ವಕೀಲ ಜಗದೀಶ್ ಪುತ್ರನ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ ಆರೋಪ
ಬೆಂಗಳೂರು, ಫೆ. 11: ವಕೀಲ ಜಗದೀಶ್ ಅವರ ಪುತ್ರ ಮತ್ತು ಆಪ್ತರ ಮೇಲೆ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ.
ಘಟನೆ ಕುರಿತು ಫೇಸ್ಬುಕ್ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ವಕೀಲ ಜಗದೀಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗನಿಗೆ ಏನಾದರೂ ಆದರೆ ನಿಮ್ಮ ಖಾಕಿ ಸಮವಸ್ತ್ರ ಬಿಡಿಸದೇ ಬಿಡಲ್ಲ. ಕೋರ್ಟ್ ಆವರಣದಲ್ಲಿ ಒಬ್ಬ ನ್ಯಾಯವಾದಿ ಮಗನ ಮೇಲೆ ಹಲ್ಲೆ ನಡೆದಿದೆ ಅಂದ್ರೆ ಇದೇನಿದು ಗೂಂಡಾ ರಾಜ್ಯನಾ? ಮೊದಲು ರಾಜೀನಾಮೆ ತೆಗೆದುಕೊಂಡು ಮನೆಗೆ ಹೋಗಿ. ಇಲ್ಲವೇ ನಾನೇ ನಿಮ್ಮ ಸಮವಸ್ತ್ರ ಬಿಚ್ಚಿಸುತ್ತೀನಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ಮೇಲಿನ ಆರೋಪ ಕುರಿತ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ಅರ್ಜಿ ವಿಚಾರಣೆ ಇತ್ತು ಎನ್ನಲಾಗಿದೆ. ಅರ್ಜಿ ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಿದ್ದು ಈ ವೇಳೆ ನ್ಯಾಯಾಲಯದ ಆವರಣದಲ್ಲಿ ವಕೀಲ ಜಗದೀಶ್ ಅವರ ಮಗನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಮಾತ್ರವಲ್ಲ ಜಗದೀಶ್ ಆಪ್ತರ ಮೇಲೂ ಹಲ್ಲೆ ನಡೆದಿದ್ದು, ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Recommended Video
ನನ್ನ ಮಗನ ಮೇಲೆ ಹಲ್ಲೆ ನಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಸಮವಸ್ತ್ರ ಧರಿಸಿದ ಗೂಂಡಾಗಳು. ಮಗನಿಗೆ ಏನಾದ್ರೂ ಆದ್ರೆ ನಾನು ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ನಲವತ್ತು ಜನರ ಮೇಲೆ ಹಲ್ಲೆ ಆಗಿದೆ. ಫುಟೇಜ್ ಇದೆ. ನಾನು ಈ ವಿಚಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇದೇ ವೇಳೆ ಕಿಡಿ ಕಾರಿದ್ದಾರೆ. ಘಟನೆ ಸಂಬಂಧ ಗಾಯಾಳು ಪುತ್ರನ ವೈದ್ಯಕೀಯ ವರದಿ ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications