ವಿಧಾನಸೌಧದ ಗೋಡೆ ಒಡೆಸಿದ ಸಚಿವ ಆಂಜನೇಯ
ಬೆಂಗಳೂರು, ಜ.6 : ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಗೋಡೆಗೆ ಮತ್ತೊಮ್ಮೆ ಗುದ್ದಲಿ ಪೆಟ್ಟು ಬಿದ್ದಿದೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭಾನುವಾರ ತಮ್ಮ ಕಚೇರಿಯ ಗೋಡೆಯನ್ನು ಒಡೆಸಿದ್ದಾರೆ. ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಆಂಜನೇಯ ನಡುವೆ ಕೊಠಡಿಗಾಗಿ ನಡೆದಿತ್ತು. ಇದರ ನಡುವೆಯೇ ತಮ್ಮ ಕಚೇರಿಗೆ ಅನುಕೂಲವಾಗುವಂತೆ ಆಂಜನೇಯ ಗೋಡೆಯನ್ನು ಒಡೆಸಿಹಾಕಿದ್ದಾರೆ.
ಭಾನುವಾರ ರಜಾ ದಿನದ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿಧಾನಸೌಧದ ಮೂರನೇ ಮಹಡಿಯ 340, 341, 341ಎ ಕೊಠಡಿಗಳ ನಡುವಿನ ಗೋಡೆಗಳನ್ನು ಒಡೆದು ಕಚೇರಿಯನ್ನು ವಿಸ್ತರಿಸಲು ಮುಂದಾಗಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಈ ಕೊಠಡಿಗಳು ಹಂಚಿಕೆಯಾಗುತ್ತವೆ ಎಂದು ತಿಳಿದ ಸಚಿವರು, ತರಾತುರಿಯಲ್ಲಿ ತಮ್ಮ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಿದ್ದರು. ಸದ್ಯ ಗೋಡೆಯನ್ನು ಒಡೆಯವು ಮೂಲಕ ವಿವಾದ ಹುಟ್ಟುಹಾಕಿದ್ದಾರೆ.

ಹೊಸ ಕೊಠಡಿಗೆ ಕಾಲಿಟ್ಟ ಕ್ಷಣವೇ ಕೊಠಡಿಗಳ ನಡುವಿನ ಗೋಡೆ ಒಡೆಸಿ ಕಚೇರಿ ವಿಶಾಲಗೊಳಿಸುವುದಾಗಿಯೂ ಎಚ್. ಆಂಜನೇಯ ಹೇಳಿದ್ದರು. ಸದ್ಯ ನುಡಿದಂತೆ ನಡೆದಿರುವ ಅವರು, ಭಾನುವಾರ ತಮ್ಮ ಗೋಡೆ ಒಡೆಯುವ ಕೆಲಸ ಮಾಡಿಸಿದ್ದಾರೆ. ಭಾನುವಾರ ರಜಾ ದಿನವಾದ ಕಾರಣ ಮಾಧ್ಯಮಗಳಿಗೂ ವಿಧಾನಸೌಧ ಪ್ರವೇಶ ನಿರಾಕರಿಸಲಾಗಿತ್ತು, ಇದರ ಉಪಯೋಗ ಪಡೆದುಕೊಂಡ ಅವರು, ಗೋಡೆ ಒಡೆಸಿ ಅದರ ಅವಶೇಷಗಳನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಸಿ ಸಾಗಿಸಿದ್ದಾರೆ. [ವಿಧಾನಸೌಧದ ಗೋಡೆ ಒಡೆಸಿದ ಅರಣ್ಯ ಸಚಿವರು]
ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಿಎಂ ಜಗದೀಶ ಶೆಟ್ಟರ್ ಅವರ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ ಇದೇ 340 ಕೊಠಡಿಯ ಗೋಡೆ ಒಡೆಸಿ ವಿವಾದ ಹುಟ್ಟುಹಾಕಿದ್ದರು. ಆಗ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದವು. ನಂತರ ಅವರು ವಿಕಾಸಸೌಧಕ್ಕೆ ಸ್ಥಳಾಂತರಗೊಂಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅರಣ್ಯ ಸಚಿವ ರಮಾನಾಥ ರೈ ಅವರು ಗೋಡೆ ಒಡೆದು ವಿರೋಧ ಕಟ್ಟಿಕೊಂಡಿದ್ದರು. ಸದ್ಯ ಎಚ್. ಆಂಜನೇಯ ಅವರ ಸರದಿ.
ಸಿಎಂಗೆ ಗೊತ್ತೇ ಇಲ್ವಂತೆ : ಈ ನಡುವೆ ಸಚಿವರು ಗೋಡೆ ಒಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾರಿಕೆಯ ಉತ್ತರ ನೀಡಿದ್ದಾರೆ. ಭಾನುವಾರ ವಿಧಾನಸೌಧಕ್ಕೆ ಯಾರು ಬಂದು ಕೆಲಸ ಮಾಡುತ್ತಾರೆ? ಎಚ್. ಆಂಜನೇಯ ಕೊಠಡಿಯ ಗೋಡೆ ಒಡೆಸುತ್ತಿರುವುದರ ಕುರಿತು ತಮಗೇನೂ ಮಾಹಿತಿ ಇಲ್ಲ ಎಂದು ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications