ಧ್ವಜವಾಯ್ತು, ಈಗ ಬೆಂಗಳೂರಿನಲ್ಲಿ ನಾಡದೇವತೆ ವಿಗ್ರಹ ಸ್ಥಾಪನೆಗೆ ಚಿಂತನೆ
ಬೆಂಗಳೂರು, ಆಗಸ್ಟ್ 10: ಪ್ರತ್ಯೇಕ ಕರ್ನಾಟಕ ಧ್ವಜ, ಕನ್ನಡ ಫಲಕ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಶಾಲೆಗಳಲ್ಲಿ ಕನ್ನಡ ಕಡ್ಡಾಯ.. ಇದೀಗ ನಾಡದೇವತೆ ಭುವನೇಶ್ವರಿ ಪ್ರತಿಮೆ.
ಕನ್ನಡ ಮಂತ್ರ ಪಠಣೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಸದ್ಯದಲ್ಲೇ ಸಮಿತಿಯೊಂದನ್ನು ರಚನೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ಸಮಿತಿ ನೀಡುವ ವರದಿಯ ಮೇಲೆ ಭುವನೇಶ್ವರಿ ವಿಗ್ರಹ ಪ್ರತಿಷ್ಠಾಪನೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆಯಂತೆ.
ಇದೇ ಡಿಸೆಂಬರ್ ನಲ್ಲಿ ದಾವಣಗೆರೆಯಲ್ಲಿ ಮೂರನೇ ವಿಶ್ವಕನ್ನಡ ಸಮ್ಮೇಳನ ನಡೆಯಲಿದೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಯಾಗಬೇಕು ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಎಸ್.ಸಿದ್ದಲಿಂಗಯ್ಯ, ಗೊ. ರು. ಚನ್ನಬಸಪ್ಪ , ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ, ಸಾಹಿತಿ ಚಂಪಾ, ಶೇಷಗಿರಿರಾವ್ ಸೇರಿದಂತೆ ಅನೇಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಮೇರೆಗೆ ಪ್ರತಿಮೆ ಪ್ರತಿಷ್ಠಾಪನೆ ವಿಚಾರವನ್ನು ಸಿದ್ದರಾಮಯ್ಯ ಪರಿಶೀಲನೆಗೆ ತೆಗೆದುಕೊಂಡಿದ್ದಾರೆ.
ಇನ್ನು ಈ ಹಿಂದೆ ಬಿಎಸ್ ಯಡಿಯೂರಪ್ಪ ಸರಕಾರ ಬೆಂಗಳೂರಿನಲ್ಲಿ ನಾಡದೇವತೆ ಪ್ರತಿಮೆ ಸ್ಥಾನಪನೆಗೆ 25 ಕೋಟಿ ಮೀಸಲಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications