'ಬಿಡಿಎ' ಸಮರದಲ್ಲಿ ಕೊನೆಗೂ ಗೆದ್ದ ಸಮಾನ ಮನಸ್ಕ ಎಸ್ ಟಿ ಸೋಮಶೇಖರ್
ಬೆಂಗಳೂರು, ಜೂನ್ 18: ಭಗೀರಥ ಪ್ರಯತ್ನದ ನಂತರ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಬಯಸಿದ್ದನ್ನು ಸಾಧಿಸಿದ್ದಾರೆ. ರಾಜ್ಯ ಸರಕಾರ ಸ್ವಾಮ್ಯದ ಶ್ರೀಮಂತ ಸಂಸ್ಥೆ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ (ಬಿಡಿಎ) ಸೋಮಶೇಖರ್ ಹಿಡಿತ ಇನ್ನು ಜಾಸ್ತಿಯಾಗಲಿದೆ.
ಸಿದ್ದರಾಮಯ್ಯನವರ ಆಪ್ತಬಣದಲ್ಲಿ ಗುರುತಿಸಿಕೊಂಡಿರುವ ಎಸ್ ಟಿ ಸೋಮಶೇಖರ್ ಮೊದಲು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಅದು ಸಾಧ್ಯವಾಗದೇ ಇದ್ದಾಗ, ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದರು. ಇದಾದ ನಂತರ ಸಮಾನ ಮನಸ್ಕರ ಸಭೆಯ ನೇತೃತ್ವವನ್ನೂ ವಹಿಸಿದ್ದರು.
ಈ ನಡುವೆ ನಿಗಮ ಮಂಡಳಿ ಅಧ್ಯಕ್ಷರ ಹುದ್ದೆ ವಿಲೇವಾರಿಯಾದಾಗ ಸೋಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷ ಹುದ್ದೆ ಲಭಿಸಿತ್ತು. ಆದರೆ, ಅಲ್ಲೂ ಅವರು ತಕರಾರು ಎತ್ತಲಾರಂಭಿಸಿದರು. ಯಾಕೆಂದರೆ, ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ಇವರ ಮಾತನ್ನು ಕೇಳುತ್ತಿರಲಿಲ್ಲ ಎಂದು.

ರಾಕೇಶ್ ಸಿಂಗ್ ಅವರು ರೇವಣ್ಣ ಕಡೆಯವರು. ಕಮಿಷನರ್ ಅವರನ್ನು ವರ್ಗಾವಣೆ ಮಾಡಬೇಕೆಂದು ಸೋಮಶೇಖರ್ ಹಾಕಿದ ಒತ್ತಡಕ್ಕೆ ಮುಖ್ಯಮಂತ್ರಿ ಮಣಿದಿರಲಿಲ್ಲ. ಇದೇ ಸಿಟ್ಟಿನಲ್ಲಿ ಮತ್ತೆ ಸಮಾನ ಮನಸ್ಕರ ಸಭೆಯನ್ನು ನಡೆಸಲು ಮುಂದಾದರು, ಆದರೆ ಅದಕ್ಕೆ ಸಿದ್ದರಾಮಯ್ಯ ತಡೆಯೊಡ್ಡಿದರು.
ಕೊನೆಗೆ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕುಮಾರಸ್ವಾಮಿಯ ಮನವೊಲಿಸಿ, ಬಿಡಿಎ ಆಯುಕ್ತರನ್ನು ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾದರು. ಅಲ್ಲಿಗೆ, ಸೋಮಶೇಖರ್ ಅವರನ್ನು ಒಂದು ಹಂತಕ್ಕೆ ತೃಪ್ತಿ ಪಡಿಸಿದಂತಾಗಿದೆ.
ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಿದ್ದ ಸರಕಾರ, ಸೋಮವಾರ (ಜೂ 17) ಹತ್ತು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಡಾ. ಎನ್ ಮಂಜುಳ ಅವರನ್ನು ಬಿಡಿಎ ಆಯುಕ್ತರನ್ನಾಗಿ ಸರಕಾರ ನಿಯೋಜಿಸಿದೆ. ರಾಕೇಶ್ ಸಿಂಗ್ ಅವರನ್ನು ಜನಸಂಪನ್ಮೂಲ ಮತ್ತು ಹೆಚ್ಚುವರಿ ವೈದ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.












Click it and Unblock the Notifications