ಈದ್ಗಾ ಮೈದಾನದಲ್ಲಿ ಚುಟುವಟಿಕೆಗಳಿಗೆ ಅನುಮತಿ ಕೋರಿ ಹಿಂದೂ ಸಂಘಟನೆಗಳು
ಬೆಂಗಳೂರು ಜೂನ್ 8: ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕೋರಿ ಮೂರು ಹಿಂದೂ ಸಂಘಟನೆಗಳು ಬಿಬಿಎಂಪಿಗೆ ಮನವಿ ಸಲ್ಲಿಸಿವೆ.
ಚಾಮರಾಜಪೇಟೆಯ ಈದ್ಗಾ ಮೈದಾನದ ಎರಡು ಎಕರೆ, ಹತ್ತು ಗುಂಟೆ ಜಮೀನು ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ್ದು, ಇಲ್ಲಿ ಎಲ್ಲ ರೀತಿಯ ಸಾರ್ವಜನಿಕ ಚುಟುವಟಿಕೆಗಳಿಗೆ ಅವಕಾಶ ಇದೆ ಎಂದು ಬಿಬಿಎಂಪಿ ಸೋಮವಾರ ಹೇಳಿಕೆ ನೀಡಿದ ಬೆನ್ನಲ್ಲೇ ಸಂಘಟನೆಗಳಿಂದ ಈ ರೀತಿಯ ಮನವಿಗಳು ಬಂದಿವೆ.
ಬೆಂಗಳೂರಿನಲ್ಲಿ ಕೊರೊನಾವೈರಸ್ ಹೆಚ್ಚಳ; ಮಾಸ್ಕ್ ಕಡ್ಡಾಯ
ಪಾಲಿಕೆಯಿಂದ ಈ ಘೋಷಣೆಯು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇಡೀ ಈದ್ಗಾ ಮೈದಾನವು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಮುಸ್ಲಿಂ ಮುಖಂಡರು ಪ್ರತಿಪಾದಿಸಿದ್ದಾರೆ. ಅಲ್ಲದೇ ಬೆಂಗಳೂರು ಸಿಟಿ ಕಾರ್ಪೊರೇಷ್ ನಿಂದ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ 1964 ರ ಸುಪ್ರೀಂ ಕೋರ್ಟ್ ತೀರ್ಪನ್ನು ಸಹ ಅವರು ಉಲ್ಲೇಖಿಸುತ್ತಾರೆ. ಜತೆಗೆ ಇತರೆ ಚಟುವಟಿಕೆಗಳಿಗೆ ಅನುಮತಿ ನೀಡುವುದರಿಂದ ಕೋಮು ಗಲಭೆಗೆ ಉಂಟಾಗಬಹುದು ಎಂದು ಮುಸ್ಲಿಂ ಸಮುದಾಯದ ಮುಖಂಡರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನ (ಜೂನ್ 21), ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15) ಮತ್ತು ಅಜಾದಿ ಕಾ ಅಮೃತ ಮಹೋತ್ಸವ (ಆಗಸ್ಟ್ 14 ಮತ್ತು 15) ಪ್ರಯುಕ್ತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕೋರಿ ಶ್ರೀರಾಮ ಸೇನೆ, ವಿಶ್ವ ಸನಾತನ ಪರಿಷತ್ ಮತ್ತು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯು ಬಿಬಿಎಂಪಿ ಪಶ್ಚಿಮ ವಲಯಕ್ಕೆ ಮಂಗಳವಾರ ಲಿಖಿತ ಅರ್ಜಿ ಸಲ್ಲಿಸಿವೆ.
ಬೆಂಗಳೂರು: ಒಂದೇ ವರ್ಷದಲ್ಲಿ ಎಂಟು ಉಗ್ರರ ಬಂಧನ: ಇಲ್ಲಿದೆ ವಿವರ..
ಇನ್ನೂ ಕೆಲವು ಹಿಂದೂ ಪರ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಇದೇ ರೀತಿ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕೋರಿ ಬಿಬಿಎಂಪಿ ಯನ್ನು ಸಂಪರ್ಕಿಸಲು ಯೋಜಿಸುತ್ತಿವೆ.
ಈದ್ಗಾ ಮೈದಾನ ಸಾರ್ವಜನಿಕ ಆಸ್ತಿ
"ಈದ್ಗಾ ಮೈದಾನ ಸಾರ್ವಜನಿಕ ಆಸ್ತಿಯಾಗಿರುವುದರಿಂದ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣ ಮಾಡಲು ಅನುಮತಿ ಕೋರಿ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ. ಮುಸ್ಲಿಮರು ಕೂಡ ಅದೇ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಯೋಜಿಸಿದರೆ, ನಾವು ನಮ್ಮ ಕಾರ್ಯಕ್ರಮವನ್ನು ಕೈಬಿಡುತ್ತೇವೆ,'' ಎಂದು ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಎಸ್.ಭಾಸ್ಕರನ್ ಹೇಳಿದರು. ಈ ಮನವಿಗಳ ಬಗ್ಗೆ ಬಿಬಿಎಂಪಿ ಕೂಡಲೇ ಪ್ರತಿಕ್ರಿಯಿಸಿಲ್ಲ.
"ಕಾರ್ಯಕ್ರಮಗಳ ಆಧಾರದ ಮೇಲೆ ಈದ್ಗಾ ಮೈದಾನದಲ್ಲಿ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗುವುದು,'' ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದ್ದರು.
