ದೇವೇಗೌಡರ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಾರಂತೆ ಖೇಣಿ!
ಬೆಂಗಳೂರು, ಜ.16 : ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಾರಿ ಮುಖಾಮುಖಿಯಾಗಿ ಹೋರಾಡಲು ಸಿದ್ಧವಾಗುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಲು ಅವರ ವಿರುದ್ಧ ಸ್ಪರ್ಧಿಸುವುದಾಗಿ ಖೇಣಿ ಘೋಷಿಸಿದ್ದಾರೆ.
ಕೆಂಗೇರಿ ಸಮೀಪದ ಸೋಂಪುರದ ಚನ್ನವೀರನ ಪಾಳ್ಯದಲ್ಲಿ ನಡೆದ ಶ್ರೀ ನಂದಿ ಬಸವೇಶ್ವರ ದೇವಾಲಯದ ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮಳೊಂದಿಗೆ ಮಾತನಾಡಿ, ಮಂಬರುವ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು. [ಮತ್ತೆ ನೈಸ್ ರೋಡಿಗಿಳಿದ ದೇವೇಗೌಡರು]

ದೇವೇಗೌಡರನ್ನು ಸೋಲಿಸುವ ಉದ್ದೇಶದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಹಾಸನ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದರು. ತಮ್ಮ ಕರ್ನಾಟಕ ಮಕ್ಕಳ ಪಕ್ಷದ ಅಭ್ಯರ್ಥಿಗಳು ರಾಜ್ಯದ 10 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅಶೋಕ್ ಖೇಣಿ ತಿಳಿಸಿದರು. [ನನ್ನ ಸಾವು ಗೌಡರ ಕೈಯಲ್ಲಿ ಇಲ್ಲ]
ಕೆಲವು ದಿನಗಳಿಂದ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ಗೌಡರು ಹೋರಾಟ ಆರಂಭಿಸಿದ್ದು, ನೈಸ್ ಸಂಸ್ಥೆಯ ಬಿಎಂಐಸಿ ಯೋಜನೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದರಿಂದ ಗೌಡರು ಮತ್ತು ಖೇಣಿ ನಡುವೆ ಮತ್ತೊಂದು ಸುತ್ತಿನ ಗುದ್ದಾಟಗಳು ಆರಂಭವಾಗಿದೆ.
ವಿಧಾನಸಭೆ ಚುನಾವಣೆಗೆ ಕರ್ನಾಟಕ ಮಕ್ಕಳ ಪಕ್ಷದಿಂದ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಶೋಕ್ ಖೇಣಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ಮಕ್ಕಳ ಪಕ್ಷ ಏಕೈಕ ಶಾಸಕರಾಗಿ ವಿಧಾನಸಭೆ ಪ್ರವೇಶಸಿದ್ದಾರೆ. ಸದ್ಯ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಖೇಣಿ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.
ಗೌಡರ ವಿರುದ್ಧ ಖೇಣಿ ವಾಗ್ದಾಳಿ : ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಬಳಿಕ ಅಶೋಕ್ ಖೇಣಿ ದೇವೇಗೌಡರ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ಕೆಲವೇ ದಿನಗಳಲ್ಲಿ "ನನ್ನ ಸಾವು ದೇವೇಗೌಡರ ಕೈಯಲ್ಲಿ ಇಲ್ಲ, ದೇವರ ಕೈಯಲ್ಲಿದೆ. ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ದೇವೇಗೌಡರ ಕುಟುಂಬ ಅಡ್ಡಗಾಲು ಹಾಕುತ್ತಿದೆ" ಎಂದು ಅವರು ಆರೋಪಿಸಿದ್ದರು.
ಸದ್ಯ ದೇವೇಗೌಡರೊಂದಿಗೆ ಮುಖಾಮುಖಿ ಹೋರಾಟಕ್ಕೆ ಸಜ್ಜಾಗುತ್ತಿರುವ ಅಶೋಕ್ ಖೇಣಿ, ಹಾಸನ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಖೇಣಿ ಪಕ್ಷಕ್ಕೆ ಅವರೇ ಅಧ್ಯಕ್ಷರು ಅವರಿಗೆ ಯಾರು ಟಿಕೆಟ್ ನೀಡುವ ಅವಶ್ಯಕತೆಯಿಲ್ಲ ಆದ್ದರಿಂದ ಸ್ಪರ್ಧೆ ಸುಲಭ. ಆದರೆ, ಈ ಚುನಾವಣೆಗೆ ದೇವೇಗೌಡರು ಸ್ಪರ್ಧಿಸಲಿದ್ದಾರೆಯೇ ಕಾದು ನೋಡಬೇಕು?.












Click it and Unblock the Notifications