾತ್ರಿ 10.30 ರಲ್ಲಿ ಪೋನ್ ಆನ್ ಮಾಡಿದ್ದ. ಅದರ ಲೊಕೇಷನ್ ಜಾಡು ಹಿಡಿದು ಬ್ಯಾಡರಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ಅವರು ಡಿಸಿಪಿ ಸಂಜೀವ ಪಾಟಿಲ ಮಾರ್ಗದರ್ಶನದಲ್ಲಿ ವಿನಯ್ ಜೋಗಿಯನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಈತ ಎಟಿಎಂಗಳಲ್ಲಿ ಮಾಗ್ನೆಟಿಕ್ ಕೀ ಬಳಸಿ ಬರೋಬ್ಬರಿ 40 ಎಟಿಎಂಗಳಲ್ಲಿ 60 ಲಕ್ಷ ರೂ. ದೋಚಿರುವ ಸಂಗತಿ ಬಾಯಿಬಿಟ್ಟಿದ್ದಾನೆ. ಅತನನ್ನು ಬಂಧಿಸಿ 25 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಹಣವನ್ನು ಸಾಲಗಳಿಗೆ ತೀರಿಸಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಬ್ಯಾಡರಹಳ್ಳಿ ಪೊಲೀಸರ ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ಶ್ಲಾಘಿಸಿದ್ದಾರೆ.












Click it and Unblock the Notifications