ಪ್ರಿನ್ಸಿಪಾಲ್ ಇರಿದು ಕೊಂದ ದುಷ್ಕರ್ಮಿ ಮೇಲೆ ಪೊಲೀಸರಿಂದ ಶೂಟೌಟ್
ಬೆಂಗಳೂರು, ಅಕ್ಟೋಬರ್ 14: ಆ ಶಾಲೆ ಪಕ್ಕದಲ್ಲಿದ್ದ ಹತ್ತು ಅಡಿ ಜಾಗಕ್ಕಾಗಿ ಆಗಾಗ ವ್ಯಾಜ್ಯ ನಡೆಯುತ್ತಲೇ ಇತ್ತು. ಕೊನೆಗೂ ಶಾಲೆಗೆ ಸೇರಿದ್ದ ಜಾಗವನ್ನು ಹಿಂಪಡೆಯುವಲ್ಲಿ ಆ ಪ್ರಿನ್ಸಿಪಾಲ್ ಯಶಸ್ವಿಯಾಗಿದ್ದರು. ಆದರೆ, ಇಂದು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಾಗ ದುಷ್ಕರ್ಮಿಯೊಬ್ಬ ಅವರನ್ನು ಶಾಲೆ ಆವರಣದಲ್ಲೇ ಕೊಂದಿದ್ದ. ಬೆಳಗ್ಗೆ ಪರಾರಿಯಾಗಿದ್ದ ಕೊಲೆ ಪಾತಕಿಯನ್ನು ಪೊಲೀಸರು ಸಂಜೆ ವೇಳೆಗೆ ಹಿಡಿದು ಹಾಕಿದ್ದಾರೆ.
ಭಾನುವಾರ ಬೆಳಗ್ಗೆ ಅಗ್ರಹಾರ ದಾಸರಹಳ್ಳಿಯಲ್ಲಿರುವ ಹಾವನೂರು ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ರಂಗನಾಥ್ ಅವರು ಪ್ರತಿ ವಾರದಂತೆ ಇಂದು ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದರು. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಂದರ್ಭದಲ್ಲೇ ಕೆಲ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ, ರಂಗನಾಥ್ ಅವರಿಗೆ ಐದಾರು ಬಾರಿ ಇರಿದು ಪರಾರಿಯಾಗಿದ್ದರು.
ತೀವ್ರ ರಕ್ತಸ್ರಾವದಿಂದ ಬಳಲಿದ ರಂಗನಾಥ್ ಅವರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೆ ಮೃತಪಟ್ಟಿದ್ದರು. ಆರೋಪಿಗಳ ಬಗ್ಗೆ ಸುಳಿವು ಪಡೆದ ಮಾಗಡಿ ರಸ್ತೆ ಪೊಲೀಸರು, ತಕ್ಷಣವೇ ಕಾರ್ಯ ನಿರತರಾಗಿ ಎಲ್ಲೆಡೆ ಬಲೆ ಬೀಸಿದ್ದರು. ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಮುಖ್ಯ ಆರೋಪಿ ಬಬ್ಲಿ ಅಲಿಯಾಸ್ ಮುನಿರಾಜು ಇರುವ ಶಂಕೆ ವ್ಯಕ್ತವಾಗಿ, ಆತನ ಅಡ್ಡೆ ಮೇಲೆ ದಾಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಪ್ರತಿ ದಾಳಿ ನಡೆಸಿ ಶೂಟ್ ಮಾಡಲು ಯತ್ನಿಸಿದಾಗ, ಮಾಗಡಿ ಠಾಣೆ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್ ಅವರು ಆರೋಪಿ ಬಬ್ಲಿ ಕಾಲಿಗೆ ಗುಂಡೇಟು ಹೊಡೆದು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೆ ಏನಿರಬಹುದು ಕಾರಣ?: ಶಾಲೆಯ ಮುಂದೆ ಗಂಗಮ್ಮ ಎಂಬುವರ ಜಾಗವಿದ್ದು, ಇದರ 10 ಅಡಿ ಜಾಗಕ್ಕಾಗಿ ಶಾಲೆ ಜತೆಗೆ ವ್ಯಾಜ್ಯ ನಡೆದಿತ್ತು. ಈ ಜಾಗವನ್ನು ಶಾಲೆಗೆ ಬಿಡಿಸಿಕೊಡುವಂತೆ ಪ್ರಾಚಾರ್ಯ ರಂಗನಾಥ್ ಅವರು ಕೋರ್ಟಿಗೆ ಮೊರೆ ಹೋಗಿದ್ದರು. ಅವರ ಪರವಾಗಿಯೇ ಕೋರ್ಟ್ ಆದೇಶ ನೀಡಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಗಂಗಮ್ಮ ಅವರ ಮನೆಯ 10 ಅಡಿ ಜಾಗವನ್ನು ನೆಲಸಮ ಮಾಡಲಾಗಿತ್ತು. ಇದರಿಂದ ಕುಪಿತಗೊಂಡ ಗಂಗಮ್ಮ ಅವರ ಮಕ್ಕಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ತನಿಖೆ, ವಿಚಾರಣೆ ನಂತರ ತಿಳಿಯಲಿದೆ.