ಇತರೆ ಚಟುವಟಿಕೆಗಳಿಗೆ ಅವಕಾಶ
"ಈದ್ಗಾ ಮೈದಾನದವು ಸಾರ್ವಜನಿಕ ಆಸ್ತಿ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ಇದರ ಕಸ್ಟೋಡಿಯನ್. ವರ್ಷದಲ್ಲಿ ಎರಡು ಬಾರಿ ತಮ್ಮ ಪವಿತ್ರ ಹಬ್ಬಗಳಂದು ಮುಸ್ಲಿಮರು ಸಾಮೂಹಿಕವಾಗಿ ನಮಾಜ್ ಸಲ್ಲಿಸುವ ದಿನಗಳನ್ನು ಹೊರತುಪಡಿಸಿ, ಉಳಿದ ದಿನಗಳಲ್ಲಿ ಇತರೆ ಚಟುವಟಿಕೆಗಳನ್ನು ನಡೆಸಲು ಅಲ್ಲಿ ಅವಕಾಶವಿದೆ,'' ಎಂದು ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ
ಈದ್ಗಾ ಮೈದಾನದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕೋರಿ ಇದುವರೆಗೂ ನಗರ ಪೊಲೀಸ್ ಇಲಾಖೆಗೆ ಯಾವುದೇ ಮನವಿಗಳು ಸಲ್ಲಿಕೆಯಾಗಿಲ್ಲ. ಆದರೆ ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ನಡೆದ ಘಟನೆಗಳು ಪುನರಾವರ್ತನೆ ಆಗಬಹುದು ಎಂದು ಹೆದರಿ ಈ ರೀತಿಯ ಮನವಿಗಳಿಗೆ ಪೊಲೀಸರು ಎಂದೂ ಅನುಮತಿ ನೀಡಿಲ್ಲ. 2013ರಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಹೇಳಿ ಈದ್ಗಾ ಮೈದಾನದಲ್ಲಿ ಆರ್ಎಸ್ಎಸ್ ಮೆರವಣಿಗೆ ನಡೆಸುವುದನ್ನು ಪೊಲೀಸರು ತಡೆದಿದ್ದರು. ಆರ್ಎಸ್ಎಸ್ನ ರಾಜ್ಯದ ಪ್ರಧಾನ ಶಾಖೆಯು ಈದ್ಗಾ ಮೈದಾನದ ಒಂದೂವರೆ ಕಿ.ಮೀ. ಅಂತರದಲ್ಲಿದೆ.
ಕೋಮು ಸೌಹಾರ್ದತೆ ಹಾಳು
"ಈದ್ಗಾ ಮೈದಾನವನ್ನು ಕ್ರೀಡಾ ಚಟುವಟಿಕೆಗಳಿಗೆ ಬಳಸಬಹುದು. ಆದರೆ ಇಲ್ಲಿ ಇತರೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಕೋಮು ಸೌಹಾರ್ದತೆಯನ್ನು ಹಾಳು ಮಾಡಬಹುದು,'' ಎಂದು ಈದ್ಗಾ ಮಸೀದಿ ಮತ್ತು ಅಂಜುಮನಿ ಇಸ್ಲಾಮಿಯಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಖಾನ್ ಹೇಳಿದರು. "ರಾಷ್ಟ್ರ ಧ್ವಜವನ್ನು ಪ್ರತ್ಯೇಕವಾಗಿ ಹಾರಿಸುವ ಬದಲು, ನಾವು ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಿಸುವಾಗ ಅವರು ನಮ್ಮೊಂದಿಗೆ ಸೇರಿಕೊಳ್ಳಲಿ,'' ಎಂದು ಸಲಹೆ ನೀಡಿದರು.
ಈದ್ಗಾ ಮೈದಾನದಲ್ಲಿ ಮಿನ್ಬಾರ್ ಇದೆ
"ಇತರ ಧರ್ಮಗಳ ಜನರು ಯಾವುದೇ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಈದ್ಗಾ ಮೈದಾನದಲ್ಲಿ ನಡೆಸುವುದನ್ನು ಮುಸ್ಲಿಮರು ಬಲವಾಗಿ ವಿರೋಧಿಸುತ್ತಾರೆ. ಏಕೆಂದರೆ ಇಲ್ಲಿನ ನೆಲದೊಳಗೆ ಮಿನ್ಬಾರ್ ಇದೆ,'' ಎಂದು ಅಬ್ದುಲ್ ರಜಾಕ್ ಖಾನ್ ಹೇಳಿದರು. "ಮಿನ್ಬಾರ್ ಸರಕಾರಿ ನೆಲದಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೇ ರಾಜ್ಯ ಸರಕಾರವು ಕರ್ನಾಟಕ ಧಾರ್ಮಿಕ ರಚನೆಗಳ(ರಕ್ಷಣೆ) ಕಾಯಿದೆ- 2021ರ ಪ್ರಕಾರ ಅದನ್ನು ರಕ್ಷಿಸಬೇಕು,'' ಎಂದು ಮನವಿ ಮಾಡಿದರು.
ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖ
"ಸರಕಾರಿ ಜಾಗದಲ್ಲಿ ನೂರಾರು ದೇಗುಲಗಳಿವೆ. ಆ ಸ್ಥಳಗಳಲ್ಲಿ ನಮಾಜ್ ಅಥವಾ ಮೊಹರಂ ಆಚರಣೆಗೆ ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ನಾವು ಎಂದು ಮನವಿ ಮಾಡುವುದಿಲ್ಲ. ಇಡೀ ಈದ್ಗಾ ಮೈದಾನವು ವಕ್ಫ್ ಬೋರ್ಡ್ ಗೆ ಸೇರಿದ ಆಸ್ತಿಯಾಗಿದೆ. ಈ ಬಗ್ಗೆ 1964ರ ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ,'' ಎಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಸಿಇಒ ಖಾನ್ ಪರ್ವೇಜ್ ಪ್ರತಿಪಾದಿಸಿದರು.
Recommended Video