ಆಂಬಿಡೆಂಟ್ ಪ್ರಕರಣ: ಸಿಸಿಬಿ ಅಲೋಕ್ ಕುಮಾರ್ ಭೇಟಿ ಮಾಡಿದ ರವಿಕೃಷ್ಣಾ ರೆಡ್ಡಿ
ಬೆಂಗಳೂರು, ಡಿಸೆಂಬರ್ 20: ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಇಂದು ಸಿಸಿಬಿ ಕಚೇರಿಗೆ ಭೇಟಿ ನೀಡಿ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು.
ಆಂಬಿಡೆಂಟ್ ಪ್ರಕರಣದ ಬಗ್ಗೆ ಹಲವು ಮನವಿ ಪತ್ರಗಳನ್ನು ಹಿಡಿದು ಸಿಸಿಬಿ ಕಚೇರಿಗೆ ಹೋಗಿದ್ದ ರವಿಕೃಷ್ಣಾ ರೆಡ್ಡಿ ಅಲೋಕ್ ಕುಮಾರ್ ಹಾಗೂ ಆಂಬಿಡೆಂಟ್ ತನಿಖಾಧಿಕಾರಿ ಎಸಿಪಿ ಬಾಲರಾಜ್ ಮತ್ತು ಡಿಸಿಪಿ ಗುರುರಾಜ್ ಅವರನ್ನು ಭೇಟಿ ಮಾಡಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದರು.
"ತನ್ನಿಂದ ಕೆಲವು ಹಾಲಿ/ಮಾಜಿ ಸಚಿವ/ಶಾಸಕರು ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ಹಣ ಪಡೆದಿದ್ದಾರೆ ಮತ್ತು ಅವರು ಯಾರು ಎಂದೂ ಸಯ್ಯದ್ ಫರೀದ್ ತನಗೆ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾನೆ" ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಮಾಜಿ ತನಿಖಾಧಿಕಾರಿ ಎಸಿಪಿ ವೆಂಕಟೇಶ ಪ್ರಸನ್ನರನ್ನೂ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಬೇಕೆಂದು ಅಲೋಕ್ ಕುಮಾರ್ ಅವರು ಬಳಿ ಕೋರಿದ್ದಾಗಿ ರವಿಕೃಷ್ಣಾ ರೆಡ್ಡಿ ಅವರು ಹೇಳಿದ್ದಾರೆ.

ಆಂಬಿಡೆಂಟ್ ಪ್ರಕರಣದ ಬಗ್ಗೆ ಅಲೋಕ್ ಕುಮಾರ್ ಹಾಗೂ ತನಿಖಾಧಿಕಾರಿಗಳ ಬಳಿ ಸುಮಾರು ಅರ್ಧ ಗಂಟೆ ಕಾಲ ಚರ್ಚೆ ಮಾಡಿದ್ದಾಗಿ ರವಿಕೃಷ್ಣಾ ರೆಡ್ಡಿ ತಿಳಿಸಿದ್ದು, ರವಿಕೃಷ್ಣಾ ರೆಡ್ಡಿ ಅವರ ಮಾತು ಕೇಳಿದ ಅಲೋಕ್ ಕುಮಾರ್ ಅವರು, ತನಿಖಾಧಿಕಾರಿಗೆ, ಮಾಜಿ ತನಿಖಾಧಿಕಾರಿ ಬಳಿ ಹೇಳಿಕೆ ಪಡೆಯಲು ಸೂಚಿಸಿದ್ದಾರೆ ಎಂದು ಸ್ವತಃ ರವಿಕೃಷ್ಣಾ ರೆಡ್ಡಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ಸಂತ್ರಸ್ತರಿಗೆ ಶೀಘ್ರ ನ್ಯಾಯ ಮತ್ತು ಪರಿಹಾರ ಆಗ್ರಹಿಸಿ ಮತ್ತು ಇಡೀ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಶನಿವಾರದಿಂದ (22-12-2018) ಮತ್ತೆ ಧರಣಿ ಸತ್ಯಾಗ್ರಹ ಆರಂಭವಾಗುತ್ತದೆ. ನ್ಯಾಯಪರರು ಬೆಂಬಲಿಸಬೇಕೆಂದು ಇದೇ ಸಂದರ್ಭದಲ್ಲಿ ರವಿಕೃಷ್ಣಾ ರೆಡ್ಡಿ ಅವರು ಕೋರಿದರು.












Click it and Unblock the Notifications