ಲಾಲ್ ಬಾಗ್ ಇನ್ನುಮುಂದೆ ಕಾಷ್ಠಶಿಲ್ಪಗಳಿಂದ ಕಂಗೊಳಿಸಲಿದೆ
ಬೆಂಗಳೂರು, ಜನವರಿ 13 : ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಮಳೆ, ಗಾಳಿಯಿಂದ ಧರೆಗುರುಳುವ ಮರಗಳನ್ನು ಬಳಸಿ, ಕಾಷ್ಠ ಶಿಲ್ಪಕಲೆ ಮೂಲಕ ಪ್ರವಾಸಿಗರನ್ನು ಸಳೆಯುವ 16 ದಿನಗಳ ರಾಷ್ಟ್ರೀಯ ಸಮಕಾಲೀನ ಜನಪರ ಮರಕೆತತ್ನೆ ಶಿಬಿರ ಆರಂಭವಾಗಿದೆ.
ಶಿಬಿರದಲ್ಲಿ 40 ಜನ ಕಲಾವಿದರು ಭಾಗವಹಿಸುತ್ತಿದ್ದು, ಮರದಲ್ಲಿಯೇ ಹಣ್ಣು, ತರಕಾರಿ, ಪ್ರಾಣಿಗಳನ್ನು ಅರಳಿಸಿ ಆ ಮೂಲಕ ಪರಿಸರದ ಜಾಗೃತಿಯನ್ನು ಮೂಡಿಸುವುದು ಶಿಬಿರದ ಮೂಲ ಉದ್ದೇಶವಾಗಿದೆ.
ಲಾಲ್ ಬಾಗ್ ನಲ್ಲಿ ಈಗಾಗಲೇ ಬಿದ್ದಿರುವ 40 ಮರದ ದಿಮ್ಮಿಗಳಿದ್ದು, ೧೯ರಿಂದ ಆರಂಭಗೊಳ್ಳಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ವೇಳೆ ಈ ಮರದ ಕಾಂಡಗಳು ಹೊಸ ರೂಪದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯಲಿದೆ.

200 ವರ್ಷ ಹಳೆಯದಾಗಿರುವ ಮರಗಳು ನೆಲಕ್ಕುರುಳಿದೆ. ಕಾಷ್ಠಶಿಲ್ಪಕ್ಕೆ ಮಾವು, ನೀಲಗಿರಿ ಹಾಗೂ ಮಧುಬನಿ ಮರಗಳನ್ನು ಮಾತ್ರ ಬಳಸಬಹುದಾಗಿದೆ. ಗಟ್ಟಿ ಕಾಂಡವಿದ್ದರೆ ಮಾತ್ರವೇ ಅದು ಉಪಯುಕ್ತ . ಅಂತಹ ೪೦ ದಿಮ್ಮಿಗಳು ಲಾಲ್ ಬಾಗ್ ನಲ್ಲಿದ್ದು , ಹೊಸ ರೂಪ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ಹೇಳಿದ್ದಾರೆ.
24 ಗಂಟೆ ಕೆತ್ತನೆ ಕಾರ್ಯ: ಸಸ್ಯಕಾಶಿಯಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಬರೋಡ, ಕೋಲ್ಕತ್ತ , ಮುಂಬೈ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳ ಕಲಾವಿದರು ಪಾಲ್ಗೊಂಡಿದ್ದಾರೆ. 20 ಜನ ಸಹಾಯಕ ಶಿಲ್ಪಿಗಳು ಭಾಗವಹಿಸಿದ್ದು ದಿನದ 24 ಗಂಟೆಗಳೂ ಕೆತ್ತನೆ ಕಾರ್ಯ ನಡೆಯಲಿದೆ. ಓಪನ್ ಮ್ಯೂಸಿಯಂ ಸಲುವಾಗಿ 10-12 ಲಕ್ಷ ರೂ ವ್ಯಯವಾಗಲಿದೆ.












Click it and Unblock the Notifications