ಬೆಂಗಳೂರು ಒತ್ತುವರಿ ಜಾಗದಲ್ಲಿ ತಲೆ ಎತ್ತಿದ ವಾಜಪೇಯಿ ಪುತ್ತಳಿ-ಉದ್ಯಾನ
ಬೆಂಗಳೂರು, ಡಿಸೆಂಬರ್ 26: ಖಾಸಗಿಯವರು ಒತ್ತುವರಿಯಾಗಿದ್ದ ಜಾಗದಲ್ಲಿ ಬಿಬಿಎಂಪಿಯು ವಶಕ್ಕೆ ಪಡೆದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ನಿರ್ಮಿಸಿದ್ದು, ಜೊತೆಗೇ ವಾಪಪೇಯಿ ಅವರ ಪುತ್ಥಳಿ ಸ್ಥಾಪಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬನಶಂಕರಿ 2ನೇ ಹಂತದಲ್ಲಿ 2ಕೋಟಿ ರೂಪಾಯಿ ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನವನ್ನು ಮಾಜಿ ಪ್ರಧಾನಿ ಅವರ ಜನ್ಮದಿನದಂದು ಡಿ.25ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಜೊತೆಗೆ 12 ಅಡಿ ಎತ್ತರದ ಒಂದು ಟನ್ ತೂಕದ 48 ಲಕ್ಷ ರೂಪಾಯಿ ವೆಚ್ಚದ ಸ್ಥಾಪಿಸಲಾದ ವಾಜಪೇಯಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಬೆಂಗಳೂರು: ಬ್ರಿಗೇಡ್ ರೋಡ್ನಲ್ಲಿ ಮತ್ತೆ ಜನರ ದಂಡು, ವ್ಯಾಪಾರಿಗಳಲ್ಲಿ ಹೊಸ ಭರವಸೆ
ಒಟ್ಟು ಸುಮಾರು 2,000 ಚದರ ಮೀಟರ್ಗಳಷ್ಟು ಹರಡಿರುವ ಈ ಉದ್ಯಾನವನವು ಜಿಮ್ಗೆ ಮೀಸಲಾದ ಸ್ಥಳವನ್ನು ಹೊಂದಿರುವ ಜಿಮ್ ಉಪಕರಣಗಳು, ಆಟದ ಸಲಕರಣೆಗಳೊಂದಿಗೆ ಮಕ್ಕಳಿಗಾಗಿ ಆಟದ ಪ್ರದೇಶ, ಎರಡು ಗೇಜ್ಬೋಸ್ ಮತ್ತು ಸುಸಜ್ಜಿತ ಮಾರ್ಗಗಳು ಮುಂತಾದ ಅನೇಕ ಸೌಲಭ್ಯಗಳನ್ನು ಹೊಂದಿದೆ. ಇವೆಲ್ಲ ಸೌಲಭ್ಯಗಳು ಇಲ್ಲಿನ ನಿವಾಸಿಗಳಿಗೆ ಇನ್ನುಮುಂದೆ ಸದ್ಬಳಕೆಯಾಗಲಿವೆ.
ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ
ಉದ್ಯಾನವನ್ನು ಖಾಸಗಿಯವರು ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದರು. ಆದರೆ ಉದ್ಯಾನದ ಜಾಗ ಮಾತ್ರ ಯಾವುದಕ್ಕೆ ಬಳಕೆ ಆಗದೇ ಬಹುಕಾಲದಿಂದಲೂ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಪರಿಸ್ಥಿತಿಯನ್ನು ಗಮನಿಸಿದ ಬಿಬಿಎಂಪಿ ಭೂಮಿಯನ್ನು ಹಿಂಪಡೆದು ಉದ್ಯಾನವನವಾಗಿ ಮರು ನಿರ್ಮಿಸಲು ಸೂಚಿಸಿತು. ಅದರನ್ವಯ ಇದೀಗ ಉದ್ಯಾನವನ ಅತ್ಯುತ್ತಮ ಸೌಕರ್ಯಗಳೊಂದಿಗೆ ತಲೆ ಎತ್ತಿದೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನೂರಾರು ನಾಗರಿಕರು ವಾಸಿಸುವ ಹಾಗೂ ಈ ಪ್ರದೇಶದ ಹೃದಯ ಭಾಗದಲ್ಲಿ ವಾಜಪೇಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಹೆಮ್ಮೆ ಎನಿಸುತ್ತದೆ. ಉದ್ಯಾನವನ ನಿರ್ಮಾಣಕ್ಕೆ ಕೊಡುಗೆ ನೀಡಿದ ಹಲವು ಮುಖಂಡರು, ಬಿಬಿಎಂಪಿ ಅಧಿಕಾರಿಗಳು ಮತ್ತು ಎಂಜಿನಿಯರ್ಗಳಿಗೆ ಅಭಿನಂದನೆ ತಿಳಿಸಿದರು.
ವಾಜಪೇಯಿ ಅವರು ರಾಜನೀತಿಜ್ಞರಾಗಿದ್ದರು ಮತ್ತು ಪಕ್ಷಾತೀತವಾಗಿ ಯಾವುದೇ ಶತ್ರುಗಳನ್ನು ಹೊಂದಿರಲಿಲ್ಲ. ಅವರೊಬ್ಬ ಅಜಾತಶತ್ರುವಾಗಿದ್ದರು. ವಾಜಪೇಯಿಯವರು 'ಜೈ ಜವಾನ್, ಜೈ ಕಿಸಾನ್ ಮತ್ತು ಜೈ ವಿಜ್ಞಾನ' ಎಂದು ಕರೆ ನೀಡಿದ್ದರು. ಅವರು ಶಿಕ್ಷಣ ಮತ್ತು ವಿಜ್ಞಾನ ಎರಡರಲ್ಲೂ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವರು. ಅವರ ಕಾಲದಲ್ಲಿ ಸರ್ವಶಿಕ್ಷಣ ಅಭಿಯಾನ ಕೇವಲ ಘೋಷಣೆಗೆ ಸಿಮೀತವಾಗಿರಲಿಲ್ಲ ಎಂದು ಅವರು ಸ್ಮರಿಸಿದರು.
ವಾಜಪೇಯಿ ಅವರಿಂದ ಸ್ಫೂರ್ತಿ ಪಡೆದು ರಾಜ್ಯ ಸರ್ಕಾರ ವಿವೇಕ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಕರ್ನಾಟಕದಾದ್ಯಂತ 8,000 ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ವಾಜಪೇಯಿ ಅವರ ಪ್ರೀತಿ ಕಾರಣಕ್ಕೆ ಇಂದು ಬೆಂಗಳೂರು ಐಟಿ ಹಬ್ ಆಗಲು ಕಾರಣವಾಗಿದೆ ಎಂದರು.
ಇಲ್ಲಿನ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಯುತ್ತಿದ್ದಂತೆ ಬಿಬಿಎಂಪಿ ಆಸ್ತಿ ಇಲಾಖೆಯು ಅದನ್ನು ಮರುಪಡೆಯಲು ಅಗತ್ಯ ವ್ಯವಸ್ಥೆ ಮಾಡಿದೆ ಎಂದು ದಕ್ಷಿಣ ವಲಯದ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (ಯೋಜನೆಗಳು) ಮಹಾಂತೇಶ್ ಎಸ್ ಟಿಒಐಗೆ ತಿಳಿಸಿದರು.