ಸಿಎಂ ಕಾರ್ಯಾಲಯದ ಮತ್ತೊಂದು ವಿಕೆಟ್ ಶೀಘ್ರದಲ್ಲಿ ಪತನ ?
ಬೆಂಗಳೂರು, ನ 22: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತ ವರ್ಗದ ರಾಜೀನಾಮೆ ಪರ್ವ ಶುರುವಾಗಿದೆ. ಇಬ್ಬರು ಸಲಹೆಗಾರರು ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವರ್ಗದ ಇನ್ನೊಂದು ವಿಕೆಟ್ ಬೀಳುವ ಸಾಧ್ಯತೆಯಿದೆ. ಒಂದಡೆ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವವರು ಪ್ರಭಾವ ಬೀರಿ ಸಚಿವ ಸ್ಥಾನಕ್ಕೆ ಯತ್ನಿಸುತ್ತಿರುವುದು ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದಡೆ ಸಿಎಂ ಅವರ ಆಪ್ತ ವರ್ಗದ ವಿಕೆಟ್ ಗಳು ಒಂದೊಂದೇ ಪತನವಾಗುತ್ತಿದೆ. ಯಡಿಯೂರಪ್ಪ ಅವರ ಪರಮಾಪ್ತ ಎರಡು ವಿಕೆಟ್ ಬಿದ್ದ ಬಿನ್ನಲ್ಲೇ ಅವರ ಪರಮಾಪ್ತ ಮತ್ತೊಂದು ವಿಕೆಟ್ ಬೀಳುವ ಸಂಗತಿ ಹೊರ ಬಿದ್ದಿದೆ.
ಸಚಿವ ಸಂಪುಟ ಪುನಾರಚನೆಗೆ ಕೇಂದ್ರ ಬಿಜೆಪಿ ವರಿಷ್ಠರ ಅನುಮತಿ ಪಡೆದು ಚಾಲ್ತಿ ನೀಡಲು ಮುಖ್ಯಮಂತ್ರಿಗಳು ಹರ ಸಾಹಸ ಮಾಡುತ್ತಿದ್ದಾರೆ. ಆಪರೇಷನ್ ಕಮಲದ ಕೂಸುಗಳಿಗೆ ಸಚಿವ ಸ್ಥಾನ ಸಿಕ್ಕಿರುವ ಕಾರಣ ಮುನಿಸಿಕೊಂಡಿರುವ ಮೂಲ ಬಿಜೆಪಿ ನಾಯಕರು ಈ ಬಾರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ನಾನಾ ಕಸರತ್ತು ಆರಂಭಿಸಿದ್ದಾರೆ. ಇದು ಸಿಎಂ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇತ್ತ ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಬೇರೆಯದ್ದೇ ಬೆಳವಣಿಗೆಗಳು ಆಗುತ್ತಿವೆ. ಯಡಿಯೂರಪ್ಪ ಅವರಿಗೆ ಪರಮಾಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಎಂ.ಬಿ. ಮರಮಕಲ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಯಾವ ಕಾರಣವೂ ನೀಡದೇ ರಾಜಕೀಯ ಕಾರ್ಯದರ್ಶಿ ಹುದ್ದೆ ರದ್ದು ಮಾಡಲಾಗಿದೆ ಎಂಬ ಆದೇಶ ಹೊರಡಿಸುವ ಮೂಲಕ ಸಿಎಂ ಕಾರ್ಯಾಲಯದಿಂದ ವಜಾ ಮಾಡಲಾಗಿತ್ತು. ಇದರ ಬೆನ್ನಲ್ಲೇ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ಹೊರ ಬಿದ್ದಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಬೆಳವಣಿಗೆಯಾಗಿದೆ.

ಬಿ.ಎಸ್.ಯಡಿಯೂರಪ್ಪ ಅವರ ಆಪ್ತನಾಗಿ ಗುರುತಿಸಿಕೊಂಡಿದ್ದ ದೂರದ ಸಂಬಂಧಿ ಎನ್. ಆರ್. ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗೆ ಇಳಿಸಲಾಗುತ್ತಿದೆ ಎಂಬುದು. ಇದೇ ನವೆಂಬರ್ 25 ರೊಳಗೆ ಸಿಎಂ ಕಾರ್ಯಾಲಯದ ಆದೇಶ ಪ್ರತಿ ಹೊರ ಬೀಳಲಿದೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. . ಸಂತೋಷ್ ಅವರನ್ನು ವಜಾಗೊಳಿಸುವ ಮೊದಲೇ ಅವರೇ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಇಳಿಸಲು ಡೆಡ್ ಲೈನ್ ನಿಗಧಿಯಾಗಿದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಬಿ. ಎಸ್. ಯಡಿಯೂರಪ್ಪ ಪಾಲಿಗೆ ಸ್ವಂತ ಪುತ್ರನಂತೆ ನಿಷ್ಠಾವಂತಿಕೆ ಮೆರೆಯುವ ಮೂಲಕ ಎನ್. ಆರ್. ಸಂತೋಷ್ ಗುರುತಿಸಿಕೊಂಡಿದ್ದರು. ಆಪರೇಷನ್ ಕಮಲ ಕಾರ್ಯಚರಣೆ ವೇಳೆಯಂತೂ ಸಂತೋಷ್ ಹೆಸರು ಮುನ್ನೆಲೆಗೆ ಬಂದಿತ್ತು. ಸಂತೋಷ್ ನಿಷ್ಠಾವಂತಿಕೆ ನೋಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಅವರಿಗೆ ಗೇಟ್ ಪಾಸ್ ಕೊಡಲು ಆದೇಶ ಸಿದ್ಧವಾಗಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಸಂತೋಷ್ ಅವರಿಗೆ ಗೇಟ್ ಪಾಸ್ ಕೊಟ್ಟಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಮೂವರಿಗೆ ಗೇಟ್ ಪಾಸ್ ಕೊಟ್ಟಂತಾಗುತ್ತದೆ.












Click it and Unblock the Notifications