ಡಿಕೆಶಿಯದ್ದು ಅನುಕಂಪ ಗಿಟ್ಟಿಸುವ ಪ್ರಯತ್ನ: ಡಿಸಿಎಂ ಅಶ್ವತ್ಥ ನಾರಾಯಣ
ಬೆಂಗಳೂರು, ಸೆಪ್ಟೆಂಬರ್ 3: ಡಿಕೆ ಶಿವಕುಮಾರ್ ಅಳುವ ಮೂಲಕ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುವುದನ್ನು ಬಿಡಬೇಕು. ಯಾವುದೇ ಪಕ್ಷದ ಮೇಲೆ ಬೆರಳು ತೋರಿಸಬಾರದು. ಅಳುವ ಮೂಲಕ ಸಿಂಪತಿ ಗಿಟ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಮೂರನೇ ದಿನ ಇಡಿಯಿಂದ ಡಿ.ಕೆ.ಶಿವಕುಮಾರ್ ವಿಚಾರಣೆ
ಇ.ಡಿ ವಿಚಾರಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ನಾನು ನನ್ನ ಮಗ ಪ್ರತಿವರ್ಷ ಸ್ಯಾಂಕಿ ಕೆರೆಯಲ್ಲಿ ಗಣೇಶನನ್ನು ಬಿಡುತ್ತಿದ್ದೆವು. ತಂದೆಗೆ ಎಡೆ ಇಡೋದಕ್ಕೂ ಬಿಡದೆ ಬಿಜೆಪಿ ಸ್ನೇಹಿತರು ಅವಕಾಶ ಸಿಗದಂತೆ ಮಾಡಿಬಿಟ್ಟರು ಎಂದು ಕಣ್ಣೀರು ಹಾಕಿದ್ದರು.
ಕಾನೂನಿನ ಚೌಕಟ್ಟಿನಲ್ಲಿ ಅವರು ಮಾಡಿರುವ ಒಳ್ಳೆಯದು, ಕೆಟ್ಟದ್ದು ಪರಿಶೀಲನೆ ಆಗಬೇಕು. ಅದು ಆಗುತ್ತಿದೆ. ಅವರು ಏನು ಮಾಡಿದ್ದಾರೆ, ಏನು ಆಗಿದೆ, ಏನು ಹೋಗಿದೆ ಎಲ್ಲವೂ ಸಮಾಜಕ್ಕೆ ಗೊತ್ತಿದೆ. ಇವರು ಬೆಳೆದು ಬಂದ ರೀತಿ, ಮಾಡಿರುವ ಕಾರ್ಯ ಸಮಾಜಕ್ಕೆ ಗೊತ್ತಿದೆ.
ಅವರು ಮಾಡಿರುವ ಕರ್ಮಗಳಿಗೆ ಎಲ್ಲವೂ ರಾಜಿ ಆದರೆ ಜನ ಎಲ್ಲಿಗೆ ಹೋಗಬೇಕು? ಹಾಗಾದರೆ ನೀವು ರಾಜಕೀಯ ಯಾಕೆ ಮಾಡುತ್ತಿರಾ, ನೀವು ವ್ಯಾಪಾರಿಗಳಾಗಿ. ಈಗ ಅತ್ತು ಕರೆದು ಮಾಡಿದರೆ ಏನು ಪ್ರಯೋಜನ? ಕಾನೂನಿನ ಅಡಿಯಲ್ಲಿ ಒಳಪಡಬೇಕು, ಅದು ಆಗುತ್ತಿದೆ ಎಂದು ಹೇಳಿ ಮತ್ತೆ, ಯಾರೋ ಉಪ್ಪು ತಿಂದವನು ನೀರು ಕುಡಿಯಲೇಬೇಕು, ಕುಡೀತಾ ಇದ್ದಾನೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅಶ್ವತ್ಥ್ ನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ, ಆಶೀರ್ವಾದ ಪಡೆದರು.