ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬೆದರಿಕೆ: ನಟ ಮಯೂರ್ ಪಟೇಲ್ ದೂರು
ಬೆಂಗಳೂರು, ಫೆಬ್ರವರಿ 13: ನಿವೇಶನ ವಿಚಾರವಾಗಿ ನಟ ಮೂಯರ್ ಪಟೇಲ್ ಅವರಿಗೆ ಜೀವ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಯೂರ್ ಪಟೇಲ್ ಎಚ್.ಎಸ್. ಆರ್. ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬೇಗೂರು ಬಳಿಯ ಪರಂಗಿಪಾಳ್ಯದಲ್ಲಿರುವ ನಿವೇಶನವನ್ನು ಎಂ.ಎಸ್. ಸುಬ್ರಮಣ್ಯ ಎಂಬುವರಿಂದ ಮಯೂರ್ ಪಟೇಲ್ ಕರೀದಿಸಿದ್ದರು. ಈ ಸಂಬಂಧ ಸುಬ್ರಮಣ್ಯ ಎಂಬುವರಿಂದ ಜಿಪಿಎ ಮಾಡಿಸಿಕೊಂಡಿದ್ದ ಮಯೂರ್ ಪಟೇಲ್ ಕಳೆದ ಜನವರಿ 22 ರಂದು ಗೆಳೆಯರೊಂದಿಗೆ ನಿವೇಶನ ನೋಡಲು ಪರಂಗಿಪಾಳ್ಯಕ್ಕೆ ತೆರಳಿದ್ದರು.
ಮಯೂರ್ ಪಾಟೇಲ್ ಖರೀದಿ ಮಾಡಿದ್ದ ನಿವೇಶನಕ್ಕೆ ಕಾಂಪೌಂಡ್ ಹಾಕಿದ್ದ ಅಪರಿಚಿತರು, ಈ ನಿವೇಶನ ಅನಂತರಾಮರೆಡ್ಡಿ ಹಾಗೂ ಗನ್ ಮಂಜಣ್ಣ ಅವರಿಗೆ ಸೇರಿದ್ದಾಗಿದೆ ಎಂಬ ನಾಮ ಫಲಕ ಹಾಕಿದ್ದರು. ಇದೇ ವೇಳೆ ಅಪರಿಚಿತರು ಕರೆ ಮಾಡಿ, ನೀವು ಇಲ್ಲಿಗೆ ಸುಮ್ಮನೆ ಬರಬೇಡಿ.ಈ ನಿವೇಶನನ ನಿಮ್ಮದಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ನಾಮ ಫಲಕ ಹಾಕಿದ್ದ ಅನಂತರಾಮರೆಡ್ಡಿ ಅವರನ್ನು ಮಯೂರ್ ಪಟೇಲ್ ಸಂಪರ್ಕಿಸಿದ್ದಾರೆ.

ಈ ನಿವೇಶನ ನನಗೆ ಸೇರಿದ್ದು. ಅಲ್ಲಿಗೆ ಯಾರನ್ನೂ ಬಿಡುವುದಿಲ್ಲ. ಈ ಜಾಗ ನನ್ನದು. ನನ್ನ ಮಗನಿಗೆ ದಾನ ಪತ್ರ ಮೂಲಕ ಮಾಡಿಕೊಟ್ಟಿದ್ದೇನೆ. ನೀವು ಆ ಜಾಗಕ್ಕೆ ಬಂದ್ರೆ, ಅಮೇಲೆ ನಾವು ಯಾರು ಎಂದು ಗೊತ್ತಾಗುತ್ತದೆ ಎಂದು ಅನಂತರಾಮರೆಡ್ಡಿ ಹೆದರಿಸಿದ್ದಾರೆ. ಈ ಕುರಿತು ಎಚ್ಎಸ್ಆರ್ ಬಡಾವಣೆ ಪೊಲೀಸರಿಗೆ ದೂರು ನೀಡಿರುವ ಮಯೂರ ಪಟೇಲ್, ನಾನು ಖರೀದಿಸಿರುವ ನಿವೇಶನಕ್ಕೆ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದಾರೆ. ಅಲ್ಲದೇ ಅಲ್ಲಿಗೆ ಕಾಲಿಡದಂತೆ ಜೀವ ಬೆದರಿಕೆ ಹಾಕಿರುವ ಬಗ್ಗೆ ತಿಳಿಸಿದ್ದಾರೆ.

Recommended Video
ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನಂತರಾಮರೆಡ್ಡಿ ಅಸಲಿ ಜಮೀನು ಎಂದು ಸುಳ್ಳು ಹೇಳಿ ಬೆದರಿಕೆ ಹಾಕುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಯೂರ್ ಪಟೇಲ್ ಅನಂತರಾಮರೆಡ್ಡಿ ಮತ್ತು ಮಂಜುನಾಥ ರೆಡ್ಡಿ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications